ಮಂಗಳೂರು:
ಹಲ್ಲೆ ಹಾಗೂ ದರೋಡೆ ಯತ್ನ ಪ್ರಕರಣದಲ್ಲಿ ಭಾಗಿಯಾದ ರೌಡಿ ಶೀಟರ್ ಬಂಧನಕ್ಕೆ ತೆರಳಿದಾಗ ಆತ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದು , ಈ ವೇಳೆ ಪೊಲೀಸರು ಸ್ವಯಂ ರಕ್ಷಣೆಗಾಗಿ ಆರೋಪಿ ಮೇಲೆ ಶೂಟೌಟ್ ನಡೆಸಿದ ಘಟನೆ ಇಂದು ಬೆಳಿಗ್ಗೆ ಅಡ್ಯಾರ್ ಬಳಿ ನಡೆದಿದೆ.
ಗುಂಡೇಟಿನಿಂದ ಗಾಯಗೊಂಡ ರೌಡಿ ಶೀಟರ್ ನನ್ನು ಭುವಿತ್ ರಾಜ್ ಎಂದು ಗುರುತಿಸಲಾಗಿದೆ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾವಿನ ಹಣ್ಣು ಸಾಗಾಟದ ವ್ಯಾಪಾರಿಗಳ ಮೇಲೆ ಭಾನುವಾರ ಮುಂಜಾನೆ ನಡೆದಿದ್ದ ಗುಂಪು ಹಲ್ಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಈ ಹಲ್ಲೆ ಪ್ರಕರಣದಲ್ಲಿ ರೌಡಿ ಶೀಟರ್ ಭುವಿತ್ ರಾಜ್ ಕೈವಾಡವಿರುವುದು ತಿಳಿದು ಬಂದಿತ್ತು .ಈ ಹಿನ್ನಲೆಯಲ್ಲಿ ಕಂಕನಾಡಿ ಪೊಲೀಸ್ ಇನ್ಸ್ಪೆಕ್ಟರ್ ಆತನನ್ನು ಇಂದು ಬೆಳಿಗ್ಗೆ 9 ಗಂಟೆಗೆ ಬಂಧಿಸಲು ತೆರಳಿದ್ದ ವೇಳೆ ಆತ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದ. ಈ ಹಿನ್ನಲೆಯಲ್ಲಿ ಸ್ವಯಂ ರಕ್ಷಣೆಗೆ ಪೊಲೀಸ್ ಗುಂಡಿನ ದಾಳಿ ನಡೆಸಿದ್ದಾರೆ. ರೌಡಿ ಶೀಟರ್ ಭುವಿತ್ ರಾಜ್ ನ ವಿರುದ್ದ 8 ಪ್ರಕರಣಗಳು ಇದೆ ಎಂದು ತಿಳಿದುಬಂದಿದೆ.
ಘಟನೆಯ ವಿವರ:
ಭಾನುವಾರ ಮುಂಜಾನೆ 4 ಗಂಟೆಗೆ ಟೆಂಪೋ ವಾಹನದಲ್ಲಿ ಮಾವಿನ ಹಣ್ಣು ಸಾಗಿಸುತ್ತಿದ್ದ ವ್ಯಾಪಾರಿಯ ಮೇಲೆ ಗುಂಪೊಂದು ವಾಹನವನ್ನು ತಡೆಗಟ್ಟಿ ದನ ಸಾಗಾಟದ ವಾಹನವೆಂದು ಆರೋಪಿಸಿ ಹಲ್ಲೆ ನಡೆಸಿತ್ತು. ವಾಹನದಲ್ಲಿದ್ದವರು ಮಾವಿನ ಹಣ್ಣು ಎಂದು ಹೇಳಿದ್ದರೂ ಯುವಕರು ಮಾತ್ರ ಬೆನ್ನುಬಿಟ್ಟಿರಲಿಲ್ಲ. ಈ ಸಂದರ್ಭ ವಾಹನ ಚಾಲಕ ಸೇರಿದಂತೆ ವಾಹನದಲ್ಲಿದ್ದ ಮತ್ತೊಬ್ಬ ಟೆಂಪೋವನ್ನು ಕುಲಶೇಖರ ಚೌಕಿ ಬಳಿ ನಿಲ್ಲಿಸಿ ಓಡಿ ಹೋಗಿದ್ದು, ಟೆಂಪೋದಲ್ಲಿದ್ದ ಫಾರೂಕ್ ಎಂಬವರಿಗೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಹಲ್ಲೆಯ ಬಳಿಕ ದುಷ್ಕರ್ಮಿಗಳು ಟೆಂಪೋವನ್ನು ಚಾಲನೆ ಮಾಡಿಕೊಂಡು ಕುಲಶೇಖರ ಚೌಕಿಯಿಂದ ಕುಲಶೇಖರ ಚರ್ಚ್ ಸಮೀಪ ಕೊಂಡೊಯ್ದು ನಿಲ್ಲಿಸಿದ್ದರು. ಘಟನೆ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಮೂರು ಪ್ರತ್ಯೇಕ ತಂಡಗಳ ರಚನೆಯಾಗಿದ್ದು, ಶಂಕಿತ 30 ಹೆಚ್ಚು ಜನರ ವಿಚಾರಣೆ ನಡೆದಿತ್ತು.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ. ಸಂದೀಪ್ ಪಾಟೀಲ್, ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತ ಹನುಮಂತರಾಯ ಭೇಟಿ ನೀಟಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/12/shootout-vijayavani-1.gif)