ಸೂರತ್:
ದೇಶದ ಹಲವು ನಗರಗಳು ಕೊಳಗೇರಿ ಮುಕ್ತವಾಗಲು ಒದ್ದಾಡುತ್ತಿರುವ ಮಧ್ಯೆಯೇ ಈಗ ಒಂದು ಶುಭ ಸುದ್ದಿ ಗುಜರಾತ್ ನಿಂದ ಸಿಕ್ಕಿದೆ. ದೇಶದ ದೇಶದ ವಜ್ರ ರಾಜಧಾನಿ ಎಂದೇ ಖ್ಯಾತಿ ಪಡೆದ ಸೂರತ್ ದೇಶದ ಮೊದಲ ಕೊಳೆಗೇರಿ ಮುಕ್ತ ನಗರ ವಲಯವಾಗಿ ಗುರುತಿಸಲ್ಪಡಲಿದ್ದು, ಈ ಮೂಲಕ ಇತಿಹಾಸ ಬರೆಯಲು ಸಜ್ಜಾಗಿದೆ. ಸ್ವಚ್ಛತಾ ದಾಖಲೆ ಮತ್ತು ತ್ವರಿತ ಆರ್ಥಿಕ ಬೆಳವಣಿಗೆಗೆ ಹೆಸರುವಾಸಿಯಾದ ಸೂರತ್ ನಲ್ಲಿ ಇದೀಗ ಪ್ರತಿಯೊಬ್ಬ ಕೊಳಗೇರಿ ನಿವಾಸಿಗೂ ಮನೆ ನಿರ್ಮಿಸಿಕೊಡಲಾಗಿದ್ದು, ಕೊಳೆಗೇರಿ ಮುಕ್ತ ವಲಯವಾಗುವ ಕೊನೆಯ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂರತ್ ಕೊಳೆಗೇರಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಕೊನೆಯ ಹಂತದಲ್ಲಿದೆ. ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ರಾಜ್ಯ ವಸತಿ ನೀತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ವಸತಿ ಬ್ಲಾಕ್ಗಳಾಗಿ ಮಾಡಿದೆ. ಇದರಿಂದ ಕೊಳೆಗೇರಿಯಲ್ಲಿ ವಾಸಿಸುವ ಪ್ರತಿಯೊಬ್ಬ ನಿವಾಸಿಗೂ ವಸತಿ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂರತ್ ಅನ್ನು ಕೊಳೆಗೇರಿ ಮುಕ್ತ ವಲಯವಾಗಿ ಬೃಹತ್ ವಿಸ್ತೀರ್ಣದ ಸ್ಥಳವನ್ನು ತೆಗೆದುಕೊಂಡು ಪುನರಾಭಿವೃದ್ಧಿಯನ್ನು ಮಾಡಲಾಗಿದೆ. ಇಲ್ಲಿ ಆಧುನಿಕ ಬಹುಮಹಡಿ ಅಪಾರ್ಟ್ ಮೆಂಟ್ ಗಳನ್ನೂ ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಸುಸಜ್ಜಿತ ಫ್ಲಾಟ್ಗಳನ್ನು ನಿರ್ಮಿಸಲಾಗುತ್ತಿದೆ. ಈ ಹೊಸ ವಸತಿ ಸೌಲಭ್ಯಗಳಲ್ಲಿ ಒಳಚರಂಡಿ, ಪೈಪ್ ಮೂಲಕ ನೀರು ಸರಬರಾಜು, ಬೀದಿ ದೀಪ ಮತ್ತು ಸುಸಜ್ಜಿತ ರಸ್ತೆಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿದೆ.
ಕಳೆದ ಕೆಲವು ವರ್ಷಗಳಿಂದ ಲಕ್ಷಾಂತರ ಜನರಿಗೆ ಈಗಾಗಲೇ ಶಾಶ್ವತ ಮನೆಗಳನ್ನು ಒದಗಿಸಿದೆ. ಈ ಮೂಲಕ ಸೂರತ್ನ ಪ್ರಗತಿ ಪಥದಲ್ಲಿ ಗುಜರಾತ್ ಮಾತ್ರವಲ್ಲ ದೇಶದ ಎಲ್ಲ ನಗರಗಳಿಗೂ ಮಾದರಿಯಾಗಿ ಗುರುತಿಸಲ್ಪಟ್ಟಿದೆ.
ಈ ಕುರಿತು ಬುಧವಾರ ಹೇಳಿಕೆ ನೀಡಿರುವ ಗುಜರಾತ್ ಸಚಿವ ಜಿತು ವಘಾನಿ, 70 ರಿಂದ 80 ಲಕ್ಷ ಜನಸಂಖ್ಯೆ ಹೊಂದಿರುವ ದೇಶದ ಮೊದಲ ಕೊಳೆಗೇರಿ ಮುಕ್ತ ನಗರವಾಗುವತ್ತ ಸೂರತ್ ಹತ್ತಿರವಾಗುತ್ತಿದೆ. ಪ್ರಸ್ತುತ ಚಂಡೀಗಢವು 10 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ದೇಶದ ಮೊದಲ ಕೊಳೆಗೇರಿ ಮುಕ್ತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಸೂರತ್ ಇದನ್ನು ಸಾಧಿಸಿದರೆ 70- 80 ಲಕ್ಷ ಜನಸಂಖ್ಯೆ ಇರುವ ಕೊಳೆಗೇರಿ ಮುಕ್ತವಾದ ಮೊದಲ ನಗರವಾಗಲಿದೆ ಎಂದು ಅವರು ಹೇಳಿದರು.
ಗಾಂಧಿನಗರದಲ್ಲಿ ನಡೆದ ಸಂಪುಟ ಸಭೆಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ನಗರಗಳನ್ನು ಕೊಳೆಗೇರಿ ಮುಕ್ತಗೊಳಿಸುವ ಯೋಜನೆಯನ್ನು ಪ್ರಾರಂಭಿಸಿದರು. 2006ರಲ್ಲಿ ಶೇ. 36ರಷ್ಟು ಜನರು ವಾಸವಾಗಿದ್ದ ಕೊಳೆಗೇರಿಗಳಲ್ಲಿ ಇಂದು ಕೇವಲ ಶೇ. ೫ರಷ್ಟು ಇದ್ದಾರೆ ಎಂದು ವಘಾನಿ ತಿಳಿಸಿದರು.








