ಮೈಸೂರು:
ಅ.10ರಿಂದ ವಿಶ್ವ ವಿಖ್ಯಾತ ದಸರಾ ಪ್ರಾರಂಭವಾಗುತ್ತಿದ್ದು ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಡ್ರೋಣ್ ಮೂಲಕ ಹೆಚ್ಚಿನ ಕಣ್ಗಾವಲು ಇಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಮಾಹಿತಿ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಸರಾ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯಿಂದ ಸಕಲ ಸಿದ್ಧತೆ ಮಾಡಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಘಟಕಕ್ಕೆ ಸರ್ಕಾರದಿಂದ ವಿತರಣೆಯಾಗಿರುವ, ಹಲವು ವಿಶೇಷತೆಗಳಿಂದ ಕೂಡಿರುವ 2.5 ಕೋಟಿ ರೂ. ಮೌಲ್ಯದ ಮೊಬೈಲ್ ಕಮಾಂಡ್ ಸೆಂಟರ್ ಬಸ್ ಅನ್ನು ಈ ಬಾರಿ ಬಳಕೆ ಮಾಡಿಕೊಳ್ಳಲಾಗುತ್ತದೆ. 5,284 ಸಿವಿಲ್, ಟ್ರಾಫಿಕ್ ಪೊಲೀಸ್ ಅಧಿಕಾರಿಗಳು, 1600 ಹೋಂಗಾರ್ಡ್ ಸಿಬ್ಬಂದಿ, KSRP, CAR, DAR ಸೇರಿ 57 ತುಕಡಿ, 46 ಭದ್ರತಾ ತಪಾಸಣಾ ಪಡೆಗಳು, ವಿಐಪಿ ಭದ್ರತೆ, ಕಮಾಂಡೋ ಪಡೆ, ಬಾಂಬ್ ನಿಷ್ಕ್ರಿಯ ದಳ, ಮೊಬೈಲ್ ಕಮಾಂಡ್ ಸೆಂಟರ್ ವಾಹನಗಳ ಬಳಕೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಮೇ ಐ ಹೆಲ್ಪ್ ಯು:
ಪೊಲೀಸರಿಗೆ ಮೇ ಐ ಹೆಲ್ಪ್ ಯು ಎಂಬ ಟ್ಯಾಗ್ ಕೊಟ್ಟಿದ್ದು, ನಾನು ನಿನ್ನ ಮಿತ್ರ ಎಂಬ ಹೆಸರಿನಡಿಯಲ್ಲಿ ಪ್ರವಾಸಿಗರಿಗೆ ಸಹಾಯ ಮಾಡಲಾಗುವುದು. ಪಾರ್ಕಿಂಗ್ ಹಾಗೂ ಬದಲಿ ರಸ್ತೆ ಮಾರ್ಗಕ್ಕೆ ಸಾಮಾಜಿಕ ಜಾಲತಾಣ ಬಳಕೆ ಮಾಡಿಕೊಳ್ಳಲಾಗುವುದು. ಮೈಸೂರಿನಾದ್ಯಂತ ಒಟ್ಟು 40 ಹೆಲ್ಪ್ ಡೆಸ್ಕ್ ಅಳವಡಿಸಲಾಗಿದೆ.
ವಿಐಪಿ ಭದ್ರತೆ:
ವಿಐಪಿ ಭದ್ರತಾ ದೃಷ್ಠಿಯಿಂದ ಹೊರಗಡೆಯಿಂದ ಎಸ್ಪಿ , ಡಿಸಿಪಿ ಸೇರಿ ಒಟ್ಟು 75 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಕಮಾಂಡೋ ಪಡೆಗಳು, ಬಾಂಬ್ ನಿಷ್ಕ್ರಿಯ ದಳಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ವಾಹನ ಸಂಚಾರ :
ವಾಹನದಟ್ಟಣೆಯಾಗುವ ನಿಮಿತ್ತ ಸಂಚಾರದ ಬದಲಿ ಮಾರ್ಗವನ್ನು ಪೊಲೀಸ್ ಇಲಾಖೆ ಸೂಚಿಸಿದೆ. ಅರಮನೆ ಸುತ್ತ, ನ್ಯೂ ಸಯ್ಯಾಜಿ ರಾವ್ ರಸ್ತೆ, ಬಿಎಂ ರಸ್ತೆ, ತ್ಯಾಗರಾಜ ರಸ್ತೆಗಳಲ್ಲಿ ಒನ್ ವೇ ಮಾಡಿ ಸಂಚಾರಕ್ಕೆ ಅವಕಾಶ ಕೊಡಲಾಗಿದೆ. ಜಂಬೂ ಸವಾರಿ ಹಾಗೂ ಹಿಂದಿನ ದಿನ ಗ್ರಾಮಾಂತರ ಪ್ರಯಾಣಿಕರಿಗೆ ನಗರದ ಹೊರಭಾಗದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ