ಮೈಸೂರು :
ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ ಆಗಿರುವ ಬಗ್ಗೆ ಆರೋಪ ಕೇಳಿ ನಡುರಾತ್ರಿಯಲ್ಲಿ ಅಬಕಾರಿ ಅಧಿಕಾರಿಗಳು ಬಾರ್ ಮೇಲೆ ದಾಳಿ ಮಾಡಿ ಸ್ಟಾಕ್ ಚೆಕ್ ಮಾಡಿರುವ ಘಟನೆ ನಗರದ ಹಿನಕಲ್ ಬಳಿಯ ರಿಂಗ್ ರಸ್ತೆಯಲ್ಲಿರುವ ಭೂಮಿ ಪುತ್ರ ಬಾರ್ ನಲ್ಲಿ ನಡೆದಿದೆ.
ಮಧ್ಯರಾತ್ರಿ 2.30 ರ ವೇಳೆಯಲ್ಲಿ ಅಬಕಾರಿ ಡಿಸಿ ಮುರುಳಿ ಹಾಗೂ ತಂಡದಿಂದ ದಾಳಿ ನಡೆದಿದ್ದು, ಜಿಲ್ಲಾ ಪಂಚಾಯ್ತಿ ಸದಸ್ಯ ರಾಕೇಶ್ ಪಾಪಣ್ಣ ತಾಯಿ ಸುನಂದಾ ಅವರಿಗೆ ಸೇರಿರುವ ಬಾರ್ ಎನ್ನಲಾಗ್ತಿದೆ.
ಸುಮಾರು 15 ಸಿಬ್ಬಂದಿಯಿಂದ ಸ್ಟಾಕ್ ಚೆಕ್ ನಡೆಯುತ್ತಿದೆ. ಹಿನಕಲ್ ಬಳಿಯ ರಿಂಗ್ ರಸ್ತೆಯಲ್ಲಿರುವ ಭೂಮಿ ಪುತ್ರ ಬಾರ್ ಮೇಲೆ ದಾಳಿ ನಡೆಸಿದ ಡೆಪ್ಯೂಟಿ ಸೂಪರಿಡೆಂಟೆಂಡ್ ಮಹದೇವು, ಇನ್ಸ್ ಪೆಕ್ಟರ್ ಆನಂದ್ ಕುಮಾರ್, ಮಮತಾ, ರೇಂಜ್ ಆಫೀಸರ್ ಕೃಷ್ಣಪ್ಪ, ಲಾಕ್ ಡೌನ್ ವೇಳೆ ಭಾರಿ ಪ್ರಮಾಣದ ಮಧ್ಯ ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಆಧರಿಸಿ ದಾಳಿ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅಬಕಾರಿ ಜಿಲ್ಲಾಧಿಕಾರಿ ಮುರಳಿ ಅವರು, “ಇದು ರೊಟೀನ್ ಚೆಕ್ ಅಪ್ ಆಗಿದ್ದು, ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದರೂ ಸಿಎಲ್ 9 ಲೈಸನ್ಸ್ ಹೊಂದಿರುವ ಬಾರ್ ಅಂಡ್ ರೆಸ್ಟೋರಂಟ್ ಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಆದರೆ ಕೆಲವು ಬಾರ್ ಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ. ಮಾಹಿತಿಯ ಮೇರೆಗೆ ದಾಸ್ತಾನನ್ನು ಪರಿಶೀಲಿಸಲಾಗುತ್ತಿದೆ” ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/05/bar-raid.gif)