ಮಹಿಳೆ ಆತ್ಮಹತ್ಯೆ : ವರದಕ್ಷಿಣೆ ಕಿರುಕುಳ ಆರೋಪ

 ಮಿಡಿಗೇಶಿ :

      ಕೇವಲ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವವಧು ಗಂಗಾದೇವಿ ಗಂಡ ರವಿಕುಮಾರ್, ಅತ್ತೆ ರತ್ನಮ್ಮ ಕೋಂ ಹನುಮಂತರಾಯಪ್ಪರವರ ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೋಬಳಿಗೆ ಸೇರಿದ ರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್.ಗೊಲ್ಲಹಳ್ಳಿ ಗ್ರಾಮದಲ್ಲಿ ಡಿ. 3 ರಂದು ನಡೆದಿದೆ.

       ಘಟನೆ ಬಗ್ಗೆ ಮೃತಳ ತಂದೆ ಗಂಗಾಧರಪ್ಪ ಡಿ. 4 ರಂದು ಮಿಡಿಗೇಶಿ ಪೋಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿದ್ದು, ಸದರಿ ದೂರಿನನ್ವಯ ಮಿಡಿಗೇಶಿ ಪೋಲಿಸ್ ಸಬ್ ಇನ್‍ಸ್ಪೆಕ್ಟರ್ ಹನುಮಂತರಾಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತಳ ಶವ ಪರೀಕ್ಷೆಯನ್ನು ಮಧುಗಿರಿ ತಾಲ್ಲೂಕು ಆಸ್ಪತ್ರೆಯಲ್ಲಿ ನಡೆಸಲಾಗಿರುತ್ತದೆ. ಸದರಿ ಘಟನಾ ಸ್ಥಳಕ್ಕೆ ಡಿ.ವೈ.ಎಸ್.ಪಿ. ಪ್ರವೀಣ್‍ಕುಮಾರ್ ಮಧುಗಿರಿ ಉಪವಿಭಾಗದರವರು ಭೇಟಿ ನೀಡಿದ್ದು ಆರೋಪಿಗಳನ್ನು ದಸ್ತಗಿರಿ ಮಾಡಿದ್ದು ಮುಂದಿನ ತನಿಖೆ ಕೈಗೊಂಡಿರುತ್ತಾರೆ.

      ರವಿಕುಮಾರ್ ಜೊತೆ ಕಳೆದ ನಾಲ್ಕು ತಿಂಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿ ಬೀರಮಂಗಲ ಗ್ರಾಮದ ಗಂಗಾಧರಪ್ಪನವರ ಮಗಳು ಗಂಗಾದೇವಿಯ ವಿವಾಹ ನಡೆದಿತ್ತು. ಮದುವೆಯ ಸಮಯದಲ್ಲಿ ವರನಿಗೆ ಒಂದು ಬಂಗಾರದ ಉಂಗುರ ಹಾಗೂ ಒಂದು ಲಕ್ಷರೂಪಾಯಿ ನಗದು ನೀಡಲಾಗಿತ್ತು. ವಧುವಿಗೆ ನೂರು ಗ್ರಾಂ ಬಂಗಾರದ ಒಡವೆಗಳನ್ನು ನೀಡಿರುವುದಾಗಿಯೂ ಗಂಗಾಧರಪ್ಪ ನೀಡಿರುವ ದೂರಿನಲ್ಲಿ ದಾಖಲಿಸಿದ್ದಾರೆ. ಇಷ್ಟಾಗಿಯೂ ಆರೋಪಿ ರವಿಕುಮಾರ್ ತನ್ನ ಪತ್ನಿಗೆ ಮತ್ತಷ್ಟು ಹಣ ಹಾಗೂ ದ್ವಿ ಚಕ್ರವಾಹನವನ್ನು ತವರು ಮನೆಯಿಂದ ತರುವಂತೆ ಕಿರುಕುಳ ನೀಡಿದ್ದಾನೆಂದು ಆರೋಪಿಸಲಾಗಿದೆ.

      ಗಂಗಾದೇವಿ ಆತ್ಮಹತ್ಯೆ ಬಗ್ಗೆ ಜಯಮ್ಮ ಕೋಂ ತಿಮ್ಮಣ್ಣನವರು ಮೃತಳ ಸಂಬಂಧಿಕರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾಗಿಯೂ ದೂರಿನಲ್ಲಿ ದಾಖಲಾಗಿದೆ. ಜನ ಸಾಮಾನ್ಯರು, ವಿವಿಧ ಸಂಘ ಸಂಸ್ಥೆಗಳು ವರದಕ್ಷಿಣೆ ಕಿರುಕುಳದ ಎಂಬ ಪಿಡುಗು ಕೊನೆಗೊಳ್ಳುವುದು ಎಂದಿಗೆ ಎಂದು ಆತಂಕ ವ್ಯಕ್ತ ಪಡಿಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link