ಭಿಕ್ಷುಕನ ಕೃತಕ ಕಾಲಿನಲ್ಲಿತ್ತು ಬರೋಬ್ಬರಿ 96ಸಾವಿರ ರೂ..!!!

ಬೆಂಗಳೂರು :

       ನಗರದಲ್ಲಿ ಮೃತಪಟ್ಟ ಭಿಕ್ಷುಕನ ಬಳಿ 96 ಸಾವಿರ ಹಣ ಪತ್ತೆಯಾದ ಘಟನೆ ಬೆಂಗಳೂರಿನ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ವಿಷಯ ತಿಳಿದು ಮೃತಪಟ್ಟ ಭಿಕ್ಷುಕನ ಶವ ಸ್ಥಳಾಂತರಿಸಲು ಹೋದ ಪೋಲಿಸರು, ಆತನ ಕೃತಕ ಕಾಲಿನಲ್ಲಿದ್ದ ಹಣ ಕಂಡು ಬೆರಗಾಗಿದ್ದಾರೆ. 

      ಮೃತರನ್ನು ಷರೀಫ್‌ (70) ಎಂದು ಗುರುತಿಸಲಾಗಿದೆ. ಷರೀಫ್‌ 12 ವರ್ಷಗಳಿಂದ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಬಳಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ಕಳೆದ ಐದು ವರ್ಷಗಳಿಂದ ಷರೀಫ್‌ರಿಗೆ ಗ್ಯಾಂಗ್ರಿನ್‌ ಆಗಿದ್ದರಿಂದ ಕಾಲೊಂದನ್ನು ಕತ್ತರಿಸಿ ಕೃತಕ ಕಾಲು ಅಳವಡಿಸಲಾಗಿತ್ತು. ಮಂಗಳವಾರ ಬೆಳಗ್ಗೆ 10ರ ಸುಮಾರಿಗೆ ಷರೀಫ್‌ ರೈಲ್ವೆ ನಿಲ್ದಾಣದ ಬಳಿ ಮೂತ್ರ ಮಾಡಲು ತೆರಳಿ ವೇಳೆ ಸಾವನ್ನಪ್ಪಿದ್ದಾರೆ.

      ಮೃತ ಭಿಕ್ಷುಕನ ಕೃತಕ ಕಾಲುಗಳು ಮಾತ್ರ ಭಾರವಾಗಿದ್ದವು. ಬಳಿಕ ಕೃತಕ ಕಾಲು ಕಳಚಿದಾಗ ಷರೀಫ್‌ ಅವರ ಕೃತಕ ಪ್ಲಾಸ್ಟಿಕ್‌ ಕಾಲಿನಲ್ಲಿ   500 ರೂ. ಮುಖ ಬೆಲೆಯ 42,100 ರೂ., 20, 50 ರೂ. ಮುಖಬೆಲೆಯ ನೋಟುಗಳು ಹಾಗೂ ನಾಣ್ಯಗಳು ಪತ್ತೆಯಾಗಿವೆ. 

       ಮೃತರು ಭಿಕ್ಷೆ ಬೇಡಿ ಕೊಟ್ಟಿರುವ ಹಣ ಎಂದು ತಿಳಿದು ಬಂದಿದೆ. ಕುಟುಂಬಸ್ಥರು ಯಾರು ಇಲ್ಲದ ಕಾರಣ ಹಣವನ್ನು ಜಪ್ತಿ ಮಾಡಲಾಗಿದ್ದು, ಸಹಜವಾಗಿ ಮೃತಪಟ್ಟಿದ್ದಾರೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಮಾಹಿತಿ ನೀಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ