ಬೆಂಗಳೂರು :
ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದೆ. ಕಲಾವಿದರ ನಟ್ಟು ಬೋಲ್ಟ್ ಎಲ್ಲಿ ಟೈಟ್ ಮಾಡೋದು ಅಂತ ನಂಗೆ ಗೊತ್ತು ಎಂದು ಶಿವಕುಮಾರ್ ಹೇಳಿದ್ದರು. ಈ ಹೇಳಿಕೆ ಬೆಂಬಲಿಸಿ ಮಾತನಾಡಿದ್ದ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ, ಸಿಸಿಎಲ್ ಆಡಿ ಸಿನಿಮೋತ್ಸವಕ್ಕೆ ಬರದವರ ಬಗ್ಗೆಯೂ ಪರೋಕ್ಷವಾಗಿ ಟೀಕೆ ಮಾಡಿದ್ದರು. ಈ ಎಲ್ಲಾ ವಿಚಾರಗಳ ಬಗ್ಗೆ ಸುದೀಪ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರೋ ಚಕ್ರವರ್ತಿ ಚಂದ್ರಚೂಡ್ ಮಾತನಾಡಿದ್ದಾರೆ.
‘ಚಲನಚಿತ್ರ vs ಸರ್ಕಾರ ವಿಷಯ ಚರ್ಚೆ ಆಗುತ್ತಿದೆ. ಎಲ್ಲರೂ ಚಿತ್ರರಂಗದವರನ್ನು ಬಯ್ಯುತ್ತಿದ್ದಾರೆ. ರವಿ ಗಣಿಗ ಚಿತ್ರರಂಗದ ಕಲಾವಿದರ ಬಗ್ಗೆ, ಚೇಂಬರ್ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ರವಿಕುಮಾರ್ ನೇರವಾಗಿ ಹೆಸರು ತೆಗೆದುಕೊಂಡು ಮಾತನಾಡಬೇಕಿತ್ತು. ಆಗ ಅವರ ಮಾತಿಗೆ ತೂಕ ಬರುತ್ತಿತ್ತು. ಈ ಹೀರೋಗಳನ್ನು ಬ್ಯಾನ್ ಮಾಡಬೇಕು ಎಂದು ಅವರು ಹೇಳಿದ್ದಾರೆ. ಶಾಸಕರಾಗಿ ಈ ಹೇಳಿಕೆ ನೀಡಬಾರದು. ಹಿಟ್ಲರ್ ರೀತಿ ಆಡಬಾರದು’ ಎಂದಿದ್ದಾರೆ ಚಕ್ರವರ್ತಿ ಚಂದ್ರಚೂಡ್. ಅಲ್ಲದೆ, ರವಿಕುಮಾರ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
‘ಕಿಚ್ಚ ಸುದೀಪ್ ಬಗ್ಗೆ ಮಾತನಾಡಿದ್ದೀರಿ. 2004ರಿಂದ ಈವರೆಗೆ ಅವರು ಅವಾರ್ಡ್ ತೆಗೆದುಕೊಂಡಿಲ್ಲ. ಪ್ರಶಸ್ತಿಯನ್ನು ನಯವಾಗಿ ನಿರಾಕರಿಸಿದ್ದರು. ಈ ಮೊದಲು ಅವಾರ್ಡ್ಗೆ ಕೊಡುತ್ತೇವೆ ಎಂದು ಕೊಟ್ಟಿಲ್ಲ. ರಾಜ್ಯ ಪ್ರಶಸ್ತಿ ಎಂದರೆ ಅಸಹ್ಯವಾಗಿ ಹೋಗಿದೆ. ಅವಾರ್ಡ್ ನಿರಾಕರಿಸೋದಕ್ಕೆ ಅವರದ್ದೇ ಆದ ಕಾರಣ ಇರುತ್ತದೆ’ ಎಂದು ಸುದೀಪ್ ಪರ ಬ್ಯಾಟ್ ಬೀಸಿದ್ದಾರೆ.
