ವಸ್ತ್ರ ವಿವಾದ : ಮಂಕಾದ ಶೈಕ್ಷಣಿಕ ಭವಿಷ್ಯ

ತಿಪಟೂರು:

ಕೋವಿಡ್-19 ಪರಿಣಾಮವಾಗಿ ಕಳೆದ 2 ವರ್ಷಗಳಿಂದ ಶಾಲಾ-ಕಾಲೇಜುಗಳು ನಡೆಯದೆ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿತ್ತು. ಇನ್ನೇನೂ ಎಲ್ಲಾ ಸಂಕಷ್ಟಗಳು ಕಳೆದು ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲು ಸಜ್ಜಾಗಿರುವ ಹೊತ್ತಲ್ಲೆ ಹಿಜಾಬ್ ಮತ್ತು ಕೇಸರಿ ಶಲ್ಯದ ವಿಚಾರಗಳು ಮುನ್ನೆಲೆಗೆ ಬಂದು,

ಘರ್ಷಣೆ-ಗಲಾಟೆಗಳ ಕಾರಣದಿಂದ ಸರ್ಕಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದು ಕೊರೋನಾ ಕಾಲದಿಂದಲೂ ಈ ಹೊತ್ತಿನ ತನಕ ಪದೇ ಪದೇ ರಜೆಗಳ ಕಾರಣದಿಂದ ಸರಿಯಾಗಿ ತರಗತಿಗಳು ನಡೆಯದೆ ವಿದ್ಯಾರ್ಥಿಗಳ ಭವಿಷ್ಯ ಮಂಕಾಗಿದೆ.

ಆತಂಕದಲ್ಲಿ ವಿದ್ಯಾರ್ಥಿ, ಪೋಷಕರು :

ವಿದ್ಯಾವಂತರಾಗಿ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಉತ್ತಮ ಉದ್ಯೋಗ ಗಿಟ್ಟಿಸಬೇಕು, ದೇಶಕ್ಕೆ ಮಾದರಿ ಪ್ರಜೆಯಾಗಿ ಬಾಳಬೇಕು ಎಂದು ಹಲವು ವಿದ್ಯಾರ್ಥಿಗಳು ಕನಸನ್ನು ಕಟ್ಟಿಕೊಂಡು, ದೂರದ ಊರುಗಳಿಂದ ವಿದ್ಯೆಯನ್ನು ಅರಸಿ ಕಾಲೇಜುಗಳಿಗೆ ಬರುತ್ತಾರೆ. ಇದಕ್ಕೆ ಪುಷ್ಟಿಯಾಗಿ ಪೋಷಕರು ತÀಮ್ಮ ಮಕ್ಕಳು ನಮ್ಮಂತೆ ಕಷ್ಟಪಡುವುದು ಬೇಡ,

ನಾವು ಪಟ್ಟ ಕಷ್ಟವೇ ಸಾಕು ಎಂದು ಹಸಿದ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಮಕ್ಕಳ ಭವಿಷ್ಯಕ್ಕಾಗಿ ಕೂಲಿ-ನಾಲಿ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಹೊಂದಿಸಿ ಕಾಲೇಜಿಗೆ ಕಳುಹಿಸುತ್ತಾರೆ. ಆದರೇ ಪದೇ ಪದೇ ಕಾಲೇಜುಗಳು ನಡೆಯದೆ ಇರುವುದು ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕಕ್ಕೆ ಕಾರಣವಾಗಿದೆ.

ಕಾಲೇಜಿನತ್ತ ಪೋಷಕರ ದೌಡು :

ಅತಿಥಿ ಉಪನ್ಯಾಸಕರ ಮುಷ್ಕರದ ಸಂದರ್ಭದಲ್ಲಿ ತಿಂಗಳುಗಟ್ಟಲೇ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ ನಡೆಯಲೇ ಇಲ್ಲ. ಆಗ ಕಾಲೇಜುಗಳ ಕಡೆ ಬರದ ರಾಜಕೀಯ ನಾಯಕರು, ವಿದ್ಯಾರ್ಥಿಗಳ ಪೋಷಕರು ಯಾವಾಗ ಹಿಜಾಬ್ ಪ್ರಕರಣ ಮುನ್ನೆಲೆಗೆ ಬಂದಿತೊ, ಆ ಕ್ಷಣದಿಂದ ಕಾಲೇಜುಗಳ ಮುಂದೆ ದೌಡಾಯಿಸಿದರು.

ಆದರೆ ಇದೇ ಪೋಷಕರು ಹಾಗು ಮುಖಂಡರುಗಳು ವಿದ್ಯಾರ್ಥಿಗಳಿಗೆ ಪಾಠಗಳು ನಡೆಯದೇ ಇದ್ದ ಸಂದರ್ಭದಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಿದ್ದಾಗ ಕಾಲೇಜಿನ ಆಡಳಿತ ಮಂಡಲಿ ಹಾಗೂ ಸರ್ಕಾರವನ್ನು ಪ್ರಶ್ನಿಸಿದ್ದರೆ ಇಂದು ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣದ ಗುಣಮಟ್ಟವು ಸುಧಾರಿಸುತ್ತಿತ್ತು ಎಂದು ವಿದ್ಯಾರ್ಥಿಗಳು ಇವರ ನಡೆಯನ್ನು ಪ್ರಶ್ನಿಸುತ್ತಿದ್ದಾರೆ.

ಪರೀಕ್ಷೆ ಮತ್ತು ಭವಿಷ್ಯದ ಭಯ :

ಕಳೆದ 2 ವರ್ಷಗಳಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ಕೋವಿಡ್ ಆಪೋಷನ ತೆಗೆದುಕೊಂಡಿದ್ದು, ಬುಹುತೇಕ ವಿದ್ಯಾರ್ಥಿಗಳು ಅಕ್ಷರ, ಕಾಗುಣಿತ, ಮಗ್ಗಿಗಳನ್ನೆ ಮರೆತಿದ್ದು ಮತ್ತೆ ಶಾಲಾ-ಕಾಲೇಜುಗಳು ಆರಂಭವಾಗಿ ಕಲಿಕೆ ಮತ್ತೆ ಆರಂಭವಾಯಿತು ಎನ್ನುವಾಗಲೇ ಧುತ್ತನೆ ಎದುರಾದ ವಸ್ತ್ರವಿವಾದವು ವಿದ್ಯಾರ್ಥಿಗಳ ಕಲಿಕೆಗೆ ಎಡವಟ್ಟು ತಂದೊಡ್ಡಿದ್ದು,

ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ. ಇನ್ನು, ನೇರ ಕೇಲೇಜುಗಳಿಗೆ ತೆರಳಿ ತಮ್ಮ ಕಲಿಕಾ ಸಂಶಯಗಳನ್ನು ಶಿಕ್ಷಕರ ಜೊತೆ ಚರ್ಚಿಸಿ ಬಗೆಹರಿಸಿಕೊಂಡು ಸ್ವಚ್ಛಂದವಾಗಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಈಗ ಕಾಲೇಜುಗಳು ಮುಚ್ಚಿದ್ದರಿಂದ ಸೂಕ್ತ ಮಾರ್ಗ ದರ್ಶನದ ಕೊರತೆ ಉಂಟಾಗಿದ್ದು,

ಪರೀಕ್ಷೆಯಲ್ಲಿ ಎಲ್ಲಿ ಫೇಲಾಗುತ್ತೇವೆಯೊ ಎಂಬ ಭಯ ವಿದ್ಯಾರ್ಥಿಗಳನ್ನು ಕಾಡುತ್ತಿದೆ.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಮತ್ತು ಕೇಸರಿ ಶಲ್ಯದ ವಿವಾದ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಜಮಾಯಿಸಿದ್ದ ಜನಸಮೂಹ.

ಏನಿದು ಹಿಜಾಬ್…? :

ಅರಬ್ಬಿ ಭಾμÉಯಲ್ಲಿ ಹಿಜಾಬ್ ಎಂದರೇ “ಮುಸುಕು” ಎಂದರ್ಥ. ಇಸ್ಲಾಂ ಧರ್ಮದ ಪ್ರಕಾರ ದೇಹವನ್ನು ಕೂದಲಿನವರೆಗೂ ಮುಚ್ಚಿಕೊಳ್ಳುವ ಎಲ್ಲಾ ಬಟ್ಟೆ ಎಂದರ್ಥ. ಮುಸ್ಲಿಂ ಮಹಿಳೆಯರು ತಮ್ಮ ತಲೆಗಳನ್ನು ಮುಚ್ಚಿ, ಇಡೀ ಮುಖವನ್ನು ಸಂಪೂರ್ಣವಾಗಿ ಮುಕ್ತವಾಗಿ ಬಿಡುತ್ತಾರೆ. ಇದೇ ಹಿಜಾಬ್, ಇದು ಇಂದು, ನಿನ್ನೆಯಿಂದ ನಡೆದುಕೊಂಡು ಬಂದದ್ದಲ್ಲ.

ಮೊದಲಿನಿಂದಲೂ ಈ ಆಚರಣೆ ಇದೆ. ಕಾಲೇಜಿಗೆ ಬರುವ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದ ನಂತರ ಹಿಜಾಬ್ ತೆಗೆದು ಪಾಠ-ಪ್ರವಚನಗಳನ್ನು ಕೇಳುತ್ತಿದ್ದರು. ಉಡುಪಿ ಪ್ರಕರಣದ ನಂತರ ಹಿಜಾಬ್ ಪದದ ಅರ್ಥವೇನು ಎಂದು ಜನರು ಹುಡುಕಾಟದಲ್ಲಿದ್ದಾರೆ.

ಶೀಘ್ರದಲ್ಲೆ ಇವೆ ಪರೀಕ್ಷೆಗಳು :

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಬೇಕೆ, ಬೇಡವೆ ಎಂಬ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅದನ್ನು ಮುಖ್ಯ ನ್ಯಾಮೂರ್ತಿಗಳ ಪೀಠಕ್ಕೆ ವರ್ಗಾಯಿಸಲಾಗಿದೆ. ಆದರೆ ಇದರಿಂದ ಇನ್ನು ಎಷ್ಟು ದಿನ ಶಾಲೆಗೆ ರಜೆ ನೀಡಬೇಕೆಂಬುದು ನಿರ್ಧಾರವಾಗಿಲ್ಲ. ಮತ್ತೆ ಕಾಲೇಜು ಪ್ರಾರಂಭವಾದರೆ ಮತ್ತೆ ಪ್ರತಿಭಟನೆಗಳು ವಿಕೋಪಕ್ಕೆ ಹೋಗುವ ಸನ್ನಿವೇಶಗಳನ್ನು ಅಲ್ಲಗಳೆಯುವಂತಿಲ್ಲ.

ಇದರ ಮದ್ಯೆ ಮುಂದಿನ ತಿಂಗಳು ಪರೀಕ್ಷೆಗಳು ಜರುಗಲಿದ್ದು, ಈ ನಡುವೆ ಮತ್ತೆ ರಜೆಗಳು ಎದುರಾದರೆ ವಿದ್ಯಾರ್ಥಿಗಳ ಭವಿಷ್ಯವೇನು, ಆದ್ದರಿಂದ ಆದಷ್ಟು ಬೇಗ ನಿರ್ಣಯ ಕೈಗೊಂಡು ಮತ್ತೆ ಶಾಲೆ-ಕಾಲೇಜುಗಳು ಶಾಂತಿಯುತವಾಗಿ ನಡೆಯಲಿ ಎಂದು ವಿದ್ಯಾರ್ಥಿಗಳು ದಿನದೂಡುತ್ತಿದ್ದಾರೆ.

      -ರಂಗನಾಥ್ ಪಾರ್ಥಸಾರಥಿ

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link