ಮಂಡ್ಯ:
ಬಾರೀ ಮಳೆಗೆ ಶ್ರೀರಂಗಪಟ್ಟಣ- ಬೀದರ್ ಹೆದ್ದಾರಿ ಸಂಪೂರ್ಣ ಜಲಾವೃತವಾಗಿದೆ. ಪ್ರಯಾಣಿಕರು ಪರದಾಡುತ್ತಿದ್ದು, ಸ್ಥಳೀಯ ಜನರು ವಾಹನಗಳಿಗೆ ದಾರಿ ತೋರಿಸುತ್ತಿದ್ದ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಮುರುಕನಹಳ್ಳಿ ಬಳಿ ನಡೆದಿದೆ.
ಕಳೆದ ರಾತ್ರಿಯ ಬಾರೀ ಮಳೆಗೆ ಹಳ್ಳಗಳು ತುಂಬಿದ್ದು, ಕೆರೆಗಳು ಕೋಡಿ ಬಿದ್ದಿವೆ. ಇದರಿಂದ ಸೇತುವೆ ಮೇಲೆ ನೀರು ಬಂದಿದ್ದು, ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ರಸ್ತೆಯಲ್ಲಿ ನೀರು ತುಂಬಿರುವಿದರಿಂದ ವಾಹನ ಚಾಲಕರು ರಸ್ತೆ ಕಾಣದೆ ಪರದಾಡುತ್ತಿದ್ದಾರೆ. ಸ್ಥಳೀಯರು ನೀರಿನ ಮದ್ಯೆ ದಾರಿ ತೋರಿಸುತ್ತಾ ವಾಹನ ಚಾಲಕರಿಗೆ ನೆರವಾಗುತ್ತಿದ್ದಾರೆ.
ಮತ್ತೊಂದು ಕಡೆ ಕೆ.ಆರ್.ಪೇಟೆ ತಾಲ್ಲೂಕಿನ ಹಲವು ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಕೆರೆ ಕೋಡಿ ಬಿದ್ದಿದ್ದು, ಮತ್ತೆ ಮಳೆ ಬಂದರೆ ಎಲ್ಲೀ ಜಮೀನಿಗೆ ನೀರು ನುಗ್ಗುತ್ತದೋ ಎಂಬ ಆತಂಕ ರೈತರಲ್ಲಿ ಶುರುವಾಗಿದೆ. ಕೆಲವು ಕಡೆ ಹಳ್ಳಗಳು ಮುಚ್ಚಿ ಹೋಗಿದ್ದು ನೀರು ಎಲ್ಲೆಂದರಲ್ಲಿ ನುಗ್ಗುತ್ತಿದೆ.
ಕೆ.ಆರ್.ಪೇಟೆ ಪಟ್ಟಣದ ಹೊಸಹೊಳಲು ಗ್ರಾಮದಲ್ಲಿ ಮನೆಯೊಂದು ಕುಸಿದಿದೆ. ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಪರಿಹಾರ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.
