ಬೆಂಗಳೂರು:
ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕಿಯಾಗಿದ್ದ ನೀಲಮಣಿ ಎನ್.ರಾಜು ಸೇರಿದಂತೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳು ಇಂದು ಸೇವೆಯಿಂದ ನಿವೃತ್ತಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಕೋರಮಂಗಲದ ಕೆಎಸ್ ಆರ್ ಪಿ ಮೈದಾನದಲ್ಲಿ ಮೂವರು ಅಧಿಕಾರಿಗಳಿಗೆ ಫೇರ್ ವೆಲ್ ನೀಡಲಾಯಿತು. ಮೂವರು ಅಧಿಕಾರಿಗಳ ನಿವೃತ್ತಿಯ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಗಾರ್ಡ್ ಆಫ್ ಹಾನರ್ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿ ರಾಘವೇಂದ್ರ ಔರಾದ್ಕರ್ ಸುದ್ದಿಗಾರರೊಂದಿಗೆ ಮಾತನಾಡಿ, ಸೇವೆಗೆ ಸೇರಿದ ನಂತರ ಒಂದು ದಿನ ಸರ್ಕಾರದಿಂದ ನಿವೃತ್ತಿಯಾಗುವುದು ನಿಶ್ಚಿತ. ಆದರೆ, ಗುರಿ ಇಟ್ಟುಕೊಂಡು ಸರ್ಕಾರಿ ಕೆಲಸಕ್ಕೆ ಸೇರಿರುತ್ತೇವೆ. ಪೊಲೀಸ್ ಪೇದೆಯಿಂದ ಹಿಡಿದು ಹಿರಿಯ ಅಧಿಕಾರಿಗಳು, ಕುಟುಂಬಸ್ಥರು ನಾನ್ನಿಡುವ ಪ್ರತಿ ಹೆಜ್ಜೆಗೂ ಪ್ರಾಮುಖ್ಯತೆ ನೀಡಿದರು ಎಂದು ಸ್ಮರಿಸಿಕೊಂಡರು.
ರಾಷ್ಟ್ರದ ಬಹುಮುಖ್ಯ ಪ್ರಕರಣ ಛಾಪಾಕಾಗದ ಹಗರಣದ ತನಿಖೆಯನ್ನು ನಾನೇ ಕೈಗೊಂಡಿದ್ದೆ. 33 ವರ್ಷ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿದ್ದೇನೆ. ಈ ಹಂತದಲ್ಲಿ ಕಹಿಗಿಂತ ಹೆಚ್ಚು ಸಿಹಿ ಅನುಭವವೇ ತಮಗೆ ಆಗಿದೆ ಎಂದು ಹೇಳಿಕೊಂಡರು.
2000ರಲ್ಲಿ ನಾವೇ ಮೊಟ್ಟ ಮೊದಲು ರಾಜ್ಯದಲ್ಲಿ ಸೈಬರ್ ಕ್ರೈಂ ಠಾಣೆ ತೆರೆದಿದ್ದೆವು. ಪೊಲೀಸ್ ಇಲಾಖೆಯ ವೇತನದ ಅಧ್ಯಯನ ಹಾಗೂ ವರದಿ ನೀಡುವ ಕರ್ತವ್ಯ ನಿರ್ವಹಿಸಿದ್ದೇನೆ. ಅದೊಂದು ನಾನು ಮಾಡಿದ ದೊಡ್ಡ ಸಾಧನೆ ಎಂದು ಭಾವಿಸುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ನಿರ್ಗಮಿತ ಡಿಜಿಪಿಗಳ ಕುಟುಂಬ ಸದಸ್ಯರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ