ಬೆಂಗಳೂರು:
ವೇತನ ನೀಡದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಓಲಾ ಕಂಪನಿಯ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಕಂಪನಿಯ ಸಿಇಓ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಂಪನಿಯ ಇಂಜಿನಿಯರ್ ಆಗಿದ್ದ ಕೆ. ಅರವಿಂದ್ ಎಂಬ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭತ್ಯೆ ಹಾಗೂ ವೇತನ ನೀಡದೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಓಲಾ ಕಂಪನಿಯ ಹೋಮೋಲೋಗೇಶನ್ ಇಂಜಿನಿಯರಿಂಗ್ ವಿಭಾಗದಲ್ಲಿ ಕೆ. ಅರವಿಂದ್ ಕಾರ್ಯನಿರ್ವಹಿಸುತ್ತಿದ್ದರು. ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆ. ಅರವಿಂದ್ ಆತ್ಮಹತ್ಯೆ ಮಾಡಿಕೊಂಡ ಎರಡು ದಿನಗಳ ನಂತರ ಅಕೌಂಟಿಗೆ ಹಣ ಬಂದಿದೆ. 30ನೇ ತಾರೀಕು 17 ಲಕ್ಷ 46 ಸಾವಿರ ಹಣ ಅಕೌಂಟಿಗೆ ಬಂದಿತ್ತು. ಕಂಪನಿಯಿಂದ ಅರವಿಂದ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು.
ಅನುಮಾನದಿಂದ ಕುಟುಂಬದವರು ಕಂಪನಿಯವರನ್ನು ಪ್ರಶ್ನೆ ಮಾಡಿದ್ದಾರೆ. ಕಂಪನಿಯ ಹೆಚ್.ಆರ್. ಮತ್ತು ಸಿಬ್ಬಂದಿಯಿಂದ ಅಸ್ಪಷ್ಟ ಮಾಹಿತಿ ಸಿಕ್ಕಿದೆ. ಬಳಿಕ ಅರವಿಂದ್ ರೂಮಿನಲ್ಲಿ 28 ಪುಟಗಳ ಡೆತ್ ನೋಟ್ ಪತ್ತೆಯಾಗಿದ್ದು, ಆಗ ಕಂಪನಿಯ ವಂಚನೆ ಬಯಲಾಗಿದೆ. ಇದೀಗ ಓಲಾ ಸಂಸ್ಥೆಯ ಸಿಇಒ ಭವೇಶ್ ಅಗರ್ವಾಲ್ ಮತ್ತು ಹಿರಿಯ ಸಿಬ್ಬಂದಿ ಸುಬ್ರತ್ ಕುಮಾರ್ ದಾಸ್ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
