ಕೊರಟಗೆರೆ :
ಮೀಟರ್ ಬಡ್ಡಿ ಕಿರುಕುಳ ತಾಳಲಾರದೆ ರೈತನೋರ್ವ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ತಾಲ್ಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ತಾಲ್ಲೂಕಿನ ಇರಕಸಂದ್ರ ಕಾಲನಿ ಬಳಿಯ ಅಳಾಲಸಂದ್ರದ ಮಹಿಮರಾಯಪ್ಪನ ಮಗ ಶಿವಣ್ಣ (58) ಎಂಬ ರೈತನೆ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಈತ ಅಳಾಲಸಂದ್ರ ಸಮೀಪದ ಹುಳಿಸೊಪ್ಪಿನಹಳ್ಳಿ ಬಳಿ ಭೋಗ್ಯಕ್ಕೆ ಜಮೀನು ಉಳುಮೆ ಮಾಡುತ್ತಿದ್ದರು. ಇವರು ಖಾಸಗಿ ಜಮೀನೊಂದರ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಶಿವಣ್ಣ ತಮ್ಮ ಸಾವಿಗೆ ಸಾಲಗಾರರ ಕಿರುಕುಳವೇ ಕಾರಣ. ಕೊಟ್ಟ ಹಣಕ್ಕಿಂತ ಹತ್ತು ಪಟ್ಟಿಗೂ ಹೆಚ್ಚು ಬಡ್ಡಿ ಕಟ್ಟಿದ್ದರೂ ಪ್ರತಿ ತಿಂಗಳ ಬಡ್ಡಿ ಹಣಕ್ಕೆ ಅಶ್ಲೀಲ ಪದ ಬಳಸುತ್ತಿದ್ದರು. ಅದನ್ನು ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ. ನನ್ನ ಹೆಂಡತಿ ನರಸಮ್ಮ, ಮಗ ಶಿವಕುಮಾರ್ ಹಾಗೂ ಸೊಸೆ, ಮೊಮ್ಮಕ್ಕಳಿಗೆ ರಕ್ಷಣೆ ನೀಡಿ. ಕುಟುಂಬವನ್ನು ಋಣಭಾರ ಮುಕ್ತಗೊಳಿಸಿ. ನÀÀನ್ನ ಆಸ್ತಿಯನ್ನು ವಾಪಾಸ್ಸು ಬಿಡಿಸಿಕೊಡಿ. ನನ್ನ ಸಾವಿಗೆ ಕಾರಣರಾದವರಿಗೆ ಕಾನೂನು ವ್ಯಾಪ್ತಿಯಲ್ಲಿ ಶಿಕ್ಷೆ ನೀಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಡಿಸಿಎಂ ಡಾ ಜಿ.ಪರಮೇಶ್ವರ್, ಎಸ್ಪಿ ದಿವ್ಯಾಗೋಪಿನಾಥ್, ಅಡಿಷನಲ್ಎಸ್ಪಿ ಶೋಭಾರಾಣಿ, ಪಿಎಸ್ಐ ಸಂತೋಷ್ಕುಮಾರ್ಗೆ ಡೆತ್ನೋಟ್ ಪೋಸ್ಟ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಮೃತ ರೈತ ಶಿವಣ್ಣ ತನ್ನ ಸಾಲಬಾಧೆ ಕುರಿತು ಡೆತ್ನೋಟಲ್ಲಿ ಅಳಲು ತೋಡಿಕೊಳ್ಳುತ್ತಾ, ಜಿ ನಾಗೇನಹಳ್ಳಿಯ ಸಿದ್ದಪ್ಪಾಜಿ ಅಲಿಯಾಸ್ ಸಿದ್ದಪ್ಪ (ಸ್ಕೂಲ್ ಮಾಸ್ಟರ್ ಚಿಕ್ಕನಹಳ್ಳಿ, ಶಿರಾ.) ಎಂಬುವರು ಹಾಗೂ ಸ್ವಂತ ತಮ್ಮನಾದ ಕೃಷ್ಣಪ್ಪ ಎಂಬುವರಿಂದ ಹಣಕಾಸು ವ್ಯವಹಾರದಲ್ಲಿ ಕಿರುಕುಳ ಅನುಭವಿಸಿ, ಜಮೀನಿನಲ್ಲಿ ಸಮರ್ಪಕವಾಗಿ ಬೆಳೆಯಾಗದೆ ನಷ್ಟ ಅನುಭವಿಸಿ ಸಾಲ ತೀರಿಸಲು ದಿಕ್ಕು ಕಾಣದೆ ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಡೆತ್ನೋಟಲ್ಲಿ ನೋವು ತೋಡಿಕೊಂಡಿದ್ದಾರೆ.
ಶಿವಣ್ಣ ಸಾಲ ಬಾಧೆ ವಿವರಣೆಯಲ್ಲಿ ಸ್ಕೂಲ್ ಮಾಸ್ಟರ್ ಸಿದ್ದಯ್ಯನಿಂದ ಪ್ರಾರಂಭದಲ್ಲಿ 3 ರೂ. ಬಡ್ಡಿಯಂತೆ 2 ಲಕ್ಷ ರೂ. ಸಾಲ ಪಡೆದು ಪ್ರತಿ ತಿಂಗಳು 6,000 ರೂ. ಬಡ್ಡಿ ಕಟ್ಟುತ್ತಿದ್ದರು. ನಂತರ 6900 ರೂ. ಬಡ್ಡಿಯಂತೆ ಐದು ವರ್ಷಕ್ಕೆ 5 ಲಕ್ಷಕ್ಕೂ ಹೆಚ್ಚು ಬಡ್ಡಿ ಕಟ್ಟಿದ್ದಾರೆ. ನಂತರ ಪ್ರತಿ ತಿಂಗಳು 10,300 ರೂ. ಬಡ್ಡಿ ಕಟ್ಟಿದರೂ ಅಂತಿಮವಾಗಿ 15 ಲಕ್ಷ ರೂ. ಬಡ್ಡಿ ಹಾಗೂ ಅಸಲು ಹಣ ನೀಡುವಂತೆ ಶಿಕ್ಷಕ ಶಿವಣ್ಣನಿಂದ ತೀವ್ರ ಒತ್ತಡವಾದ ಕಾರಣ ಹಾಗೂ ತಮ್ಮನಾದ ಕೃಷ್ಣಪ್ಪನಿಂದ ಹಣಕಾಸು ವ್ಯವಹಾರದಲ್ಲಿ ಮೋಸವಾಗಿ ಹಣದ ಹೊರೆ ತಾಳಲಾರದೆ, ಜೊತೆಗೆ ಸಮರ್ಪಕ ಮಳೆಯಾಗದ ಕಾರಣ ಬಿತ್ತಿದ ಬೆಳೆ ಸಹ ಕೈಗೆ ಸಿಗದೆ ದಿಕ್ಕು ಕಾಣದ ಸ್ಥಿತಿಯಲ್ಲಿ ಶಿವಣ್ಣ ಡೆತ್ನೋಟ್ ಬರೆದು ಅನಿವಾರ್ಯವಾಗಿ ಒತ್ತಡದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂಧ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಸಂತೋಷ್ಕುಮಾರ್ ಸ್ಥಳ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
