ಮೈಸೂರು:
ಮೈಸೂರು ಅರಮನೆಯಲ್ಲಿ ಸಾಕಾನೆಯನ್ನು ಮುನ್ನಡೆಸುವ ವೇಳೆ ತಲೆ ತಿರುಗಿ ಬಿದ್ದು ಮಾವುತ ಸಾವನ್ನಪ್ಪಿರುವ ಘಟನೆ ಅರಮನೆಯ ಬ್ರಹ್ಮಪುರಿ ಗೇಟ್ ಬಳಿ ಸೋಮವಾರ ಸಂಜೆ ನಡೆದಿದೆ.
ಎಚ್ ಡಿ ಕೋಟೆ ತಾಲ್ಲೂಕಿನ ಬಳ್ಳೆ ಹಾಡಿಯ ನಿವಾಸಿ ಮಾವುತ ಕಾಳಪ್ಪ(52) ಮೃತ ದುರ್ದೈವಿ. ತಮಗೆ ಅನಾರೋಗ್ಯ ಇದ್ದರೂ ಸಹ ಆನೆಯನ್ನು ಎಂದಿನಂತೆ ಮುನ್ನಡೆಸಲು ಬೆನ್ನ ಮೇಲೆ ಏರಿದ್ದಾರೆ. ಆದರೆ ಆನೆ ಚಲಿಸುತ್ತಿದ್ದಾಗ ತಲೆ ತಿರುಗಿ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರವಾಗಿ ಗಾಯವಾಗಿದೆ.
ಆನೆ ಸ್ಥಳದಲ್ಲಿಯೇ ಕದಲದೆ ನಿಂತಿದ್ದ ದೃಶ್ಯವನ್ನು ಗಮನಿಸಿದ ಬೇರೆ ಮಾವುತರು ಬಂದು, ಆನೆಯನ್ನು ಕಟ್ಟಿಹಾಕಿ ಕೆಳಗೆ ಬಿದ್ದಿದ್ದ ಮಾವುತ ಕಾಳಪ್ಪನನ್ನು ಕೂಡಲೇ ಕೆ.ಆರ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮೃತ ಮಾವುತ ಕಾಳಪ್ಪ ಸುಮಾರು 20 ವರ್ಷಗಳಿಂದ ಅರಮನೆಯಲ್ಲಿರುವ ರೂಬಿ ಆನೆಯನ್ನು ನೋಡಿಕೊಳ್ಳುತ್ತಿದ್ದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಕೆ.ಆರ್.ಆಸ್ಪತ್ರಯ ಶವಾಗಾರದಲ್ಲಿ ಕಾಳಪ್ಪನ ಶವ ಪರೀಕ್ಷೆ ನಡೆದದ್ದು, ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಅರಮನೆ ಅಧೀಕ್ಷಕ ನೀಡಿದ ದೂರಿನನ್ವಯ ದೇವರಾಜ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ