ಮೈಸೂರು:
ದಸರಾ ಮಹೋತ್ಸವದ ಅಂಗವಾಗಿ ಅಂಬಾವಿಲಾಸ ಅರಮನೆಯಲ್ಲಿ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯ ನಾಳೆ (ಸೆ.18) ನಡೆಯಲಿದೆ.
ಮೈಸೂರು ಅರಮನೆಯ ಸ್ಟ್ರಾಂಗ್ ರೂಂನಲ್ಲಿ ರುವ ರತ್ನ ಖಚಿತ ಸಿಂಹಾಸನವನ್ನು ಬಿಗಿ ಭದ್ರತೆಯಲ್ಲಿ ಹೊರತೆಗೆದು ದರ್ಬಾರ್ ಹಾಲ್ನಲ್ಲಿ ಜೋಡಿಸುವ ಪ್ರಕ್ರಿಯೆ ನಡೆಯಲಿದೆ. ಸೆ.18ರ ಬೆಳಗ್ಗೆ 6.30ರಿಂದ ವಿವಿಧ ಧಾರ್ಮಿಕ ಸೇವಾ ಕಾರ್ಯಗಳು ಆರಂಭವಾಗಲಿದೆ. ಆನಂತರ 8.30ರಿಂದ 12.30ರವರೆಗೆ ದರ್ಬಾರ್ ಹಾಲ್ನಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದೆ. ಪ್ರತಿವರ್ಷದಂತೆ ಅರಮನೆಯ ಸಿಬ್ಬಂದಿ ಹಾಗೂ ಗೆಜ್ಜಹಳ್ಳಿ ಗ್ರಾಮದ ಕುಶಲಕರ್ಮಿಗಳು ಸಿಂಹಾಸನ ಜೋಡಣೆ ನಡೆಸುವರು ಎಂದು ಮೂಲಗಳು ತಿಳಿಸಿವೆ.
ಇನ್ನು ಸೆ.18 ರಂದು ರಾಜಮನೆತನದವರು ಅರಮನೆಯಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದು, ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಪ್ರವಾಸಿಗರಿಗೆ ಅರಮನೆಯ ಒಳ ಆವರಣ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅರಮನೆ ಮಂಡಳಿ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾರಿ ದಸರಾ ಉತ್ಸವ ಅ.17 ರಂದು ಆರಂಭವಾಗಿ, ಅ.26 ರಂದು ಕೊನೆಗೊಳ್ಳಲಿದೆ. ಇದೇ ಅವಧಿಯಲ್ಲಿ ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಖಾಸಗಿ ದರ್ಬಾರ್ ನಡೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
