ಶಿವಮೊಗ್ಗ:
ನಗರದ ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗದ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಡಿ. 22ರಿಂದ ಮಾರುತಿ ಓಮ್ನಿ ಕಾರೊಂದು ನಿಂತಿತ್ತು. ಸಾಮಾನ್ಯವಾಗಿ ಸುತ್ತಮುತ್ತಲಿನವರು ಅಥವಾ ಪ್ರಯಾಣಿಕರು ಅಲ್ಲಿ ಕಾರು ನಿಲ್ಲಿಸಿ ಹೋಗುವುದರಿಂದ ಯಾರೂ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ರೈಲ್ವೆ ಸ್ಟೇಷನ್ನ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಮಾರುತಿ ಓಮ್ನಿ ಕಾರನ್ನು 10 ದಿನಗಳಾದರೂ ಯಾರೂ ತೆಗೆದುಕೊಂಡು ಹೋಗಿರಲಿಲ್ಲ. ನಂತರ ಕಾರಿನಿಂದ ಗಬ್ಬುವಾಸನೆ ಬರತೊಡಗಿತ್ತು. ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಕಾರಿನೊಳಗೆ ಕೊಳೆತ ಸ್ಥಿತಿಯಲ್ಲಿದ್ದ ಮಹಿಳೆಯ ಶವ ಪತ್ತೆಯಾಗಿದೆ.
ಪಾರ್ಕಿಂಗ್ ಜಾಗದ ಸೆಕ್ಯುರಿಟಿಗೆ ಕೆಲವು ದಿನಗಳಿಂದ ಕೊಳೆತ ವಾಸನೆ ಬರುತ್ತಿದ್ದುದರಿಂದ ಸುತ್ತಮುತ್ತಲ ಜಾಗದಲ್ಲಿ ಯಾವುದಾದರೂ ಪ್ರಾಣಿ ಸತ್ತಿದೆಯೇ? ಎಂದು ಹುಡುಕಲಾಗಿತ್ತು. ಆದರೆ, ಏನೂ ಪತ್ತೆಯಾಗಿರಲಿಲ್ಲ. 2 ದಿನಗಳಿಂದ ಕಾರಿನ ಕಡೆಯಿಂದ ಕೊಳೆತ ವಾಸನೆ ಹೆಚ್ಚಾಗಿ ಬರುತ್ತಿದ್ದುದರಿಂದ ಅನುಮಾನಗೊಂಡ ಪಾರ್ಕಿಂಗ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದರು.
ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾಕ್ ಆಗಿದ್ದ ಕಾರಿನ ಲಾಕ್ ತೆಗೆಸಿ ಒಳಗೆ ನೋಡಿದಾಗ ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿಡಲಾಗಿದ್ದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/dead-hyderabad-engineer-wife-body-generic_650x400_51522752910.gif)