ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರಸ್ವಾಮಿಯವರ ವಿವಾಹ ಕಾರ್ಯಕ್ರಮ ಈ ಹಿಂದೆ ನಿಶ್ಚಯಿಸಿದಂತೆ ಎಪ್ರಿಲ್ 17ರಂದೇ ನಡೆಯಲಿದೆ.
ಹೌದು, ಪೂರ್ವ ನಿಗದಿಯಂತೆ ಏಪ್ರಿಲ್ 17ರಂದು ಮನೆಯ ಆವರಣದಲ್ಲೇ ನಿಖಿಲ್-ರೇವತಿ ವಿವಾಹ ನೆರವೇರಿಸಲಾಗುವುದು ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರ ನಡುವೆ ಮದುವೆ ಮಾಡಲು ಆಗದು. ಎರಡೂ ಕುಟುಂಬ ಸದಸ್ಯರು ಮಾತ್ರ ಸೇರಿ ಅಂದೇ ಮದುವೆ ಶಾಸ್ತ್ರ ಮುಗಿಸುತ್ತೇವೆ. ಮುಂದೆ ಅವಕಾಶ ಸಿಕ್ಕರೆ ರಾಮನಗರದಲ್ಲಿ ಕಾರ್ಯಕ್ರಮ ಆಯೋಜಿಸುತ್ತೇವೆ’ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಿಖಿಲ್ ಮತ್ತು ರೇವತಿಯವರ ನಿಶ್ಚಿತಾರ್ಥ ಕೆಲವು ತಿಂಗಳ ಹಿಂದೆ ಅದ್ದೂರಿಯಾಗಿ ನಡೆದಿತ್ತು. ನಿಖಿಲ್ ಮದುವೆಯನ್ನು ಚೆನ್ನಪಟ್ಟಣದ ಜಾನಪದ ಲೋಕದಲ್ಲಿ ಅದ್ದೂರಿಯಾಗಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದರು. ನಿಖಿಲ್ ತಾಯಿ ಅನಿತಾ ಕುಮಾರಸ್ವಾಮಿಯವರು ಮಗನ ಮದುವೆ ನಡೆಯುವ ಜಾಗದಲ್ಲಿ ಅದ್ದೂರಿ ಸೆಟ್ ಹಾಕಲು ಗುದ್ದಲಿ ಪೂಜೆಯನ್ನೂ ನೆರವೇರಿಸಿದ್ದರು. ಸುಮಾರು ಎಂಟು ಲಕ್ಷ ಆಹ್ವಾನ ಪತ್ರಿಕೆ ಸಿದ್ದವಾಗಿತ್ತು ಎನ್ನಲಾಗಿದೆ.
ಆದರೆ, ಕೋವಿಡ್-19 ಸೋಂಕಿನ ಹಿನ್ನಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ಸದ್ಯ ಅದೇ ಮುಹೂರ್ತಕ್ಕೆ ಮನೆಯಲ್ಲಿಯೇ ವಿವಾಹ ಕಾರ್ಯಕ್ರಮ ನಡೆಸಲು ನಿಶ್ವಯಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/Nikhil-Kumaraswamy.gif)