ತುಮಕೂರು :
ಬಿಜೆಪಿ ತಾಲ್ಲೂಕು ಪಂಚಾಯಿತಿ ಸದಸ್ಯನಿಂದ ಸೈಬರ್ ಸೆಂಟರ್ ನಡೆಸುತ್ತಿರುವ ವ್ಯಕ್ತಿಯ ಮೇಲೆ ಹಲ್ಲೆ-ದೌರ್ಜನ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಕಿರಣ್ ಎಂಬಾತನೇ ದೌರ್ಜನ್ಯಕ್ಕೊಳಗಾದ ವ್ಯಕ್ತಿ. ಈತ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರನಾಗಿದ್ದು, ಈಗ ಕ್ಯಾತ್ಸಂದ್ರ ರೈಲ್ವೇ ನಿಲ್ದಾಣದ ಬಳಿ ಸೈಬರ್ ಸೆಂಟರ್ ನಡೆಸುತ್ತಿದ್ದಾರೆ. ಜೊತೆಗೆ ಕನಸಿನ ಭಾರತ ಎಂಬ ಪತ್ರಿಕಾ ವರದಿಗಾರರೂ ಸಹಾ ಆಗಿದ್ದಾರೆ ಎನ್ನಲಾಗಿದೆ.
ಕಿರಣ್ ರವರ ಸೈಬರ್ ಸೆಂಟರ್ ಬಳಿ ಬಂದ ತಾಲ್ಲೂಕು ಪಂಚಾಯ್ತಿ ಸದಸ್ಯ ಕಾಂತರಾಜು ಎಂಬುವವರು ಪಹಣಿ ಮಾಡಿಕೊಡುವಂತೆ ಕೇಳಿದ್ದಾರೆ. ಅದಕ್ಕೆ ಕಿರಣ್ ಅವರು 30 ರೂ. ನೀಡುವಂತೆ ಹೇಳಿದ್ದಾರೆ. ಅದನ್ನೊಪ್ಪದ ಕಾಂತರಾಜು 20 ರೂ.ಗೆ ಮಾಡಿಕೊಡುವಂತೆ ಹೇಳಿದ್ದಾರೆ. ಇದಕ್ಕೆ ಕಿರಣ್ ನಿರಾಕರಿಸಿದಾಗ, ಅವರನ್ನು ಕಾಲಿನಿಂದ ಹಲ್ಲೆ ಮಾಡಿ ಸೈಬರ್ ಸೆಂಟರ್ ನಿಂದ ಹೊರಗೆಳೆದು ದೌರ್ಜನ್ಯ ಮಾಡಿದ್ದಾರೆ ಎಂದು ಕಿರಣ್ ತಿಳಿಸಿದ್ದಾರೆ.
ಕಾಂತರಾಜು, ಮಾಜಿ ಶಾಸಕ ಸುರೇಶ್ ಗೌಡರ ಜೊತೆ ಓಡಾಡಿಕೊಂಡಿರುವನೆಂದು ತಿಳಿಸಿದ್ದು, ಈತ ರೌಡಿ ಶೀಟರ್ ಎನ್ನಲಾಗಿದೆ. ಈ ಸಂಬಂಧ ಕಿರಣ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
