ಬೆಂಗಳೂರು:
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನಿರೂಪಣೆಗೆ ನಟ ಸುದೀಪ್ ಅವರು ಗುಡ್ ಬೈ ಹೇಳುತ್ತಿದ್ದಂತೆಯೇ ಹಲವು ವದಂತಿಗಳು ಹರಡಿದ್ದು, ಈ ಗೊಂದಲಗಳಿಗೆ ಸ್ವತಃ ಸುದೀಪ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸುದೀಪ್ ಅವರು, ನಾನು ಇತ್ತೀಚೆಗೆ ಮಾಡಿದ ಟ್ವೀಟ್ ಬಗ್ಗೆ ನೀವೆಲ್ಲ ತೋರಿಸಿದ ಬೆಂಬಲ ಹಾಗೂ ಪ್ರೀತಿಯನ್ನು ಪ್ರಶಂಸಿಸುತ್ತೇನೆ. ಆದರೆ, ಚಾನೆಲ್ ಮತ್ತು ನನ್ನ ನಡುವೆ ಯಾವುದೇ ರೀತಿಯ ಗೊಂದಲ ಇರುವಂತೆ ಊಹಿಸಿ ಮಾತನಾಡುವುದನ್ನು, ವಿಡಿಯೋ ಮಾಡಿ ಮಾತನಾಡುವುದನ್ನು ದಯವಿಟ್ಟು ನಿಲ್ಲಿಸಿ. ನನ್ನ ಹಾಗೂ ಚಾನೆಲ್ ನಡುವೆ ಒಂದು ಸುದೀರ್ಘ ಪಾಸಿಟಿವ್ ಜರ್ನಿಯಿದೆ. ಈ ಪಯಣಕ್ಕೆ ʼಅಗೌರವʼವನ್ನು ಸೇರಿಸಿ ಮಾತನಾಡಬೇಡಿ ಎಂದು ಹೇಳಿದ್ದಾರೆ
ನೀವೆಲ್ಲ ಊಹಿಸುತ್ತಿರುವ ವಿಚಾರ ಆಧಾರರಹಿತವಾಗಿದೆ. ನಾನು ಮಾಡಿರುವ ಟ್ವೀಟ್ ನೇರ ಮತ್ತು ಪ್ರಾಮಾಣಿಕವಾಗಿದೆ. ನನ್ನ ಹಾಗೂ ಕಲರ್ಸ್ ನಡುವಿನ ಬಾಂಧವ್ಯ ಅದ್ಭುತವಾಗಿದೆ. ನನ್ನನ್ನು ಅವರು ಯಾವಾಗಲೂ ಗೌರವದಿಂದಲೇ ನಡೆಸಿಕೊಂಡಿದ್ದಾರೆ. ಕಾರ್ಯಕ್ರಮ ನಿರ್ದೇಶಕರಾಗಿರುವ ಪ್ರಕಾಶ್ ಅವರು ಒಬ್ಬ ಪ್ರತಿಭಾವಂತ ವ್ಯಕ್ತಿ. ನಾನು ಅವರ ಮೇಲೆ ತುಂಬಾ ಗೌರವವನ್ನು ಹೊಂದಿದ್ದೇನೆ. ನಾನು ಕೆಲಸ ಮಾಡುತ್ತಿರುವ ತಂಡವು ಅನಗತ್ಯ ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕುಳಿತು ಆನಂದಿಸು ವ್ಯಕ್ತಿ ನನ್ನಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಗೊಂದಲ ಹಾಗೂ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಜನರು ಎಲ್ಲಿಯವರೆಗೆ ಇಷ್ಟಪಡ್ತಾರೋ ಅಲ್ಲಿಯವರೆಗೆ ‘ಬಿಗ್ ಬಾಸ್’ ಶೋ ನಿರೂಪಣೆ ಮಾಡುತ್ತೇನೆಂದು ಎಂದು ಈ ಹಿಂದೆ ಕಿಚ್ಚ ಸುದೀಪ್ ಅವರು ಹೇಳಿದ್ದರು. ಆದರೆ, ಕೆಲ ದಿನಗಳ ಹಿಂದಷ್ಟೇ ಇದ್ದಕ್ಕಿದ್ದಂತೆಯೇ ಮುಂದಿನ ಸೀಸನ್ ನಿರೂಪಣೆ ಮಾಡೋದಿಲ್ಲ ಎಂದು ಟ್ವೀಟ್ ಮಾಡಿದ್ದರು.
