ನವದೆಹಲಿ:
ನಿರ್ಭಯಾ ಹಂತಕರಿಗೆ ಇಂದು (ಶುಕ್ರವಾರ) ಬೆಳಿಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಿದ್ದು, ಅಪರಾಧಿಗಳ ಕೊನೆಯ ಇಚ್ಛೆ ಕುರಿತು ಏನನ್ನೂ ಕೂಡ ಹೇಳಲಿಲ್ಲ ಎಂದು ಜೈಲು ಅಧೀಕ್ಷರು ತಿಳಿಸಿದ್ದಾರೆ.
ಅಪರಾಧಿಗಳಾದ ಅಕ್ಷಯ್ ಸಿಂಗ್, ವಿನಯ್ ಶರ್ಮಾ, ಪವನ್ ಗುಪ್ತಾ, ಮುಕೇಶ್ ಸಿಂಗ್ ಗೆ ದೆಹಲಿಯ ತಿಹಾರ್ ಜೈಲಿನ ವಧಾಸ್ಥಳದಲ್ಲಿ ಇಂದು ಬೆಳಿಗ್ಗೆ 5.30ಕ್ಕೆ ಮರಣದಂಡನೆ ವಿಧಿಸಲಾಗಿದ್ದು, ಹ್ಯಾಂಗ್ ಮನ್ ಪವನ್ ಅವರು ಅಪರಾಧಿಗಳನ್ನು ಗೆಲ್ಲಿಗೇರಿಸಿದ್ದಾರೆ.
ಮರಣದಂಡನೆಗೂ ಮೊದಲು ಅಪರಾಧಿಗಳ ಕೊನೆಯ ಇಚ್ಛೆಯ ಕುರಿತು ಜೈಲು ಅಧೀಕ್ಷರು ವಿಚಾರಿಸಿದಾಗ ಕೊನೆಯ ಇಚ್ಛೆ ಏನೆಂದು ಅಪರಾಧಿಗಳು ಹೇಳಲಿಲ್ಲ. ಈ ಕುರಿತು ಜೈಲು ಅಧೀಕ್ಷರು ಕಾರಾಗೃಹದ ಐಜಿಗೆ ವರದಿ ಮಾಡಿದ್ದಾರೆ.
ನಿರ್ಭಯಾ ತಾಯಿಯ ಪ್ರತಿಕ್ರಿಯೆ :
ನಮ್ಮ ಮಗಳು ಈಗಿಲ್ಲ ಮತ್ತು ಅವಳು ಮತ್ತೆ ಬರಲಾರಳು. ಆಕೆ ನಮ್ಮನ್ನು ಅಗಲಿದ ದಿನದಿಂದ ನಮ್ಮ ಹೋರಾಟವನ್ನು ಆರಂಭಿಸಿದ್ದೆವು. ಇದು ಅವಳಿಗಾಗಿ ನಡೆಸಿದ ಹೋರಾಟವಾಗಿತ್ತು. ಆದಾಗ್ಯೂ, ನಾವು ಈ ಹೋರಾಟವನ್ನು ಇಲ್ಲಿಗೇ ಕೈ ಬಿಡುವುದಿಲ್ಲ. ನಮ್ಮ ಮಗಳಂದಿರಿಗಾಗಿ ಮುಂದುವರಿಸುತ್ತೇವೆ. ನಾನು ನನ್ನ ಮಗಳ ಫೋಟೊವನ್ನು ಅಪ್ಪಿ ಹಿಡಿದುಕೊಂಡು ಹೇಳಿದೆ- ಮಗಳೇ ಕೊನೆಗೂ ನಿನಗೆ ಸಿಕ್ಕಿತು ನ್ಯಾಯ.
ಕೊನೆಗೂ ಆ ಅಪರಾಧಿಗಳನ್ನು ನೇಣುಗಂಬಕ್ಕೆ ಏರಿಸಿದರು. ಅದು ಸುದೀರ್ಘವಾದ ಹೋರಾಟವಾಗಿತ್ತು. ಇಂದು ನಮಗೆ ನ್ಯಾಯ ಸಿಕ್ಕಿತು. ಈ ದಿನವನ್ನು ನಮ್ಮ ದೇಶದ ಮಗಳಂದಿರಿಗೆ ಮೀಸಲಿಡಬೇಕಾದ ದಿನ ಎಂದು ನಾವು ನಿರ್ಧರಿಸಿದ್ದೇವೆ. ಸರ್ಕಾರ ಮತ್ತು ನ್ಯಾಯಾಂಗಕ್ಕೆ ನಾವು ಕೃತಜ್ಞತೆಯನ್ನು ಸಮರ್ಪಿಸುತ್ತಿದ್ದೇವೆ.
ಜನತೆಯ ಸಂಭ್ರಮ :
ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುತ್ತಿರುವ ಹಿನ್ನೆಲೆಯಲ್ಲಿ ಜೈಲಿನ ಸುತ್ತ ಮುತ್ತ ಸಾವಿರಾರು ಜನತೆ ಆಗಮಿಸಿದ್ದರು, ಇದಲ್ಲದೇ ಅತ್ತ ನಾಲ್ವರು ಗಲ್ಲಿಗೆ ಏರಿದ ಸುದ್ದಿಯನ್ನು ತಿಳಿದುಕೊಂಡ ಕೂಡಲೇ ಸಂಭ್ರಮ ವ್ಯಕ್ತಪಡಿಸಿದರು.
2012ರ ಡಿಸೆಂಬರ್ 16ರ ಕರಾಳ ರಾತ್ರಿ ನಡೆದ ಪೈಶಾಚಿಕ ಘಟನೆಯ ಆರೋಪಿಗಳನ್ನು ಮುಂಜಾನೆ ನೇಣುಗಂಬಕ್ಕೆ ಏರಿಸುವ ಮೂಲಕ ಏಳು ವರ್ಷಗಳ ಬಳಿಕೆ ನಿರ್ಭಯಾ ಪ್ರಕರಣಕ್ಕೆ ನ್ಯಾಯ ಸಿಕ್ಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ