ಬೆಂಗಳೂರು:
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ನೇಮಕಗೊಂಡಿದ್ದಾರೆ.
ಮೈತ್ರಿ ಸರಕಾರದ ಪ್ರಾರಂಭದಲ್ಲೆ ಸುಧಾಕರ್ ಅವರಿಗೆ ಈ ಹುದ್ದೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿತ್ತು. ಆದರೆ, ಈ ಜವಾಬ್ದಾರಿ ನಿಭಾಯಿಸಲು ತಜ್ಞರು ಸೂಕ್ತವೆಂಬ ಕಾರಣ ನೀಡಿದ್ದ ಜೆಡಿಎಸ್ ನಾಯಕರು ನಿವೃತ್ತ ಐಎಫ್ಎಸ್ ಅಧಿಕಾರಿ ಸಿ.ಜಯರಾಂ ಅವರನ್ನು ಅಧ್ಯಕ್ಷರಾಗಿ ನೇಮಿಸಿದ್ದರು. ಆದರೆ, ನಿನ್ನೆ ಜಯರಾಂ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಡಾ.ಸುಧಾಕರ್ ನೇಮಕಗೊಳಿಸಿ ಸಿಎಂ ಆದೇಶ ಹೊರಡಿಸಿದ್ದಾರೆ.
ತಜ್ಞರನ್ನಷ್ಟೇ ಮಂಡಳಿಗೆ ನೇಮಕ ಮಾಡಬೇಕು ಎಂಬ ಕಾರಣ ನೀಡಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸುಧಾಕರ್ ನೇಮಕಕ್ಕೆ ಒಪ್ಪಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಸುಧಾಕರ್ ಹಲವು ಬಾರಿ ಸಿಎಂ ಕುಮಾರಸ್ವಾಮಿ ವಿರುದ್ಧವೇ ಹೇಳಿಕೆ ನೀಡಿದ್ದರು. ಬಂಡಾಯ ಸಾರುವ ಸುಳಿವನ್ನೂ ನೀಡಿದ್ದರು. ಇದೀಗ ದೋಸ್ತಿ ಸರಕಾರ ಭದ್ರ ಪಡಿಸಿಕೊಳ್ಳುವ ಭಾಗವಾಗಿ ಸುಧಾಕರ್ ಅವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಟ್ಟ ಕಟ್ಟಲಾಗಿದೆ.
ಸುಧಾಕರ್ ನೇಮಕಕ್ಕೆ ಸಿಎಂ ಕುಮಾರಸ್ವಾಮಿ ಮುದ್ರೆ ಒತ್ತಿದ್ದಾರೆ. ತಮ್ಮ ನೇಮಕವನ್ನು ಟ್ವೀಟ್ ಮೂಲಕ ಖಚಿತ ಪಡಿಸಿರುವ ಸುಧಾಕರ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಜಿ.ಪರಮೇಶ್ವರ ಅವರಿಗೆ ಧನ್ಯವಾದ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/10/K.sudhakar.gif)