ಮಂಗಳೂರು :
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಿಂಧೂ ಬಿ. ರೂಪೇಶ್ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪಿಯನ್ನು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ತೆಂಕಮಿಜಾರು ನಿವಾಸಿ ರಂಜಿತ್(25) ಬಂಧಿತ ಆರೋಪಿ. ಆರೋಪಿಯು ನೇರವಾಗಿ ಜಿಲ್ಲಾಧಿಕಾರಿಯ ಹತ್ಯೆಯ ಬೆದರಿಕೆಯೊಡ್ಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಅಕ್ರಮ ಗೋ ಸಾಗಣೆ ಮಾಡುವವರ ಮೇಲೆ ಹಲ್ಲೆ ನಡೆಸುವವರು ಹಾಗೂ ವಾಹನ ಜಖಂ ಮಾಡುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜು.27ರಂದು ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಎಚ್ಚರಿಕೆ ನೀಡಿದ್ದರು. ಡಿಸಿ ಎಚ್ಚರಿಕೆ ಬೆನ್ನಲ್ಲೇ ಸಿಂಧೂ ಬಿ.ರೂಪೇಶ್ಗೆ ವಾಟ್ಸ್ಆಯಪ್ ಗ್ರೂಪ್ ಒಂದರಲ್ಲಿ ಚರ್ಚೆ ನಡೆದ ಸಂದರ್ಭದಲ್ಲಿ ಆರೋಪಿ ರಂಜಿತ್ ಜಿಲ್ಲಾಧಿಕಾರಿಯನ್ನೇ ಮೊದಲು ಕಡಿದು ಕೊಲ್ಲಬೇಕು ಎಂದು ಅಹಿತಕರ ಹೇಳಿಕೆ ನೀಡಿದ್ದ.
ಈ ಬಗ್ಗೆ ಜಿಲ್ಲಾಧಿಕಾರಿಯವರು ದೂರ ದಾಖಲಿಸದಿದ್ದರೂ, ಪೊಲೀಸರೇ ಸ್ವಯಂ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಇದೀಗ ಮೂಡುಬಿದಿರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ನಡುವೆ ಸಿಂಧೂ ರೂಪೇಶ್ ಅವರನ್ನು ಮಂಗಳವಾರ ದಿಢೀರ್ ವರ್ಗಾವಣೆಗೊಳಿಸಲಾಗಿತ್ತು. ಸರ್ಕಾರದ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/07/B-sindhu.jpg)