ಕಲಬುರಗಿ:

ಚಿಕನ್ ಊಟ ಕೊಡದಿದ್ದಕ್ಕೆ ಕೋಪಗೊಂಡ ಕ್ವಾರಂಟೀನ್ ವಾಸಿಯೋರ್ವ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ್ ಗ್ರಾಮದಲ್ಲಿ ನಡೆದಿದೆ.
ರೇಣುಕಾ ಕುಡಕಿ ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆ. ಕ್ವಾರಂಟೀನ್ನಲ್ಲಿದ್ದ ಸೋಮನಾಥ್ ಕಾಂಬಳೆ ಎಂಬ ವ್ಯಕ್ತಿ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಆಶಾ ಕಾರ್ಯಕರ್ತೆ ರೇಣುಕಾ ಕುಡಕಿ ಆರೋಪಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈನಿಂದ ವಾಪಸ್ಸಾಗಿದ್ದ ಸೋಮನಾಥ್ ಅವರನ್ನು ರೇಣುಕಾ, ಗ್ರಾಮದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸಿದ್ದರು. ಕ್ವಾರಂಟೈನ್ ಕೇಂದ್ರದಲ್ಲಿದ್ದ ಆತ ಊಟಕ್ಕೆ ಚಿಕನ್, ಮೀನು ಊಟ ಕೊಡುವಂತೆ ಕೇಳಿದ್ದಾನೆ. ಅಲ್ಲದೆ ಮಕ್ಕಳಿಗೆ ಚಿಪ್ಸ್ ತಂದುಕೊಡುವಂತೆ ಬೇಡಿಕೆಯಿಟ್ಟಿದ್ದಾನೆ. ಈ ವೇಳೆ ಆಶಾ ಕಾರ್ಯಕರ್ತೆ ರೇಣುಕಾ ಅವರು ಆಹಾರ ಸರಬರಾಜು ನನ್ನಿಂದ ಆಗುವುದಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದರಿಂದ ಆಕ್ರೋಶಗೊಂಡ ಸೋಮನಾಥ್, ರೇಣುಕಾ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ರೇಣುಕಾ ಅವರ ಕೈ ಮುರಿದಿದ್ದು, ಆಳಂದ ಪಟ್ಟಣದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮನಾಥ ಸೇರಿ ಐವರ ವಿರುದ್ಧ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








