ಬೆಂಗಳೂರು:
ರಾಜ್ಯದ ರೈತರು ಒಂದಿಲ್ಲೊಂದು ರೀತಿಯಲ್ಲಿ ನಿರಂತರ ಸಂಕಷ್ಟ ಎದುರಿಸುತ್ತಲೇ ಇದ್ದಾರೆ. ಪ್ರವಾಹ, ಬರಗಾಲದಂತಹ ಪ್ರಕೃತಿ ವಿಕೋಪದಿಂದ ಬೆಳೆದ ಬೆಳೆ ಬಾರದೆ, ಬೆಳೆ ಬಂದರೂ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ರೈತರ ಆತ್ಮಹತ್ಯೆ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ.
ರಾಜ್ಯ ಸರ್ಕಾರ ರೈತರು ಹಾಗೂ ಅವರ ಕುಟುಂಬಕ್ಕೆ ನೆರವಾಗಲು ತೆಲಂಗಾಣ ಮಾದರಿಯ ವಿಮಾ ಯೋಜನೆ ಜಾರಿಗೆಗೊಳಿಸಬೇಕೆಂಬ ಬೇಡಿಕೆ ಕೇಳಿ ಬಂದಿದೆ. ಇದರಿಂದ ರೈತರು ಅಕಾಲಿಕ ಮರಣ ಹೊಂದಿದಾಗ ಅಥವಾ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಾಗ ಅವರ ಕುಟುಂಬಕ್ಕೆ ಐದು ಲಕ್ಷ ರೂ. ವಿಮಾ ಪರಿಹಾರ ದೊರೆಯಲಿದೆ.
ಏನಿದು ತೆಲಂಗಾಣ ಮಾದರಿ ?:
ತೆಲಂಗಾಣ ರಾಜ್ಯದಲ್ಲಿ ರಾಜ್ಯದ ಎಲ್ಲ ರೈತರ ಹೆಸರಿನಲ್ಲಿ ಅಲ್ಲಿನ ಸರ್ಕಾರವೇ ವಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ಪ್ರತಿ ರೈತರ ಹೆಸರಿನಲ್ಲಿ ಸುಮಾರು 2600 ರೂ, ಗಳನ್ನು ಪ್ರತಿ ವರ್ಷ ಸರ್ಕಾರವೇ ವಿಮೆಯ ಕಂತನ್ನು ಕಟ್ಟುತ್ತದೆ.
ತೆಲಂಗಾಣದಲ್ಲಿ ಸುಮಾರು 58 ಲಕ್ಷ ರೈತರಿದ್ದು, ಎಲ್ಲರ ಹೆಸರಿನಲ್ಲಿ ರಾಜ್ಯ ಸರ್ಕಾರವೇ ವಿಮೆ ಹಣವನ್ನು ಭರಿಸುತ್ತದೆ. ಅಲ್ಲಿನ ರೈತರು ಸಹಜ ಸಾವೀಗೀಡಾದರೂ ಅವರ ಕುಟುಂಬಕ್ಕೆ 5 ಲಕ್ಷ ರೂ. ವಿಮೆ ದೊರೆಯುವಂತೆ ಮಾಡಲಾಗಿದೆ. ಇದರಿಂದ ರೈತರ ಕುಟುಂಬಕ್ಕೆ ಸಂಕಷ್ಟದಲ್ಲಿ ಆರ್ಥಿಕ ಬಲ ನೀಡುವ ಕೆಲಸವನ್ನು ಅಲ್ಲಿನ ಸರ್ಕಾರ ವಿಮಾ ಯೋಜನೆ ಮೂಲಕ ಮಾಡುತ್ತಿದೆ.
ರಾಜ್ಯದಲ್ಲಿ ಜಾರಿಗೆ ಮನವಿ:
ರಾಜ್ಯದಲ್ಲಿ ಸುಮಾರು 68 ಲಕ್ಷ ರೈತರಿದ್ದಾರೆ. ಪ್ರತಿ ವರ್ಷ ಒಂದಿಲ್ಲೊಂದು ಕಾರಣದಿಂದ ಸುಮಾರು 500 ರಿಂದ 1000 ರೈತರ ಆತ್ಮಹತ್ಯೆ ಪ್ರಕರಣಗಳು ಅಧಿಕೃತ ದಾಖಲಾಗುತ್ತಿವೆ. ಆದರೆ, ರಾಜ್ಯ ಸರ್ಕಾರ ಆತ್ಮಹತ್ಯೆ ಮಾಡಿಕೊಂಡ ಎಲ್ಲ ರೈತರಿಗೂ ಪರಿಹಾರ ನೀಡುತ್ತಿಲ್ಲ ಎಂಬ ಆರೋಪ ಇದೆ. ಅಲ್ಲದೇ ಸಹಜ ಸಾವು ಮತ್ತು ಬೇರಾವ ರೀತಿಯಿಂದಲೂ ರೈತ ಸತ್ತರೆ ಸರ್ಕಾರದಿಂದ ಯಾವುದೇ ಪರಿಹಾರ ದೊರೆಯುವುದಿಲ್ಲ.
ಆತ್ಮಹತ್ಯೆ ಮಾಡಿಕೊಂಡ ರೈತನ ಹೆಸರಿನಲ್ಲಿ ಜಮೀನು ಇಲ್ಲ, ಆತನ ಹೆಸರಿನಲ್ಲಿ ಸಾಲ ಇರಲಿಲ್ಲ. ಜಮೀನಿನ ದಾಖಲೆ ಸರಿ ಇಲ್ಲ ಎಂಬ ಹಲವಾರು ಕಾರಣಗಳನ್ನು ನೀಡಿ ಪರಿಹಾರ ತಪ್ಪಿಸಲಾಗುತ್ತಿದೆ ಎಂಬ ಆರೋಪವಿದೆ. ಹೀಗಾಗಿ ರೈತ ಕುಟುಂಬ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಸಂದರ್ಭದಲ್ಲಿ ವಿಮೆ ಹಣ ದೊರೆಯುವುದರಿಂದ ಆ ಕುಟುಂಬಕ್ಕೆ ಆಸರೆಯಾಗಲಿದೆ ಎನ್ನುವುದು ರಾಜ್ಯದ ರೈತರ ಬೇಡಿಕೆಯಾಗಿದೆ.
ಕಿಸಾನ್ ಸಮ್ಮಾನ್ನಲ್ಲಿ ಅರ್ಧ ಪಾಲು :
ಕೇಂದ್ರ ಸರ್ಕಾರ ದೇಶದ ಎಲ್ಲ ರೈತರ ಅನುಕೂಲಕ್ಕಾಗಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ವಾರ್ಷಿಕ ಮೂರು ಕಂತಿನಲ್ಲಿ 6000 ರೂ.ಗಳನ್ನು ನೀಡುತ್ತಿದೆ. ಅದರ ಜೊತೆಗೆ ರಾಜ್ಯ ಸರ್ಕಾರವೂ 4000 ರೂ.ಗಳನ್ನು ಸೇರಿಸಿ ರೈತರಿಗೆ ಎರಡು ಕಂತುಗಳಲ್ಲಿ ತನ್ನ ಪಾಲಿನ ಹಣವನ್ನು ನೀಡುತ್ತಿದೆ.
ಅದರ ಬದಲು ಸರ್ಕಾರ ವಾರ್ಷಿಕ ಪ್ರತಿ ರೈತನ ಹೆಸರಿನಲ್ಲಿ 2600 ರೂ. ಗಳನ್ನು ವಿಮೆ ಮಾಡಿಸಿದರೆ, ರೈತ ಅಕಾಲಿಕ ಮರಣ ಅಥವಾ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡರೆ, ಅವರ ಕುಟುಂಬಕ್ಕೆ ದೊಡ್ಡ ಮಟ್ಟದ ಆರ್ಥಿಕ ನೆರವು ನೀಡಿದಂತಾಗುತ್ತದೆ ಎನ್ನುವುದು ರೈತರ ವಾದವಾಗಿದೆ.
ಈ ಕುರಿತು ಬಜೆಟ್ನಲ್ಲಿ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ರೈತ ಮುಖಂಡರು ಮನವಿ ಮಾಡಿದ್ದು, ಈ ಬಜೆಟ್ನಲ್ಲಿ ಘೊಷಣೆಯ ನಿರೀಕ್ಷೆಯಲ್ಲಿದ್ದಾರೆ.
