ಬೆಂಗಳೂರು:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಅಗಸ್ಟ್ 12 ರಂದು ವಿಸ್ತರಣೆಯಾಗಲಿದೆ ಎನ್ನಲಾಗಿದೆ.
ಆ.10 ರ ಶನಿವಾರ ದೆಹಲಿಗೆ ಧಾವಿಸಲಿರುವ ಸಿಎಂ ಯಡಿಯೂರಪ್ಪ ಪಕ್ಷದ ವರಿಷ್ಟರನ್ನು ಭೇಟಿ ಮಾಡಲಿದ್ದು ಅವರು ನೀಡುವ ಲಕೋಟೆಯೊಂದಿಗೆ ವಾಪಸ್ಸಾಗಲಿದ್ದಾರೆ. ಆದರೆ ಸಚಿವ ಸಂಪುಟಕ್ಕೆ ಬಿಜೆಪಿಯ ಹದಿನೈದು ಮಂದಿ ಸೇರ್ಪಡೆಯಾಗಲಿದ್ದು ಶಾಸಕತ್ವದಿಂದ ಅನರ್ಹಗೊಂಡವರ ವಿಷಯ ಸುಪ್ರೀಂಕೋರ್ಟ್ನಲ್ಲಿ ಇತ್ಯರ್ಥವಾಗದೇ ಇರುವುದರಿಂದ ಈ ಪಡೆಯ ಯಾರನ್ನೂ ಈ ಬಾರಿ ಮಂತ್ರಿಗಿರಿಗೆ ಪರಿಗಣಿಸಲಾಗುವುದಿಲ್ಲ.
ಶುಕ್ರವಾರದಂದು ಸಂಪುಟ ವಿಸ್ತರಣೆಯಾಗಬೇಕಿತ್ತಾದರೂ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನಿಧನದಿಂದಾಗಿ, ಶಾ ಅವರ ಜತೆಗೆ ಸಂಪುಟ ವಿಸ್ತರಣೆ ಕುರಿತು ಸಮಾಲೋಚನೆ ನಡೆಸಲು ಮುಖ್ಯಮಂತ್ರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಈ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು.
ಸಧ್ಯದ ಪರಿಸ್ಥಿತಿಯಲ್ಲಿ ಆ ಕುರಿತು ಹೆಚ್ಚಿನ ಚರ್ಚೆ ಬೇಡ. ಕರ್ನಾಟಕದಲ್ಲೂ ನೆರೆ ಹಾವಳಿಯಿಂದ ಜನ ಕಂಗೆಟ್ಟಿದ್ದಾರೆ. ಹೀಗಾಗಿ ಮೊದಲು ರಾಜ್ಯಕ್ಕೆ ಹೋಗಿ ಸಂತ್ರಸ್ತ ಪ್ರದೇಶಗಳನ್ನು ಭೇಟಿ ಮಾಡಿ ಎಂದು ವರಿಷ್ಟರು ಸಿಎಂ ಯಡಿಯೂರಪ್ಪ ಅವರಿಗೆ ಸೂಚಿಸಿದ್ದರು. ಅವರ ಸೂಚನೆಯ ಹಿನ್ನೆಲೆಯಲ್ಲಿ ಬುಧವಾರ ರಾಜ್ಯಕ್ಕೆ ಮರಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಲ್ಲದೆ ಅದೇ ಕಾಲಕ್ಕೆ ಆಡಳಿತ ಯಂತ್ರಕ್ಕೆ ಚುರುಕು ನೀಡುವ ಯತ್ನ ಮಾಡಿದ್ದಾರೆ.
ಒಂದು ಕಡೆಯಿಂದ ರಾಜ್ಯದ ಸಂತ್ರಸ್ತ ಪ್ರದೇಶದ ಜನರ ಕಡೆ ಗಮನ ಹರಿಸಿದ ಸಿಎಂ ಯಡಿಯೂರಪ್ಪ ಅದೇ ಕಾಲಕ್ಕೆ ಶನಿವಾರ ದೆಹಲಿಗೆ ದೌಡಾಯಿಸಿ ವರಿಷ್ಟರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಆದರೆ ಈಗಾಗಲೇ ಮಂತ್ರಿ ಮಂಡಲ ವಿಸ್ತರಣೆಯಲ್ಲಿ ಯಾರಿರಬೇಕು..? ಎಂಬ ಕುರಿತು ಮೂರು ಪಟ್ಟಿಗಳನ್ನು ತನ್ನ ಮುಂದಿಟ್ಟಿಕೊಂಡಿರುವ ಬಿಜೆಪಿ ವರಿಷ್ಟರು ಮೊದಲ ಕಂತಿನಲ್ಲಿ ಯಾರು ಮಂತ್ರಿಗಳಾಗಬೇಕು?ಎಂದು ನಿರ್ಧರಿಸಲಿದ್ದಾರೆ.
ಉನ್ನತ ಮೂಲಗಳ ಪ್ರಕಾರ, ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅದೇ ಕಾಲಕ್ಕೆ ಸಂಘ ಪರಿವಾರದ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಂತಿಮ ಪಟ್ಟಿ ಸಿದ್ಧಗೊಳಿಸಿರುವ ವರಿಷ್ಟರು ಶನಿವಾರ ಈ ಪಟ್ಟಿ ಇರುವ ಲಕೋಟೆಯನ್ನು ಯಡಿಯೂಪ್ಪ ಅವರ ಕೈಗೆ ನೀಡಲಿದ್ದಾರೆ.
ಕ್ಲಿಷ್ಟಕರ ಸನ್ನಿವೇಶದಲ್ಲಿ ಸರ್ಕಾರ ರಚನೆಯಾಗಿರುವ ಹಿನ್ನೆಲೆಯಲ್ಲಿ ಮಂತ್ರಿಗಿರಿಗಾಗಿ ಯಾರೂ ಕಚ್ಚಾಡಬಾರದು ಎಂದು ಈಗಾಗಲೇ ಹೈಕಮಾಂಡ್ ವರಿಷ್ಟರು ಎಚ್ಚರಿಕೆಯ ಸಂದೇಶ ನೀಡಿದ್ದು, ಈ ಹಿನ್ನೆಲೆಯಲ್ಲಿ ದಿಲ್ಲಿಗೆ ಹೋಗಿ ಲಾಬಿ ಮಾಡಲು ಯತ್ನಿಸುವವರಿಗೆ ಅವಕಾಶ ಇಲ್ಲದಂತಾಗಿದೆ.
ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಬೀಡು ಬಿಟ್ಟು ಜನರ ಕೆಲಸ ಮಾಡಿ. ಮಂತ್ರಿ ಮಂಡಲದಲ್ಲಿ ಯಾರಿರಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದು ಹೈಕಮಾಂಡ್ ವರಿಷ್ಟರು ನಿಷ್ಟುರವಾಗಿ ಹೇಳಿರುವುದರಿಂದ ರಾಜ್ಯ ಬಿಜೆಪಿಯ ಎಲ್ಲ ಶಾಸಕರು ಈಗ ಶಿಸ್ತಿನ ಸಿಪಾಯಿಗಳಂತೆ ಹೆಜ್ಜೆ ಇಡುತ್ತಿದ್ದಾರೆ.
ಹೈಕಮಾಂಡ್ ಯಾರಿಗೆ ಮಂತ್ರಿಗಿರಿ ಕೊಡುತ್ತದೋ ಗೊತ್ತಿಲ್ಲ. ಆದರೆ ಅದು ನೀಡಿದ ಸೂಚನೆಯನ್ನು ಪಾಲಿಸುತ್ತೇವೆ. ಯಾವ ಕಾರಣಕ್ಕೂ ಅದರ ವಿರುದ್ಧ ಮಾತನಾಡುವುದಿಲ್ಲ ಎಂದು ಬಹುತೇಕ ಶಾಸಕರು ಸನ್ನಿವೇಶ ಸಿಕ್ಕಾಗ ಹೇಳಿಬಿಟ್ಟಿದ್ದಾರೆ.
ಮೂಲಗಳ ಪ್ರಕಾರ, ಯಡಿಯೂರಪ್ಪ ಅವರ ಸಚಿವ ಸಂಪುಟಕ್ಕೆ ಘಟಾನುಘಟಿ ನಾಯಕರು ಸೇರ್ಪಡೆಯಾಗಲಿದ್ದು ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂಗಳಾದ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಉಮೇಶ್ ಕತ್ತಿ, ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ರವಿ ಸುಬ್ರಮಣ್ಯ ಇಲ್ಲವೇ ಸುರೇಶ್ ಕುಮಾರ್ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.
ಹೀಗೆ ಸಂಪುಟ ವಿಸ್ತರಣೆಯಲ್ಲಿ ಸುಮಾರು ಹದಿನೈದು ಮಂದಿಗೆ ಅವಕಾಶ ದೊರೆಯಲಿದ್ದು ಸುಪ್ರೀಂಕೋರ್ಟ್ ಅನರ್ಹಗೊಂಡಿರುವ ಶಾಸಕರ ಅರ್ಜಿಯನ್ನು ಇತ್ಯರ್ಥಗೊಳಿಸಿದ ನಂತರ ಮುಂದಿನ ಕಂತಿನ ಸಂಪುಟ ವಿಸ್ತರಣೆ ಮಾಡಲಿದೆ. ಆದರೆ ಅದು ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಅವಲಂಬಿಸಲಿದೆ ಎಂದಿರುವ ಮೂಲಗಳು,ಸಧ್ಯದ ಪರಿಸ್ಥಿತಿಯಲ್ಲಿ ಮಂತ್ರಿಗಿರಿಗಾಗಿ ಯಾರೂ ಪೈಪೋಟಿ ನಡೆಸುವ ಸ್ಥಿತಿಯಿಲ್ಲ. ಬಲಿಷ್ಟ ಹೈಕಮಾಂಡ್ ಇರುವುದರಿಂದ ಯಾರೂ ದುಡುಕಿನ ಹೆಜ್ಜೆ ಇಡುವುದೂ ಇಲ್ಲ ಎಂದು ವಿವರ ನೀಡಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
