ಸಲ್ಲದ ಸುದ್ದಿಗಳಿಗೆ ಹೆಚ್ಚು ಪ್ರಚಾರ ಸಿಗುತ್ತಿದೆ: ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು

ದಾವಣಗೆರೆ

      ವಾಸ್ತವಾಂಶ ಮರೆಮಾಚಿ ಪ್ರಕಟಿಸುವ ಸುದ್ದಿಗಳೇ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಸಲ್ಲದ ಸುದ್ದಿಗಳಿಗೆ ಹೆಚ್ಚು ಪ್ರಚಾರ ಸಿಗುತ್ತಿದೆ ಎಂದು ಕಾಗಿನೆಲೆ ಮಹಾಸಂಸ್ಥಾನದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.

        ದಾವಣಗೆರೆಯ ರೋಟರಿ ಬಾಲಭವನದಲ್ಲಿ ಆಯೋಜಿಸಿದ್ದ ಪ್ರಜಾಪ್ರಗತಿ ಪ್ರಾದೇಶಿಕ ದಿನಪತ್ರಿಕೆಯ ದಾವಣಗೆರೆ ಆವೃತ್ತಿಯ 15ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪತ್ರಿಕೆಯಲ್ಲಿ ಒಳ್ಳೆಯದನ್ನು ಹಾಗೂ ಕೆಟ್ಟದ್ದನ್ನು ಬರೆಯಲು ಅವಕಾಶ ಇದೆ. ಆದರೆ ಯಾವುದೇ ಸುದ್ದಿ ಪ್ರಕಟ ಮಾಡುವುದಕ್ಕಿಂತ ಮುಂಚೆ ಆ ಬಗ್ಗೆ ಒಂದಿಷ್ಟು ಯೋಚನೆ ಇರಲಿ ಎಂದು ಎಚ್ಚರಿಸಿದರು.

        ಸಮಾಜವನ್ನು ತಿದ್ದುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಈ ವಿಷಯದಲ್ಲಿ ಯಾವುದೇ ಆತ್ಮವಂಚನೆ ಬೇಡ. ಸಮಾಜ ದಾರಿತಪ್ಪಿದಾಗ ಹಾಗೂ ಆಡಳಿತ ಎಚ್ಚರ ತಪ್ಪಿದಾಗ ಅಂತಹವರನ್ನು ಎಚ್ಚರಿಸುವ ಕ್ರಿಯೆ ಆಗಬೇಕು. ಅಂತಹ ಕೆಲಸವನ್ನು ಪ್ರಜಾಪ್ರಗತಿಯ ಎಸ್.ನಾಗಣ್ಣ ಅವರು ಸಮರ್ಥವಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. ನಿಷ್ಠೂರುತೆಗೆ ಮತ್ತೊಂದು ಹೆಸರೇ ನಾಗಣ್ಣನವರು. ಇವರಿಗೆ ಜಾತಿಯ ಅವಶ್ಯಕತೆಯಿಲ್ಲ. ಜಾತಿಯತೆ ಮೀರಿ ಅವರು ಬೆಳೆದಿದ್ದಾರೆ. ಇದು ಅತ್ಯಂತ ಹೆಮ್ಮೆ ತರುವ ವಿಷಯ. ಪ್ರತಿಭೆಗಳು ಜಾತಿಗೆ ಸೀಮಿತವಾಗಬಾರದು. ಆದರೆ ಸಮಾಜದಲ್ಲಿ ಪ್ರತಿಭೆಗಳಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಸದಾ ಸಿಗಬೇಕು ಎಂದರು.

        ದಾವಣಗೆರೆಯ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ ಈ ದೇಶಕ್ಕೆ ಅನೇಕ ಪತ್ರಿಕೆಗಳು ತನ್ನದೇ ಆದ ಕೊಡುಗೆ ನೀಡಿವೆ. ಈಗಲೂ ನೀಡುತ್ತಿವೆ. ಉತ್ತಮ ಪತ್ರಿಕೆಗಳನ್ನು ಕೊಂಡು ಓದುವಂತಹ ಓದುಗರ ಸಂಖ್ಯೆ ಹೆಚ್ಚಬೇಕು. ಪ್ರಜಾಪ್ರಗತಿ ದಿನಪತ್ರಿಕೆ ಅಂತಹ ಒಂದು ಉತ್ತಮ ಸ್ಥಾನದಲ್ಲಿದೆ. ಜಾತ್ಯತೀತವಾಗಿ ಈ ಪತ್ರಿಕೆ ಬೆಳೆದಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಸುದ್ದಿಗಳು ಗುಣಾತ್ಮಕವಾಗಿ ಇರುವಂತೆಯೇ ಕಲರ್ ಪುಟಗಳಲ್ಲಿ ಪತ್ರಿಕೆ ಮುದ್ರಣವಾಗುತ್ತಿರುವುದು ನೋಡಲಿಕ್ಕೆ ಅಂದವಾಗಿಯೂ ಕಾಣುತ್ತದೆ.

         ಸ್ಥಳೀಯ ಸಮಸ್ಯೆಗಳನ್ನು ಹೆಚ್ಚು ಪ್ರಕಟಿಸುವುದೇ ಸ್ಥಳೀಯ ಪತ್ರಿಕೆಗಳು ಎಂಬುದನ್ನು ಯಾರೂ ಮರೆಯುವಂತಿಲ್ಲ ಎಂದರು.
ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಸಮಾಜದಲ್ಲಿ ಪತ್ರಿಕೆಗಳ ಪಾತ್ರ ಪರಿಣಾಮಕಾರಿಯಾಗುವುದರಿಂದ ಅವುಗಳ ಜವಬ್ದಾರಿಯೂ ಹೆಚ್ಚಿರಬೇಕು. ಬರೆಯುವ ಮುನ್ನ ಸ್ಪಷ್ಠತೆಯಿರಬೇಕು. ನಿಖರವಲ್ಲದ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದರೆ ಅದರಿಂದ ಯಾರಿಗೆ ಎಷ್ಟು ನೋವಾಗುತ್ತದೆ ಎಂಬುದನ್ನು ತನ್ನದೇ ಒಂದು ಉದಾಹರಣೆ ಮೂಲಕ ವಿವರಿಸಿದರು. ಪತ್ರಿಕೆಗಳು ನಕಾರಾತ್ಮಕ ಚಿಂತನೆಗಳ ಕಡೆಗೆ ಗಮನಹರಿಸದೆ ಸಕಾರಾತ್ಮಕ ಚಿಂತನೆಗಳಿಗೆ ಹೆಚ್ಚು ಗಮನ ಕೊಡಬೇಕು ಎಂದರು.

        ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜು ಮಾತನಾಡಿ, ಅತ್ಯಂತ ಕಷ್ಟಕರ ಬದುಕನ್ನು ನಡೆಸಿ ಪತ್ರಿಕೆಯನ್ನು ಈ ಮಟ್ಟಕ್ಕೆ ತಂದಿರುವ ಎಸ್.ನಾಗಣ್ಣ ಅವರ ಸೇವೆ ಮತ್ತು ಸಾಧನೆಯನ್ನು ನಾವೆಲ್ಲ ಸದಾ ಕಾಲ ಸ್ಮರಿಸಿಕೊಳ್ಳಬೇಕು. ಶ್ರೀಗಳ ಆಶೀರ್ವಾದ ಅವರಿಗೆ ಸದಾ ಇತ್ತು. ನಾಗಣ್ಣನವರು ಜನಮುಖಿಯಾಗಿಯೇ ಪತ್ರಿಕೆಯನ್ನು ಬೆಳೆಸಿಕೊಂಡು ಬಂದರು. ಇಂದಿಗೂ ಸಹ ಈ ಪತ್ರಿಕೆ ಎಲ್ಲ ಕಡೆಯೂ ಸೆಕ್ಯುಲರ್ ಪತ್ರಿಕೆಯಾಗಿ ಎಲ್ಲರೂ ಓದಬಹುದಾದಂತಹ ಅಭಿರುಚಿಗೆ ಪಾತ್ರರಾಗಿರುವುದು ಅತ್ಯಂತ ಹೆಮ್ಮೆ ತರಿಸಿದೆ ಎಂದರು.

         ಸಮಾರಂಭದ ಅಧ್ಯಕ್ಷತೆಯನ್ನು ಮಿಲ್ಲತ್ ವಿದ್ಯಾ ಸಂಸ್ಥೆ ಗೌರವ ಕಾರ್ಯದರ್ಶಿ ಸಯ್ಯದ್ ಸೈಫುಲ್ಲಾ ಸಾಬ್ ವಹಿಸಿದ್ದರು. ಮಾಧ್ಯಮ ಅಕಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಎಚ್.ಬಿ.ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಾವು ಅಭಿವೃದ್ಧಿ ಮಂಡಳಿ ಮಾಜಿ ಉಪಾಧ್ಯಕ್ಷ ಪಿ.ರಾಜಕುಮಾರ್, ಪ್ರಜಾಪ್ರಗತಿ ಸಹ ಸಂಪಾದಕ ಟಿ.ಎನ್.ಮಧುಕರ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು. ಇಪ್ಟ ಕಲಾವಿದರು ಜಾಗೃತಿ ಗೀತೆಗಳನ್ನು ಹಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap