ಬೆಂಗಳೂರು:
ಆನೇಕಲ್ ತಾಲೂಕಿನ ಪ್ರತಿಷ್ಠಿತ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ತೇರು ಉರುಳಿಬಿದ್ದ ದುರಂತದಲ್ಲಿ ಗಾಯಗೊಂಡಿದ್ದ ಯುವತಿಯೊಬ್ಬಳು ಭಾನುವಾರ ಮೃತಪಟ್ಟಿದ್ದು, ಇದರೊಂದಿಗೆ ಘಟನೆಯಲ್ಲಿ ಮೃತರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.ಮೃತಳನ್ನು ಜ್ಯೋತಿ (16) ಎಂದು ಗುರುತಿಸಲಾಗಿದೆ. ದುರ್ಘಟನೆ ಸಂಭವಿಸಿದ ದಿನ ತೇರಿನ ಕೆಳಗೆ ಸಿಲುಕಿ 28ರ ಯುವಕ ಲೋಹಿತ್ ಅವರು ಸಾವನ್ನಪ್ಪಿದ್ದರು.
ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವ ಯುವಕ ರಾಕೇಶ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮದ್ದೂರಮ್ಮ ಜಾತ್ರೆಗೆ 200 ವರ್ಷಗಳ ಇತಿಹಾಸವಿದೆ. ಟ್ರ್ಯಾಕ್ಟರ್ ಹಾಗೂ ನೂರಾರು ಎತ್ತುಗಳ ಮೂಲಕ ಎಳೆದು ತರುವ ಹೆಸರಾಂತ ಜಾತ್ರೆ ಇದು. ಪ್ರತಿಷ್ಟೆಗೆ ಅತೀ ಎತ್ತರ ತೇರು ಕಟ್ಟಿ ಎಳೆದು ತರುವ ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸುತ್ತಿದ್ದರು. ಗಾಳಿ ಸಹಿತ ಮಳೆಯಿಂದಾಗಿ ಆಯತಪ್ಪಿ ತೇರು ಬಿದ್ದಿದೆ. ಘಟನೆ ವೇಳೆ ತೇರಿನಲ್ಲಿ ಇದ್ದ ಹಲವರಿಗೂ ಗಾಯಗಳಾಗಿವೆ. ಕಳೆದ ವರ್ಷ ಹೀಲಲಿಗೆ ತೇರು ಬಿದ್ದಿತ್ತು. ಗಾಳಿ ಮಳೆ ಹೆಚ್ಚಾಗಿ ಸುರಿದ ಹಿನ್ನೆಲೆ ಮತ್ತೆ ಅವಘಡ ಸಂಭವಿಸಿದೆ. ಇನ್ನು ಮೃತ ಜ್ಯೋತಿ ತನ್ನ ತಾಯಿ ಗಂಗಮ್ಮನೊಂದಿಗೆ ಜಾತ್ರೆಯಲ್ಲಿ ಗೊಂಬೆ ಮಾರಾಟ ಮಾಡಲು ಬಂದಿದ್ದಳು ಎಂದು ತಿಳಿದುಬಂದಿದೆ.
ಶನಿವಾರ ಗಾಳಿ ಸಮೇತ ಮಳೆ ಬೀಳಲು ಶುರುವಾದಾಗ ತಾಯಿ ಗೊಂಬೆಗಳನ್ನು ಮತ್ತೊಂದು ಮಳಿಗೆಗೆ ಸ್ಥಳಾಂತರ ಮಾಡಲು ತೆರಳಿದ್ದರು. ಈ ಸಂದರ್ಭದಲ್ಲಿಯೇ ತೇರು ಮಳಿಗೆಯಲ್ಲಿದ್ದ ಜ್ಯೋತಿ ಮೇಲೆ ಉರುಳಿ ಬಿದಿದ್ದೆ. ಗಂಭೀರವಾಗಿ ಗಾಯಗೊಂಡಿದ್ದ ಜ್ಯೋತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಂಧ್ರ ಪ್ರದೇಶದ ಹಿಂದೂಪುರದ ಈ ಕುಟುಂಬ ಕೆಲವು ವರ್ಷದಿಂದ ಕೆಂಗೇರಿಯಲ್ಲಿ ವಾಸವಿತ್ತು. ಗಂಗಮ್ಮನಿ ಮೂರು ಮಕ್ಕಳಲ್ಲಿ ಜ್ಯೋತಿ ಎರಡನೆಯವಳು. ಸುತ್ತಮುತ್ತಲಿನ ಜಾತ್ರೆಗಳಲ್ಲಿ ಗೊಂಬೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು.
