ಬೆಂಗಳೂರು :
ಬೆಂಗಳೂರು ಸಮಾಜದಲ್ಲಿ ಪ್ರತಿಯೊಬ್ಬರೂ ಸಹನೀಯವಾಗಿ ಬದುಕುವಂತೆ ಮಾಡುವಲ್ಲಿ ಸ್ವಚ್ಛತಾ ಸಿಬ್ಬಂದಿಯ ಪಾತ್ರ ಅಮೂಲ್ಯವಾಗಿದೆ. ತಮ್ಮ ವೈಯಕ್ತಿಕ ಬದುಕಿನ ಸುಖವನ್ನು ಮರೆತು ಸಾರ್ವಜನಿಕ ಸ್ವಚ್ಛತೆಗೆ ತಮ್ಮನ್ನು ಸಮರ್ಪಿಸಿ ಕೊಂಡಿರುವ ಇಂಥವರನ್ನು ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯವೇ ಆಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮಲ್ಲೇಶ್ವರಂನ ರೋಟರಿ ಸಭಾಂಗಣದಲ್ಲಿ ಸ್ಥಳೀಯ ಬಿಜೆಪಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಸ್ವಚ್ಛತಾ ಸಿಬ್ಬಂದಿಗೆ ಗೌರವ ಸಮರ್ಪಣೆ ಮಾಡಿ ಮಾತನಾಡಿದರು.ಒಂದು ದೇಶದ ಪ್ರಗತಿ ದೊಡ್ಡದೊಡ್ಡ ಕಟ್ಟಡಗಳಲ್ಲಿ ಇಲ್ಲ; ಅದಿರುವುದು ಗುಣಮಟ್ಟದ ಮತ್ತು ನೈರ್ಮಲ್ಯದಿಂದ ಕೂಡಿರುವ ಶೌಚಾಲಯ ಹಾಗೂ ಚೊಕ್ಕಟವಾದ ಬೀದಿಗಳಲ್ಲಿ ಇದೆ. ಇದನ್ನು ಸಾಧ್ಯವಾಗಿಸಿರುವ ಶ್ರೇಯಸ್ಸು ಸ್ವಚ್ಛತಾ ಸಿಬ್ಬಂದಿಗೆ ಸಲ್ಲಬೇಕು ಎಂದು ಅವರು ಬಣ್ಣಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು, ಸ್ವಚ್ಛತಾ ಸಿಬ್ಬಂದಿಯು ನಿರ್ಮಲ ಭಾರತವನ್ನು ಕಟ್ಟುವಲ್ಲಿ ಕೊಡುತ್ತಿರುವ ಕೊಡುಗೆಯನ್ನು ಗುರುತಿಸಿ, ಅವರನ್ನು ಘನತೆಯಿಂದ ನಡೆಸಿಕೊಂಡು, ಗೌರವಿಸುವಂತಹ ಸಕಾರಾತ್ಮಕ ಸಂಸ್ಕೃತಿಯನ್ನು ತಂದಿದ್ದಾರೆ. ಜತೆಗೆ ಸ್ವಚ್ಛತಾ ಸಿಬ್ಬಂದಿಗೂ ಸಮಾನ ಸ್ಥಾನಮಾನ ಮತ್ತು ಭದ್ರತೆಗಳನ್ನು ಒದಗಿಸಲಾಗಿದೆ ಎಂದು ಅವರು ನುಡಿದರು.
ಬಿಜೆಪಿ ಸರ್ಕಾರ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್ !
ನಾವೆಲ್ಲರೂ ನಮ್ಮನಮ್ಮ ಮನೆಯಲ್ಲಿರುವ ಶೌಚಾಲಯಗಳನ್ನು ತೊಳೆಯಲೂ ಹಿಂದೇಟು ಹಾಕುತ್ತೇವೆ. ಆದರೆ ಸ್ವಚ್ಛತಾ ಸಿಬ್ಬಂದಿ ಇಡೀ ಸಮಾಜವನ್ನೇ ಶುಚಿಗೊಳಿಸುತ್ತಿದ್ದಾರೆ. ಈ ಕೆಲಸಕ್ಕೆ ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಯಂತ್ರೋಪಕರಣಗಳು ಬಂದು, ಅವರ ಬದುಕು ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಆದರೆ, ಈ ನಿಟ್ಟಿನಲ್ಲಿ ಆಗಬೇಕಾದ ಕೆಲಸಗಳು ಇನ್ನೂ ಬಹಳಷ್ಟಿವೆ ಎಂದು ಅವರು ಅಭಿಪ್ರಾಯ ಪಟ್ಟರು.ಪಾಲಿಕೆ ಮಾಜಿ ಸದಸ್ಯರಾದ ಮಂಜುನಾಥ ರಾಜು, ಹೇಮಾ ಸತೀಶ್, ಮುನಿಸ್ವಾಮಿ ಗೌಡ, ಜಯಪ್ರಕಾಶ, ಬಿಜೆಪಿ ಉತ್ತರ ಜಿಲ್ಲೆಯ ಉಪಾಧ್ಯಕ್ಷ ಡಾ.ವಾಸು, ಮಲ್ಲೇಶ್ವರ ಮಂಡಲದ ಬಿಜೆಪಿ ಅಧ್ಯಕ್ಷ ಕಾವೇರಿ ಕೇದಾರನಾಥ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
