‘ಅವಕಾಶ ಕೊಡಿ, ಉಗ್ರರನ್ನು ಇಲ್ಲವಾಗಿಸುವೆ’ : ಪ್ರಧಾನಿಗೆ ಶಂಕರ್ ಬಿದರಿ ಮನವಿ

ಬೆಂಗಳೂರು:

      ಪುಲ್ವಾಮಾದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದು, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದಿರಿ ಪ್ರಧಾನಿ ಮೋದಿ ಬಳಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

     ಯೋಧರ ಬಲಿ ಪಡೆದ ಉಗ್ರರ ವಿರುದ್ಧ ದೇಶದೊಳಗಂತೂ ಭಾರೀ ಆಕ್ರೋಶ, ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಇದೇ ರೀತಿ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಸಹ ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ್ದು, ನನ್ನನ್ನು ಯುದ್ಧಕ್ಕೆ ಕಳಿಸಿಕೊಡಿ ಎಂದು ಕೇಳಿದ್ದಾರೆ. 

      ”ನನಗೆ ಈಗ 64 ವರ್ಷ. ಕಾಶ್ಮೀರಕ್ಕೆ ತೆರಳಲು ಒಂದು ಅವಕಾಶ ಮಾಡಿಕೊಡಿ ಉಗ್ರರನ್ನು ಇಲ್ಲವಾಗಿಸುವೆ. ನೀವು ಅವಕಾಶ ನೀಡಿದರೆ ಈಗಲೇ ತೆರಳುತ್ತೇನೆ. ಅಲ್ಲಿಯೇ ಉಗ್ರರ ಉಪಟಳ ಅಂತ್ಯಗೊಳಿಸುತ್ತೇನೆ. ಇಲ್ಲದೇ ಹೋದರೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡುತ್ತೇನೆ. ಸೂಕ್ತವಾದ ಪಾತ್ರ ನೀಡಿದರೆ, ನಾನು ಕಾಶ್ಮೀರಕ್ಕೆ ಹೋಗಲು ಸಿದ್ಧನಿದ್ದೇನೆ. ಎಂದು ರಾಜ್ಯದ ಮಾಜಿ ಡಿಜಿಪಿ ಶಂಕರ್ ಬಿದರಿ ಪ್ರಧಾನಿ ಮೋದಿಗೆ ಟ್ವೀಟ್‌ ಮಾಡಿದ್ದಾರೆ. ಜೊತೆಗೆ ತಮ್ಮ ಇ ಮೇಲ್ ಐಡಿಯನ್ನೂ ಶಂಕರ್ ಬಿದರಿ ಟ್ವೀಟ್‌ನಲ್ಲಿ ಹಾಕಿಕೊಂಡಿದ್ದು, ಪ್ರಧಾನಿ ಮೋದಿಗೆ ಕಳಿಸಿಕೊಟ್ಟಿದ್ದಾರೆ. 

      ಅಲ್ಲದೆ, 40ಕ್ಕೂ ಅಧಿಕ ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ ಹಿನ್ನೆಲೆ ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನೂ ಘೋಷಿಸಬೇಕೆಂದೂ ಪ್ರಧಾನಿಗೆ ಶಂಕರ್ ಬಿದರಿ ಮನವಿ ಮಾಡಿಕೊಂಡಿದ್ದಾರೆ.

      ಸಿಆರ್‌ಪಿಎಫ್‌ ಯೋಧರನ್ನು ಬಲಿ ತೆಗೆದುಕೊಂಡ ಪಾಕ್ ಮೂಲದ ಜೈಷೆ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಭಯೋತ್ಪಾದಕ ದಾಳಿಯನ್ನು ಜಗತ್ತಿನ ಹಲವು ದೇಶಗಳು ಖಂಡಿಸಿವೆ. ಭಯೋತ್ಪಾದನೆ ವಿರುದ್ಧ ಭಾರತ ನಡೆಸುವ ಸಮರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿವೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ