ಮಂಡ್ಯ:
ಗೂಡ್ಸ್ ಟೆಂಪೋ ಮತ್ತು ಟಾಟಾ ಸುಮೋ ನಡುವೆ ಮುಖಾಮುಖಿ ಡಿಕ್ಕಿಯಾಗಿ 8 ಮಂದಿ ಮೃತಪಟ್ಟಿರುವ ಭೀಕರ ಘಟನೆ ನಾಗಮಂಗಲ ತಾಲ್ಲೂಕಿನ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ರಾಮದೇವನಹಳ್ಳಿ ಸಮೀಪ ಕಳೆದ ರಾತ್ರಿ ಸಂಭವಿಸಿದೆ.
ಬಾಕರ್ ಷರೀಫ್ ಬಿನ್ ಇಸ್ಮಾಯಿಲ್ ಷರೀಫ್ (50), ತಾಹೀರ್ ಬಿನ್ ಸುಲ್ತಾನ್ ಷರೀಫ್(30), ನೌಷದ್ ಬಿನ್ ಮಕ್ಬೂಲ್ ಪಾಷ(45), ಹಸೀನ್ ತಾಜ್ ಕೋಂ ಖಲೀಂ(50), ಮೆಹಬೂಬ್ ಜಾನ್ ಬಿನ್ ದಸ್ತರ್ ಖಾನ್(50), ಮಕ್ಸೂದ್ ಬಿನ್ ಮಹಮ್ಮದ್(25), ಸಾಯದಾ(35) ಮತ್ತು ಅಕ್ಬರ್ ಆಲಿ(40) ಮೃತ ದುರ್ದೈವಿಗಳು.
ವಾಹನ ಹಿಂದಿಕ್ಕುವ ಭರದಲ್ಲಿ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಟಾಟಾ ಸುಮೋ ಅರ್ಧ ಭಾಗ ಛಿದ್ರ ಛಿದ್ರವಾಗಿದೆ. 6 ಮಂದಿ ಸ್ಥಳದಲ್ಲಿಯೇ ಸಾವನ್ನಿದ್ದರೆ, ಸಾಹಿದಾ ಮತ್ತು ಅಕ್ಬರ ಅಲಿ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಅಲ್ಲದೇ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ತಾಲ್ಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಘಟನೆಯಲ್ಲಿ ಜಖಂಗೊಂಡಿದ್ದ ಎರಡೂ ವಾಹನಗಳನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
