ಬೆಂಗಳೂರು
ಕೃಷಿ ಜಮೀನಿನಲ್ಲಿ ಮನೆ ನಿರ್ಮಿಸಿ ಮಾರಾಟ ಮಾಡಿರುವ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿ ನಿರ್ದೇಶನಾಲಯದ ತನಿಖೆ ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
ಕೃಷಿ ಜಮೀನಿನಲ್ಲಿ ನಿರ್ಮಿಸಿದ್ದ ಮನೆಯನ್ನು 1 ಕೋಟಿ ರೂಪಾಯಿ ಹಣಕ್ಕೆ ಮನೆ ಮಾರಾಟ ಮಾಡಿರುವ ಸಿದ್ದರಾಮಯ್ಯ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳು ಮುಂದಾಗಿದ್ದಾರೆ.
ಕಳೆದ 1981ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಡಿನೋಟಿಫೈ ಮಾಡಿದ್ದ ಭೂಮಿಯ ವಿಜಯನಗರದ 2ನೇ ಹಂತದ 10 ಗುಂಟೆ ಜಾಗದಲ್ಲಿಕೃಷಿ ಕೆಲಸಕ್ಕೆಂದು ಭೂಮಿ ಪಡೆದು ನಿರ್ಮಾಣ ಮಾಡಿದ್ದ ಮನೆಯನ್ನು ಸಿದ್ದರಾಮಯ್ಯನವರು 2003ರಲ್ಲಿ 1 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು..
ಇದನ್ನು ಪ್ರಶ್ನಿಸಿ ಮೈಸೂರಿನ ಗಂಗರಾಜು ಎಂಬವರು ಸಿದ್ದರಾಮಯ್ಯ ಸೇರಿ ಇನ್ನಿತರರ ವಿರುದ್ಧ ದೂರು ನೀಡಲು ಮುಂದಾಗಿದ್ದರು. ಆದರೆ ಪೊಲೀಸರು ಮಾತ್ರ ಎಫ್ಐಆರ್ ದಾಖಲು ಮಾಡಿಕೊಂಡಿರಲಿಲ್ಲ.ಪೊಲೀಸರ ವರ್ತನೆಯಿಂದಾಗಿ ಬೇಸತ್ತ ಗಂಗರಾಜು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಆದೇಶದ ಬಳಿಕ ಜುಲೈ 23ರಂದು ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್ಐಆರ್ ದಾಖಲಾಗಿತ್ತು. ಆದರೆ ತನಿಖೆ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಗಂಗರಾಜು ಡಿಜಿಪಿಗೆ ದೂರು ನೀಡಿದ್ದರು.ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಕುರಿತು ಡಿಜಿಪಿ ಮೈಸೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಇದಲ್ಲದೇ ಗಂಗರಾಜುರವರು ವರ್ಷದ ಹಿಂದೆಯೇ ಜಾರಿನಿರ್ದೇಶನಾಲಯಕ್ಕೂ ಸಹ ದೂರನ್ನು ನೀಡಿದ್ದರು. ಆದರೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗದೇ ಹೊರತು,ಇಡಿ ತನಿಖೆ ಅಸಾಧ್ಯವಾಗಿತ್ತು.ಸದ್ಯ ಎಫ್ಐಆರ್ ಆಗಿರುವ ಮಾಹಿತಿಯನ್ನು ಗಂಗರಾಜು ಜಾರಿನಿರ್ದೇಶನಾಲಯಕ್ಕೆ ನೀಡಿದ್ದಾರೆ.
ಈ ಬೆನ್ನಲ್ಲೇ ಪ್ರಕರಣದ ತನಿಖೆಯನ್ನು ಇಡಿ ಕೈಗೆತ್ತಿಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ 30 ಲಕ್ಷ ರೂಪಾಯಿಗಿಂತಲೂ ಹೆಚ್ಚು ಹಣ ಅಕ್ರಮ ಗಳಿಸಿದ್ದಾರೆ ಎಂದು ಹೇಳಲಾಗತ್ತಿದೆ.ಕೃಷಿಗಾಗಿ ಡಿನೋಟಿಫೈ ಮಾಡಿಸಿಕೊಂಡು, ಮನೆ ಕಟ್ಟಿದ್ದು ಹೇಗೆ ಎಂಬ ಬಗ್ಗೆ ಇಡಿ ತನಿಖೆಯಲ್ಲಿ ಪ್ರಶ್ನಿಸಲಿದೆ. ಅಲ್ಲದೇ ಕಟ್ಟಿದ ಮನೆಯನ್ನು 1 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದನ್ನೇ ಮುಂದಿಟ್ಟುಕೊಂಡು ಮನಿ ಲ್ಯಾಂಡ್ರಿಂಗ್ ಕಾಯ್ದೆಯಡಿ ತನಿಖೆ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಅಕ್ರಮ ಹಣ ಗಳಿಕೆ ಅಡಿಯಲ್ಲಿ ಜಾರಿನಿರ್ದೇಶನಾಲಯ ಪ್ರಕರಣದ ತನಿಖೆಯನ್ನು ನಡೆಸಲು ಮುಂದಾಗಿದೆ. ಅಲ್ಲದೇ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ರೀತಿಯಲ್ಲೇ ಸಿದ್ದರಾಮಯ್ಯ ಕೂಡ ಇಡಿ ದಾಳಿಯಲ್ಲಿ ಸಿಲುಕುತ್ತಾರಾ ಎನ್ನುವ ಪ್ರಶ್ನೆ ಹುಟ್ಟುಹಾಕಿಕೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/10/siddaramaiah-2-1.gif)