ವಿಜಯಪುರ:
ಬಾಕಿ ಬಿಲ್ ಪಾವತಿಸುವವರೆಗೂ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಮೃತನ ಶವ ನೀಡಲು ನಿರಾಕರಿಸಿದ ಖಾಸಗಿ ಆಸ್ಪತ್ರೆ ವಿರುದ್ಧ ಮೃತನ ಕುಟುಂಬಸ್ಥರು ಭಿಕ್ಷೆ ಬೇಡಿ ಪ್ರತಿಭಟನೆ ನಡೆಸುತ್ತಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ.
ರಾಜು ಭೋವಿ ಎಂಬುವವರು 18 ದಿನಗಳ ಹಿಂದೆ ಕೊರೊನಾ ಸೋಂಕಿನಿಂದಾಗಿ ವಿಜಯಪುರದ ಕೋಟೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತ ಪಟ್ಟಿದ್ದಾರೆ. ಇಲ್ಲಿವರೆಗೆ ಆಸ್ಪತ್ರೆಗೆ 4.80 ಲಕ್ಷ ರೂ ಬಿಲ್ ಅನ್ನು ಕುಟುಂಬಸ್ಥರು ಪಾವತಿಸಿದ್ದಾರೆ.
ಆದರೆ ಮೃತದೇಹ ಪಡೆಯಲು ಬಾಕಿ ಹಣ 2.70 ಲಕ್ಷ ಹಣವನ್ನು ಪಾವತಿಸುವಂತೆ ಆಸ್ಪತ್ರೆ ಸಿಬ್ಬಂದಿ ತಾಕೀತು ಮಾಡಿದ್ದು, ಮೃತನ ಪತ್ನಿಗೆ ಮೃತದೇಹ ನೋಡಲೂ ಬಿಡದೇ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಶವ ಪಡೆಯಲು ಹಣ ಇಲ್ಲದೇ ಪರದಾಡುತ್ತಿರೋ ಮೃತರ ಕುಟುಂಬಸ್ಥರು ಆಸ್ಪತ್ರೆ ಎದುರೇ ಭಿಕ್ಷೆ ಬೇಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಆಸ್ಪತ್ರೆ ಸಿಬ್ಬಂದಿ ಮೃತರ ಕುಟುಂಬಸ್ಥರ ವಿರುದ್ಧವೇ ದೂರು ದಾಖಲಿಸಿದ್ದು, ಆಸ್ಪತ್ರೆ ಎದುರು ಪೊಲೀಸರ ನಿಯೋಜನೆ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
