ಬೆಂಗಳೂರು :
ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಜಾತ್ರೆ, ಉತ್ಸವ, ವಿಶೇಷ ಪೂಜೆ, ಅನ್ನದಾಸೋಹ, ಪ್ರಸಾದ ವಿತರಣೆಗೆ ವಿಧಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸಿ ರಾಜ್ಯ ಸರ್ಕಾರ ಈ ಸಂಬಂಧ ಆದೇಶವನ್ನು ಹೊರಡಿಸಿದೆ.
ಇನ್ನು ಮುಂದೆ ರಾಜ್ಯದ ಎಲ್ಲಾ ದೇವಸ್ಥಾನ (Temple), ಮಠ, ಮಂದಿರಗಳಲ್ಲಿ ಬೃಹತ್ ಜಾತ್ರೆ, ಬ್ರಹ್ಮರಥೋತ್ಸವ, ವಿಶೇಷ ಉತ್ಸವ, ಅನ್ನ ದಾಸೋಹ, ಪ್ರಸಾದ ವಿತರಣೆ ಇತ್ಯಾದಿ ಪೂಜಾ ಕೈಂಕರ್ಯಗಳನ್ನು ನಡೆಸಬಹುದಾಗಿದೆ.
ಕರೋನಾ (Covid 19) ಹಿನ್ನೆಲೆಯಲ್ಲಿ ರಾಜ್ಯ ಸಕಾರ ಎಲ್ಲಾ ರೀತಿಯ ಧಾರ್ಮಿಕ ಆಚರಣೆಗಳನ್ನು (Religious Fair) ನಿಷೇಧಿಸಿತ್ತು. 2020ರ ಸೆಪ್ಟೆಂಬರ್ 1 ರಂದು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಷರತ್ತಿಗೆ ಒಳಪಟ್ಟು ದೈನಂದಿನ ಪೂಜಾ ವಿಧಿಗಳಿಗೆ ಅವಕಾಶ ನೀಡಲಾಗಿತ್ತು ಆದರೆ, ಸಿಕ್ಕಾಪಟ್ಟೆ ಜನರು ಸೇರುವ ಜಾತ್ರೆ, ಬ್ರಹ್ಮರಥೋತ್ಸವ ಮುಂತಾದ ಧಾರ್ಮಿಕ ಕಾರ್ಯಗಳಿಗೆ ನಿಷೇಧ ಹಾಗೇ ಮುಂದುವರಿದಿತ್ತು.
ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಹೊರಡಿಸಿರುವ ಆದೇಶದಂತೆ ಜಾತ್ರೆ, ಉತ್ಸವ, ಅನ್ನದಾಸೋಹ, ವಿಶೇಷ ಪೂಜೆ ಮತ್ತು ಪ್ರಸಾದ ವಿತರಣೆಯಂತಹ ಧಾರ್ಮಿಕ ಚಟುವಟಿಕೆಗಳಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.
2020ರ ಮಾರ್ಚ್ ತಿಂಗಳಿನಿಂದಲೂ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇವಾಲಯಗಳಲ್ಲಿ ಈ ಹಿಂದಿನಂತೆ ಸಂಪ್ರದಾಯಗಳಿಗೆ ಅನುಗುಣವಾಗಿ ಉತ್ಸವ ಮತ್ತು ಪೂಜಾ ಕೈಂಕರ್ಯಗಳು ನಡೆದಿಲ್ಲ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಸರ್ಕಾರಗಳು, ಜಿಲ್ಲಾಧಿಕಾರಿಗಳು ಹೊರಡಿಸಿರುವ ಮತ್ತು ಹೊರಡಿಸಲಿರುವ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಈ ಎಲ್ಲ ಕಾರ್ಯಗಳನ್ನೂ ನಡೆಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
