ವಾಷಿಂಗ್ಟನ್:
9 ತಿಂಗಳು ಬಾಹ್ಯಾಕಾಶದಲ್ಲಿದ್ದು, ಇದೀಗ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಇದೀಗ ತಮ್ಮ ಸುನಿತಾ ಸುದೀರ್ಘ ಬಾಹ್ಯಾಕಾಶ ವಾಸ್ತವ್ಯದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಭೂಮಿಗೆ ಮರಳಿದ ಬಳಿಕ ಇದೇ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುನೀತಾ ವಿಲಿಯಮ್ಸ್, “ಬಾಹ್ಯಾಕಾಶದಿಂದ ಭಾರತವನ್ನು ನೋಡುವುದೇ ಒಂದು ಸುಂದರ ಅನುಭವ.” ಎಂದು ಹೇಳಿದ್ದಾರೆ. ಗಗನಯಾತ್ರಿ ಸುನಿತಾ ಭಾರತಕ್ಕೆ ಬರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತದ ಬಗ್ಗೆ ಮಾತನಾಡಿ “ನಾವು ಅನೇಕ ಬಾರಿ ಭಾರತವನ್ನು ಹಾದು ಹೋಗಿದ್ದೇವೆ. ಪ್ರತಿ ಬಾರಿಯೂ ನಾನು ಗುಜರಾತ್ ಮತ್ತು ಹಿಮಾಲಯವನ್ನು ಅತ್ಯಂತ ಕುತೂಹಲಭರಿತವಾಗಿ ನೋಡುತ್ತಿದ್ದೆ ಎಂದು ಹೇಳಿದ್ದಾರೆ.
ಭಾರತಕ್ಕೆ ಬರುವ ಇಚ್ಛೆಯನ್ನು ವ್ಯಕ್ತಪಡಿಸಿದ ಅವರು , ಭಾರತ ಭೇಟಿಗೆ ತಾವು ಉತ್ಸುಕರಾಗಿರುವುದಾಗಿ ಹೇಳಿದರು. “ನಾನು ನನ್ನ ತಂದೆಯ ತವರು ದೇಶಕ್ಕೆ ಭೇಟಿ ನೀಡಲು ಬಯಸಿದ್ದೇನೆ. ನನ್ನ ಸುದೀರ್ಘ ಬಾಹ್ಯಾಕಾಶ ವಾಸ್ತವ್ಯದ ಅನುಭವಗಳನ್ನು ನಾನು ಭಾರತೀಯರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ..” ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದಾರೆ. ಭಾರತ ಭೇಟಿ ಸಂದರ್ಭದಲ್ಲಿ ನಾನು ಇಸ್ರೋಗೆ ಭೇಟಿ ನೀಡಲು ಬಯಸುತ್ತೇನೆ. ಭಾರತದ ಬಾಹ್ಯಾಕಾಶ ಯೋಜನೆಗಳು ಜಗತ್ತಿನ ಗಮನ ಸೆಳೆಯುತ್ತಿದ್ದು, ಇಸ್ರೋದ ಕಾರ್ಯವೈಖರಿ ಬಗ್ಗೆ ತಿಳಿದುಕೊಳ್ಳಲು ನಾನು ಉತ್ಸುಕಳಾಗಿದ್ದೇನೆ ಎಂದರು.
ಭಾರತ ನನ್ನ ತಂದೆಯ ತವರು ರಾಷ್ಟ್ರ. ಗುಜರಾತ್ ರಾಜ್ಯದ ಬಗ್ಗೆ ನಾನು ಅವರಿಂದ ಹಲವಾರು ಸಂಗತಿಗಳನ್ನು ಕೇಳಿ ತಿಳಿದಿದ್ದೇನೆ. ಗುಜರಾತ್ಗೆ ಭೇಟಿ ನೀಡುವುದು ನನ್ನ ಬಹುದಿನಗಳ ಆಸೆಯಾಗಿದ್ದು, ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುತ್ತೇನೆ..” ಎಂದು ಸುನಿತಾ ವಿಲಿಯಮ್ಸ್ ತಿಳಿಸಿದರು. ಸುನಿತಾ ವಿಲಿಯಮ್ಸ್ ಮರಳಿ ಭೂಮಿಗೆ ಬರುವ ದಿನಾಂಕ ಗೊತ್ತಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಸುನಿತಾಗೆ ಪತ್ರ ಬರೆದಿದ್ದರು. ಅದರಲ್ಲಿ ಅವರು ಸುನಿತಾ ತವರು ರಾಜ್ಯ ಗುಜರಾತ್ ತನ್ನ ಹೆಮ್ಮೆಯ ಪುತ್ರಿಯನ್ನು ಬರ ಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದೆ ಎಂದು ಹೇಳಿದ್ದರು. ನಿಮ್ಮ ಬಾಹ್ಯಾಕಾಶ ಅನುಭವಗಳನ್ನು ಭಾರತದ ಯುವ ಸಮುದಾಯದೊಂದಿಗೆ ನೀವು ಹಂಚಿಕೊಳ್ಳುತ್ತೀರಿ ಎಂಬ ನಂಬಿಕೆ ಇದೆ ಎಂದು ಉಲ್ಲೇಖಿಸಿದ್ದರು.
ಸುನಿತಾ ಅವರ ಅತ್ತಿಗೆ ಕೂಡ ಸುನಿತಾ ಭಾರತಕ್ಕೆ ಬರುವುದರ ಸುಳಿವು ನೀಡಿದ್ದರು. ಅವರು ಭಾರತಕ್ಕೆ ಬಂದಾಗ ಸಮೋಸಾ ಪಾರ್ಟಿ ಏರ್ಪಡಿಸುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೆ ಸುನಿತಾ ಮಹಾ ಕುಂಭ ಮೇಳದ ಕುರಿತು ತನ್ನಲ್ಲಿ ವಿಚಾರಿಸಿದ್ದಾಗಿ ತಿಳಿಸಿದ್ದರು.
