ಬೆಂಗಳೂರು:
ಗುತ್ತಿಗೆದಾರರ ಬಿಲ್ಗಳನ್ನು ಶೀಘ್ರಗತಿಯಲ್ಲಿ ತೆರವುಗೊಳಿಸಲಾಗುವುದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಶುಕ್ರವಾರ ಹೇಳಿದರು.
ಬಾಕಿ ಬಿಲ್ಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸಂಘದ ಪ್ರತಿನಿಧಿಗಳೊಂದಿಗೆ ತುಷಾರ್ ಗಿರಿನಾಥ್ ಅವರು ಶುಕ್ರವಾರ ಸಭೆ ನಡೆಸಿ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.
ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಗುತ್ತಿಗೆದಾರರಿಗೆ ತಿಳಿಸಿದರು.ಆಯುಕ್ತರ ಭರವಸೆಯ ಹೊರತಾಗಿಯೂ ಗುತ್ತಿಗೆದಾರರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಡಿಸಿಎಂ ಪ್ರತಿಕ್ರಿಯೆಗಾಗಿ ಅವರು ಕಾಯುತ್ತಿದ್ದಾರೆಂದು ತಿಳಿದುಬಂದಿದೆ. ಬಾಕಿ ಇರುವ ಬಿಲ್ಗಳ ಮೊತ್ತ ಸುಮಾರು 1,700 ಕೋಟಿ ರೂಪಾಯಿಗಳಾಗಿದ್ದು, ಬಿಬಿಎಂಪಿ ಕನಿಷ್ಠ 10 ತಿಂಗಳ ಬಿಲ್ಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
2022 ರ ಏಪ್ರಿಲ್ ನಿಂದ 2024ರ ಏಪ್ರಿಲ್ ರವರೆಗೆ ಮಾಡಿದ ಕಾಮಗಾರಿಗಳ ಬಿಲ್ಗಳನ್ನು ಬಿಬಿಎಂಪಿ ಇನ್ನೂ ಕ್ಲಿಯರ್ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಗುತ್ತಿಗೆದಾರರ ಸಂಘವು ಜುಲೈ 8 ರಿಂದ ನಗರದಾದ್ಯಂತ ನಡೆಯುತ್ತಿರುವ ಎಲ್ಲಾ ಯೋಜನೆಗಳ ಕಾಮಗಾರಿಗಳನ್ನು ನಿಲ್ಲಿಸುವುದಾಗಿ ಘೋಷಿಸಿದೆ.
ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್ ಅವರು ಎಲ್ಲಾ ಎಂಟು ವಲಯಗಳ ಮುಖ್ಯ ಎಂಜಿನಿಯರ್ಗಳಿಗೆ ಪತ್ರ ಬರೆದು ಸಂಘದ ನಿರ್ಧಾರದ ಬಗ್ಗೆ ತಿಳಿಸಿದ್ದರು.
