ವಿಜಯಪುರ:
ವಿಚ್ಛೇದನ ನೀಡಲು ಒಪ್ಪದ ಹೆಂಡತಿಯನ್ನು ಕೊಲೆಗೈದು ಬಳಿಕ ವಿಡಿಯೋ ಕಾಲ್ ಮೂಲಕ ಆಕೆಯ ಶವವನ್ನು ಮನೆಯವರಿಗೆ ತೋರಿಸಿದ ಆಘಾತಕಾರಿ ಘಟನೆಯೊಂದು ವಿಜಯಪುರದಲ್ಲಿ ನಡೆದಿದೆ.
ಸೋನಾಬಾಯಿ ಮಲ್ಲಿಕಾರ್ಜುನ ಪವಾರ್ (28) ಕೊಲೆಯಾದ ದುರ್ದೈವಿ. ವಿಜಯಪುರ ನಗರದ ಕಾಸಗೇರಿ ಗಲ್ಲಿಯಲ್ಲಿ ಈ ಘಟನೆ ನಡೆದಿದ್ದು ಆರೋಪಿ ಪತಿಯನ್ನು ಮಲ್ಲಿಕಾರ್ಜುನ್ ಎಂದು ಗುರುತಿಸಲಾಗಿದೆ.
ವಿಚ್ಛೇದನ ವಿಷಯವಾಗಿ ಇಬ್ಬರ ನಡುವೆ ಮಾತುಕತೆ ನಡೆದಿದೆ. ಆದರೆ ಹೆಂಡತಿ ಸೋನಾಬಾಯಿ ಗಂಡನಿಗೆ ವಿಚ್ಛೇದನ ಕೊಡಲು ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಗಂಡ ಮಲ್ಲಿಕಾರ್ಜುನ ಪವಾರ ಸುತ್ತಿಗೆಯಿಂದ ತನ್ನ ಹೆಂಡತಿಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.
ಇದಾದ ಬಳಿಕ ಆರೋಪಿ ಇಂದು ಬೆಳಗಿನ ಜಾವ ಸೋನಾಬಾಯಿ ಅಕ್ಕ ನರಸಾಬಾಯಿ ಗಂಡ ತುಕಾರಾಮನಿಗೆ ಮೊಬೈಲ್ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಆತ ಕೊಲೆ ಮಾಡಬೇಡ ಎಂದಾಗ ಸೋನಾಬಾಯಿ ಅಣ್ಣನ ಮಗ ಭೀಮಸಿಂಗ ರಾಠೋಡ್ಗೆ ಮೊಬೈಲ್ ವಿಡಿಯೋ ಕಾಲ್ ಮಾಡಿ ಕೊಲೆ ಮಾಡಿದ ಸ್ಥಳ ಹಾಗೂ ಹೆಂಡತಿಯ ಶವವನ್ನು ತೋರಿಸುವ ಮೂಲಕ ವಿಕೃತಿ ಮೆರೆದಿದ್ದಾನೆ.
ವಿಷಯ ತಿಳಿದ ತಕ್ಷಣ ಸೋನಾಬಾಯಿ ಅಣ್ಣ, ಅಕ್ಕ, ಭಾವ, ಅಳಿಯ ವಿಜಯಪುರಕ್ಕೆ ದೌಡಾಯಿಸಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿಯು ಹೊಸ ಹಾಸಿಗೆ ಹಾಸಿ, ಚಾದರ ಹೊದಿಸಿ, ಹಾರ ಹಾಕಿ ಪಕ್ಕದಲ್ಲಿಯೇ ಕುಳಿತಿದ್ದ ಎನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿದ ವಿಜಯಪುರ ನಗರದ ಗಾಂಧಿಚೌಕ್ ಪೊಲೀಸರು, ಆರೋಪಿ ಮಲ್ಲಿಕಾರ್ಜುನನನ್ನು ಬಂಧಿಸಿದ್ದಾರೆ. ಈ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/10/murder1.jpg)