ಸಿದ್ದಗಂಗಾ ಮಠಕ್ಕೆ ತೇಜಸ್ವಿ ಸೂರ್ಯ ಭೇಟಿ!!

ತುಮಕೂರು:

      ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಅವರು ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.

      ತೇಜಸ್ವಿ ಸೂರ್ಯಗೆ ಮಾಜಿ ಸಚಿವ ವಿ.ಸೋಮಣ್ಣ ಸಾಥ್ ನೀಡಿದ್ದು, ಸಿದ್ದಗಂಗಾ ಮಠದಲ್ಲಿ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಶ್ರೀ ಸಿದ್ದಲಿಂಗ ಸ್ವಾಮೀಜಿಗಳಿಗೆ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ನಾಯಕರು ಶಾಲು ಹೊದಿಸಿ ನಮಸ್ಕರಿಸಿದರು.

      ಆ ನಂತರ ಶ್ರೀಗಳು ತೇಜಸ್ವಿ ಸೂರ್ಯಗೆ ಶಾಲು ಹೊದಿಸಿ, ಆಶೀರ್ವಾದ ಮಾಡಿದರು. ಈ ವೇಳೆ ವಿ.ಸೋಮಣ್ಣ ಅವರು ಮಾತನಾಡಿ, ಮಠಕ್ಕೆ ಬಿಜೆಪಿಯವರು ಯಾರೆಲ್ಲಾ ಬಂದಿದ್ದಾರೆ, ಅವರೆಲ್ಲರಿಗೂ ಮಠದ ಜೊತೆ ಅವಿನಭಾವ ಸಂಬಂಧವಿದೆ ಎಂದು ತಿಳಿಸಿ ಶ್ರೀಗಳಿಗೆ ನಮಸ್ಕರಿಸಿದರು.

      ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ ಲಕ್ಷಾಂತರ ಬಡಮಕ್ಕಳಿಗೆ ಬೆಳಕು ನೀಡಿರುವ ಶ್ರೇಷ್ಠ ಸ್ಥಾನವಿದು. ಇಲ್ಲಿ ಆಶೀರ್ವಾದದ ಜೊತೆಗೆ ಪ್ರೇರಣೆ ಪಡೆಯುವುದು ಬಹುಮುಖ್ಯ. ರಾಜಕಾರಣಿ ಸನ್ಯಾಸಿಯಂತಿರಬೇಕು ಎನ್ನುತ್ತಾರೆ, ಅಂತಹ ರಾಜಕೀಯ ಸನ್ಯಾಸತ್ವಕ್ಕೆ ಶ್ರೀಗಳು ಮತ್ತು ಮಠ ಪ್ರೇರಣೆ.  ಸೇವೆ, ಅಧಿಕಾರ, ಹಣ, ಅಂತಸ್ತುಗಳನ್ನು ಮೀರಿದ ವಿನಮ್ರತೆಗಳಿಗೆ ಪ್ರೇರಣಾ ಸ್ಥಳವಾಗಿರುವುದರಿಂದ ಆಶೀರ್ವಾದ ಪಡೆಯಲು ಹಿರಿಯರ ಜೊತೆಗೂಡಿ ಬಂದಿರುವುದು ಸಂತಸ ತಂದಿದೆ ಎಂದರು.

      ‘ಬಿಜೆಪಿ ಯುವಕರಿಗೆ ಹೆಚ್ಚಿನ ರಾಜಕೀಯ ಅವಕಾಶ ಕಲ್ಪಿಸುತ್ತದೆ. ಈ ಸಂಪ್ರದಾಯವನ್ನು ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿದೆ. ನನ್ನನ್ನು ಗುರುತಿಸಿ ಪಕ್ಷದ ವರಿಷ್ಠರು ಅವಕಾಶ ಕೊಟ್ಟಿರುವುದೂ ಅದೇ ಮಾನದಂಡದಿಂದ. ಅರುಣ್ ಜೇಟ್ಲಿ, ಅನಂತಕುಮಾರ್ ಹೀಗೆ ಅನೇಕರಿಗೆ ರಾಜಕೀಯ ಅವಕಾಶಗಳು ಲಭಿಸಿದ್ದು ಯುವಕರಾಗಿದ್ದಾಗಲೇ,’ ಎಂದು ಹೇಳಿದರು. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap