ಮೈಸೂರು:
ನಿರ್ಬಂಧದ ನಡುವೆ ಆಷಾಢ ಶುಕ್ರವಾರದ ಕಡೆ ದಿನವಾದ ಇಂದು ಸಂಸದೆ ಶೋಭಾ ಕರಂದ್ಲಾಜೆ ಚಾಮುಂಡಿ ಬೆಟ್ಟ ಹತ್ತಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಶೋಭಾ ಕರಂದ್ಲಾಜೆ ಪ್ರತಿ ಆಷಾಢ ಮಾಸದಲ್ಲೂ ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತಿ ಚಾಮುಂಡಿಯ ದರ್ಶನ ಪಡೆಯುತ್ತಾರೆ. ಅದರಂತೆಯೇ ನಾಲ್ಕನೇ ಆಷಾಢ ಶುಕ್ರವಾರವಾದ ಹಿನ್ನೆಲೆಯಲ್ಲಿ ಈ ಬಾರಿಯೂ ಮುಂಜಾನೆಯೇ ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತಿದರು.
ಇದೇ ವೇಳೆ ಸಾರ್ವಜನಿಕರು ಚಾಮುಂಡಿ ಬೆಟ್ಟ ಹತ್ತಿ ದರ್ಶನ ಪಡೆಯಲು ಮುಗಿಬಿದ್ದರು. ಆದರೆ, ಪೊಲೀಸರು ಅವರಿಗೆ ಅವಕಾಶ ನೀಡದೆ ಬರಿ ರಾಜಕಾರಣಿಗಳಿಗೆ ಅವಕಾಶ ಕಲ್ಪಿಸಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಬೆಟ್ಟಕ್ಕೆ ಹೋಗಲು ಹೇಗೆ ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವರ ದರ್ಶನ ಪಡೆಯಲು ರಾಜಕಾರಣಿಗಳಿಗೊಂದು ನ್ಯಾಯ ಸಾಮಾನ್ಯರಿಗೊಂದು ನ್ಯಾಯ ಏಕೆ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/07/Shobha-karandlaje-chamundi-hills.jpg)