ಬಳ್ಳಾರಿ:
ದೇಶದ ಆಳ್ವಿಕೆ ಮತ್ತು ನಾಯಕತ್ವ ಬದಲಾವಣೆಗೆ ಈ ಬಾರಿ ಲೋಕಸಭೆ ಚುನಾವಣೆ ನಡೆಯುತ್ತಿದೆ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬಳ್ಳಾರಿ ಲೋಕಸಭೆ ಮೈತ್ರಿ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, ‘ಸಮಾಜದ ಎಲ್ಲ ವರ್ಗದ ಜನರ ರಕ್ಷಣೆ ಅಗತ್ಯ’ ಎಂದು ಅಭಿಪ್ರಾಯಪಟ್ಟರು.
‘ಉಗ್ರಪ್ಪನವರು ತಮಗೆ ಸಿಕ್ಕ ಸಣ್ಣ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ತಮಗೆ ಸಿಕ್ಕ ಒಂದೇ ಒಂದು ಸಂಸತ್ ಅಧಿವೇಶನದಲ್ಲಿ ಬಳ್ಳಾರಿ ಜನತೆಯ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲೂ ಅವರು ತಮ್ಮ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ನಿಮ್ಮ ಗೌರವ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಅವರು ಸೇವೆ ಸಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ನಾನು ಸತತ ಮೂರನೇ ಚುನಾವಣೆಗಾಗಿ ನಾನು ಬಳ್ಳಾರಿ ಜನರ ಮುಂದೆ ಬಂದಿದ್ದೇನೆ. ವಿಧಾನಸಭೆ ಹಾಗೂ ಉಪ ಚುನಾವಣೆ ನಂತರ ಈಗ ಲೋಕಸಭೆ ಚುನಾವಣೆಯಲ್ಲಿ ಮತ ಕೇಳಲು ಬಂದಿದ್ದೇನೆ. ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಹಬ್ಬ ಆಚರಣೆಗೆ ನಮಗಿದು ಸಿಕ್ಕ ಅವಕಾಶ. ಮತದಾರರಿಗೆ ತಮ್ಮ ಮತ ಒಂದು ದೊಡ್ಡ ಅಸ್ತ್ರ. ಇದನ್ನು ಬಹಳ ಜವಾಬ್ದಾರಿಯುತವಾಗಿ ಬಳಸಬೇಕು ಎಂದು ಕರೆ ನೀಡಿದರು.
ಜಿಲ್ಲೆಯ ಅಭಿವೃದ್ಧಿ ಆಗಬೇಕು. ಅದಕ್ಕಾಗಿ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ನಾವು ಶಾಂತಿ ಮೂಲಕ ಒಳ್ಳೆ ಆಡಳಿತ ನೀಡುತ್ತೇವೆ. ಕೇಂದ್ರದಲ್ಲಿ ತಮ್ಮದೇ ಸರ್ಕಾರ ಇದೆ ಎಂದು ಬಿಜೆಪಿಯವರು ಬೇಕಾದರೆ ದುರುಪಯೋಗ ಮಾಡಿಕೊಳ್ಳಲಿ. ನಮಗೆ ಹಣ ಬೇಡ ಜನ ಬೇಕು. ಕಳೆದ ಚುನಾವಣೆಯಲ್ಲಿ ಪಕ್ಷಬೇಧ ಮರೆತು ನಮಗೆ ಸಹಕರಿಸಿದ್ದೀರಿ. ಬಿಜೆಪಿ, ದಳದವರು ಸಹಾಯ ಮಾಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ನಮಗೆ ಹೆಚ್ಚಿನ ಮತ ಕೊಟ್ಟಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/09/DK-Shivakumar-1-1.gif)