ಮಂಗಳೂರು:
ಕೊರೊನಾ ಭೀತಿಯಿಂದ ಸ್ಥಗಿತಗೊಂಡಿದ್ದ ವಿಮಾನಯಾನ ಸೇವೆ ಆರಂಭ ಮಾಡಲು ಕೇಂದ್ರ ವಿಮಾನಯಾನ ಸಚಿವಾಲಯ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಇಂದಿನಿಂದ ಮಂಗಳೂರಿನಿಂದ ದೇಶೀಯ ವಿಮಾನ ಸೇವೆ ಆರಂಭವಾಗಿದೆ.
ಈಗಾಗಲೇ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಪ್ರಯಾಣದ ವೇಳೆ ಏನು ಮಾಡಬೇಕು, ಮಾಡಬಾರದು ಎಂಬ ಬಗ್ಗೆ ಟಿಕೆಟ್ನಲ್ಲೇ ಸಲಹೆ ನೀಡಲಾಗಿದೆ. ರೋಗ ಲಕ್ಷಣಗಳಿಲ್ಲದವರಿಗೆ ಮಾತ್ರ ಪ್ರಯಾಣಿಸಲು ಅವಕಾಶ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು, ಮುಂಬೈ, ಚೆನ್ನೈಗೆ ಸ್ಪೈಸ್ ಜೆಟ್ ಮತ್ತು ಇಂಡಿಗೋ ವಿಮಾನಯಾನ ಸೇವೆ ಆರಂಭಿಸಿವೆ. ಇಂಡಿಗೋದ 3 ವಿಮಾನ ಮುಂಬೈ, ಬೆಂಗಳೂರು, ಚೆನ್ನೈ ಗೆ ಹಾರಲಿದ್ದು, ಸ್ಪೈಸ್ ಜೆಟ್ನ 3 ವಿಮಾನಗಳು ಬೆಂಗಳೂರು, ಮುಂಬೈಗೆ ಪ್ರಯಾಣ ಬೆಳೆಸಲಿವೆ.
ಕೆಲವು ರಾಜ್ಯಗಳ ಆಕ್ಷೇಪಣೆ ನಡುವೆಯೂ ನಾಗರಿಕ ವಿಮಾನಯಾನ ಸಚಿವಾಲಯವನ್ನು ಪ್ರಯಾಣ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ. ಕ್ವಾರಂ ಟೈನ್ ವಿಚಾರದಲ್ಲಿ ಗೊಂದಲಗಳು ಮುಂದುವರಿದಿದ್ದು, ಕೆಲವು ರಾಜ್ಯ ಸರಕಾರಗಳು ತಮ್ಮದೇ ನಿಯಮ ಪಾಲಿಸಲು ಮುಂದಾಗಿವೆ.
ಮಾಸ್ಕ್ ಕಡ್ಡಾಯ, ವಿಮಾನ ನಿಲ್ದಾಣ ಮತ್ತು ವಿಮಾನದ ಒಳಗೆ ಶುಚಿತ್ವ ಕಾಪಾಡಬೇಕು. ಸಾಮಾಜಿಕ ಅಂತರ ಪಾಲನೆ ಮಾಡಲೇಬೇಕು. ಥರ್ಮಲ್ ಸ್ಕ್ರೀನಿಂಗ್ಗೆ ಒಳಗಾಗಬೇಕು. ಈ ವೇಳೆ ರೋಗ ಲಕ್ಷಣಗಳು ಕಂಡು ಬಂದರೆ ಪ್ರಯಾಣಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ. ಹೊರ ಹೋಗುವ ಬಾಗಿಲಲ್ಲೂ ಥರ್ಮಲ್ ಸ್ಕ್ರಿನಿಂಗ್ ವ್ಯವಸ್ಥೆ ಮಾಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೂಚಿಸಿದೆ.
ಪ್ರಯಾಣಿಕರು ಆರೋಗ್ಯ ಸೇತು ಆಯಪ್ ಡೌನ್ಲೋಡ್ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಎಲ್ಲ ನಿಯಮ ಪಾಲಿಸುವುದಾಗಿ ಸ್ವಯಂ ಪ್ರಮಾಣಿತ ಪತ್ರ ಬರೆದುಕೊಡಬೇಕಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
