ಕಾರು ಅಪಘಾತ ಪ್ರಕರಣ : ನಲಪಾಡ್ ಗೆ ಜಾಮೀನು!!

 ಬೆಂಗಳೂರು :

      ಮೇಖ್ರಿ ಸರ್ಕಲ್ ಬಳಿ ಸಂಭವಿಸಿದ ಬೆಂಟ್ಲಿ ಕಾರು ಅಪಘಾತ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮೊಹಮ್ಮದ್ ನಲಪಾಡ್ ಅವರನ್ನು ಬಂಧಿಸಿ, ಕೂಡಲೇ ವಿಶೇಷ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ತಿಳಿಸಿದರು.

      ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಹ್ಮದ್ ನಲಪಾಡ್ ಅವರಿಗೆ ಅಪಘಾತ ಪ್ರಕರಣದ ಸ್ಪಷ್ಟೀಕರಣ ನೀಡಬೇಕೆಂದು ಪೊಲೀಸರು ನೋಟೀಸ್ ನೀಡಿದ ಹಿನ್ನೆಲೆಯಲ್ಲಿ ವಿಚಾರಣೆಗೆಂದು ನಲಪಾಡ್ ಅವರು ಠಾಣೆಗೆ ಬಂದಾಗ ಅವರ ಬಂಧಿಸಿ,
ಬಳಿಕ ಕೂಡಲೇ ಅವರಿಗೆ ವಿಶೇಷ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದರು.

      ಸದಾಶಿನಗರ ಠಾಣೆ ಇನ್ಸ್​ಪೆಕ್ಟರ್ ನಾಗರಾಜು ಅವರು ನಲಪಾಡ್ ಅವರಿಂದ ಬಾಂಡ್ ಬರೆಸಿಕೊಂಡು ವಿಶೇಷ ಜಾಮೀನು ನೀಡಿದ್ದಾರೆ ಎಂದು ಅವರು ತಿಳಿಸಿದರು.

      ಫೆ.9ರಂದು ಮೇಖ್ರಿ ಸರ್ಕಲ್​ನ ಅಂಡರ್​ಪಾಸ್​ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಐಷಾರಾಮಿ ಬೆಂಟ್ಲಿ ಕಾರು ಮೂರು ವಾಹನಗಳಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಪ್ರಫುಲ್ ಎಂಬಾತ ಕಾಲಿನ ಮೂಳೆ ಮುರಿತವಾಗಿತ್ತು. ಅಲ್ಲದೇ, ಆಟೋವೊಂದು ಜಖಂಗೊಂಡಿತ್ತು. ಘಟನಾ ಸ್ಥಳದಿಂದ ಚಾಲಕ ಪರಾರಿಯಾದ ಹಿನ್ನಲೆಯಲ್ಲಿ ಕಾರು ಚಲಾಯಿಸಿದವರ ಬಗ್ಗೆ ಸ್ಪಷ್ಟಮಾಹಿತಿ ದೊರೆತಿರಲಿಲ್ಲ. ನಿನ್ನೆಯಷ್ಟೇ‌ ನಲಪಾಡ್ ಗನ್ ಮ್ಯಾನ್ ಬಾಲು ಎಂಬಾತ ಕಾರು ಚಲಾಯಿಸಿದ್ದು ತಾನೇ ಎಂದು ಸದಾಶಿವ‌ನಗರ ಪೊಲೀಸ್ ಠಾಣೆಗೆ ಶರಣಾಗಿದ್ದ. ಆದರೆ, ಆತ ಅಪಘಾತದ ಕುರಿತು ಮಾಹಿತಿ ನೀಡುವಲ್ಲಿ ತಡಬಡಿಸಿದ್ದು, ಕಾರಿನ ಕೀ ಕೊಟ್ಟಾಗ ಆತನಿಂದ ಚಾಲನೆ ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

      ನಂತರ ಪೊಲೀಸರು ತಾಂತ್ರಿಕ ಹಾಗೂ ಪ್ರತ್ಯಕ್ಷದರ್ಶಿಗಳ ಮಾಹಿತಿ ಆಧರಿಸಿ ಕಾರು ಚಲಾಯಿಸಿದ್ದು, ಶಾಸಕ ಎನ್ ಹ್ಯಾರಿಸ್ ಪುತ್ರ ಮಹ್ಮದ್ ನಲಪಾಡ್ ಎಂದು ದೃಢಪಟ್ಟಿತು.

      ಸಾಕ್ಷ್ಯನಾಶ ಆರೋಪದಡಿ ಬಾಲು ಅನ್ನು ಇಂದು 7ಎಸಿಎಂಎಂ ಕೋರ್ಟ್ ಮುಂದೆ ಪೊಲೀಸರು ಹಾಜರು ಪಡಿಸಿದ್ದರು. 3 ಸಾವಿರ ದಂಡ ಹಾಗೂ ಬಾಂಡ್ ಬರೆಸಿಕೊಂಡ ನಂತರ ಬಾಲುಗೆ ಜಾಮೀನು ಮಂಜೂರು ಮಾಡಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap