ತುಮಕೂರು:
ಹಳ್ಳಿಗೂ ಕನ್ನ :ಸಾಕು ಪ್ರಾಣಿಗಳನ್ನು ಕಾಯುವುದೇ ಸವಾಲು
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅಂಗಡಿಗಳ ಶೆಟರ್ ಮೀಟಿ ಅದರೊಳಗಿರುವ ಬೆಲೆ ಬಾಳುವ ವಸ್ತುಗಳನ್ನು ಕದಿಯುವುದು, ನಗದು ದೋಚುವುದು, ಮನೆಗಳಿಗೆ ಕನ್ನ ಹಾಕುವ ಪ್ರಕರಣಗಳು ಸಾಮಾನ್ಯ. ಆದರೆ ಇತ್ತೀಚಿನ ಕಳವು ಪ್ರಕರಣಗಳು ನಗರ ಮತ್ತು ಪಟ್ಟಣಗಳಿಗೆ ಸೀಮಿತಗೊಂಡಿಲ್ಲ. ಗ್ರಾಮ ಮಟ್ಟಕ್ಕೂ ವಿಸ್ತರಿಸಿಕೊಂಡಿವೆ. ವಿಭಿನ್ನ ಸ್ವರೂಪ ಪಡೆದುಕೊಳ್ಳುತ್ತಿವೆ.
ಕೊರೊನಾ ನಂತರದ ದಿನಗಳು ಕಳ್ಳತನದ ಸ್ವರೂಪವನ್ನೇ ಬದಲಿಸಿಬಿಟ್ಟಿದೆ. ಸೀಮಿತ ಸಂಖ್ಯೆಯಲ್ಲಿದ್ದ ಕಳ್ಳರ ಸಂಖ್ಯೆಯೂ ಹೆಚ್ಚಳಗೊಂಡಿದೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಕಳ್ಳರ ಗುಂಪುಗಳು ಇಮ್ಮಡಿಸುತ್ತಿವೆ. ಅಷ್ಟೇ ಅಲ್ಲ, ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಕಳವು ಮಾಡುವ ಕೈಚಳಕಗಳನ್ನು ಯುವಕರು ಕಲಿಯುತ್ತಿರುವುದು ಸಾರ್ವಜನಿಕರ ಪಾಲಿಗೆ ಆತಂಕಕ್ಕೆ ಕಾರಣವಾಗಿದೆ.
ಹಳ್ಳಿ ಹಳ್ಳಿಗಳಲ್ಲಿಯೂ ಕಳ್ಳತನದ ವರದಿಗಳು ಕಂಡುಬರುತ್ತಿರುವುದು ಈಗ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮನೆಯ ಮುಂದೆ ಕಟ್ಟಿ ಹಾಕಲಾಗಿದ್ದ ದನಕರುಗಳು, ರೊಪ್ಪದಲ್ಲಿದ್ದ ಕುರಿ, ಮೇಕೆಗಳು, ಗುಡಿಸಲು ಮುಂದಿದ್ದ ಸಾಕು ಪ್ರಾಣಿಗಳು ರಾತ್ರೋರಾತ್ರಿ ಕಾಣೆಯಾಗುತ್ತಿವೆ. ನಿನ್ನೆ ಇದ್ದ ಕುರಿ, ಮೇಕೆಗಳು ಇಂದು ನಾಪತ್ತೆ. ಕೊಟ್ಟಿಗೆಯಲ್ಲಿದ್ದ ಹಸುಗಳೇ ಮಂಗಮಾಯ. ಕೆಲವು ಕಡೆ ಕೋಳಿಗಳನ್ನು ಕದಿಯಲಾಗಿದೆ.
ಕಳೆದ ಒಂದು ವರ್ಷದಿಂದ ಇಂತಹ ಕೃತ್ಯಗಳು ಹೆಚ್ಚಳಗೊಂಡಿದ್ದು ನೆಮ್ಮದಿಯಾಗಿದ್ದ ಗ್ರಾಮಗಳಲ್ಲಿಯೂ ಈಗ ಕಳ್ಳರ ಭೀತಿ ಆವರಿಸಿದೆ. ಯಾವ ಸಂದರ್ಭದಲ್ಲಿ ಸಾಕು ಪ್ರಾಣಿಗಳು ಕಾಣೆಯಾಗುವವೋ. ಎಂಬ ಆತಂಕ ಕೆಲವು ಗ್ರಾಮಗಳಲ್ಲಿ ಮನೆ ಮಾಡಿದೆ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ತುಮಕೂರು ತಾಲ್ಲೂಕು ಹಿರೇತೊಟ್ಲುಕೆರೆ ಬಳಿ ಕೊಟ್ಟಿಗೆಯ ಬೀಗ ಮುರಿದು 10 ಸಾವಿರ ರೂ.ಬೆಲೆ ಬಾಳುವ ಮೇಕೆಯನ್ನು ಕಳವು ಮಾಡಿದ್ದರು. ಅದೇ ದಿನ ಮತ್ತೊಂದು ಕಡೆ ಎರಡು ಮೇಕೆಗಳು ಕಳುವಾಗಿದ್ದವು. ಕುಚ್ಚಂಗಿ ಗ್ರಾಮದ ಬಳಿ 20 ಕೋಳಿ ಹಾಗೂ ಮೇಕೆಗಳನ್ನು ಕಳವು ಮಾಡಲಾಗಿತ್ತು. ಇದಾದ ನಂತರ ಹಿರೇಗುಂಡಗಲ್ ಬಳಿ ಕೊಟ್ಟಿಗೆಯ ಬೀಗ ಮುರಿದು ಸೀಮೆಹಸು ಕಳುವಿಗೆ ಪ್ರಯತ್ನ ನಡೆದಿತ್ತು.
ತೋವಿನಿಕೆರೆ ಸುತ್ತಮುತ್ತಲ ಗ್ರಾಮಗಳಲ್ಲಿಯೂ ಕಳೆದ ಒಂದೂವರೆ ವರ್ಷದಿಂದ ಸಾಕು ಪ್ರಾಣಿಗಳನ್ನು ಕದಿಯುವವರ ಸಂಖ್ಯೆ ಹೆಚ್ಚುತ್ತಿದೆ. ಆ ಭಾಗದಲ್ಲಿ ಬರುವ ಗೊಲ್ಲರಹಟ್ಟಿಗಳ ಬಳಿ ಸಾಕಷ್ಟು ಕುರಿ ಮತ್ತು ಮೇಕೆಗಳು ಕಾಣೆಯಾಗಿವೆ. ಈ ಒಂದೂವರೆ ವರ್ಷದ ಅವಧಿಯಲ್ಲಿ ಸುಮಾರು 50ಕ್ಕೂ ಹೆಚ್ಚು ರಾಸುಗಳು ಕಾಣೆಯಾಗಿರುವುದಾಗಿ ಆ ಭಾಗದ ಕುರಿಗಾಹಿಗಳು ಹೇಳುತ್ತಾರೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ, ಶೆಟ್ಟಿಕೆರೆ ಹೋಬಳಿಯ ಕೆಲವು ಭಾಗಗಳಲ್ಲಿ ರಾಸುಗಳನ್ನು ಕದಿಯಲಾಗಿದೆ. ಇದೇ ರೀತಿ ವಿವಿಧ ತಾಲ್ಲೂಕುಗಳಲ್ಲಿ ವಾರಕ್ಕೆ ಕನಿಷ್ಠ ಮೂರ್ನಾಲ್ಕು ಕಡೆಗಳಲ್ಲಿ ಸಾಕು ಪ್ರಾಣಿಗಳನ್ನು ಕದ್ದು ಹೊಡೆದೊಯ್ಯುವವರ ಸಂಖ್ಯೆ ಹೆಚ್ಚುತ್ತಲೇ ಇರುವುದು ರೈತಾಪಿ ವರ್ಗದಲ್ಲಿ ಆತಂಕವನ್ನು ಉಂಟು ಮಾಡಿದೆ.
ಕಳೆದ 15 ದಿನಗಳ ಅವಧಿಯಲ್ಲಿ ತುರುವೇಕೆರೆ ತಾಲ್ಲೂಕಿನ ಬುರುಡೇ ಹೊಸಹಳ್ಳಿ ಗ್ರಾಮದ ಶಂಕರೇಗೌಡ ಅವರ ತೋಟದ ಶೆಡ್ನಲ್ಲಿದ್ದ ಎರಡು ಸಾವಿರ ತೆಂಗಿನ ಕಾಯಿಗಳನ್ನು ಕದಿಯಲಾಗಿತ್ತು. ಸದರಿ ರೈತರು ತುರುವೇಕೆರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿ ಠಾಣೆಯಲ್ಲಿ ಐಪಿಸಿ ಕಲಂ 379ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆಯ ನಂತರ ನಾಗಮಂಗಲ ತಾಲ್ಲೂಕು ಮಂಚೇನಹಳ್ಳಿಯ ರಾಜೇಶ್ ಎಂಬಾತ ಈ ಕೃತ್ಯ ಎಸಗಿರುವುದು ಬಯಲಾಗಿದೆ. ಆತನಿಂದ ತೆಂಗಿನಕಾಯಿ ಹಾಗೂ ಕಳವಿಗೆ ಬಳಸಲಾಗಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇವು ಒಂದೆರಡು ಉದಾಹರಣೆಯಷ್ಟೆ. ಸಾಮಾನ್ಯವಾಗಿ ತೆಂಗಿನ ಕಾಯಿ ಕದಿಯುವುದು ವಿರಳಾತಿವಿರಳವಾಗಿತ್ತು. ತೆಂಗು ಬೆಳೆಗಾರರು ತಮ್ಮ ತೋಟದಲ್ಲಿನ ತೆಂಗಿನ ಕಾಯಿಗಳನ್ನು ಕಿತ್ತ ನಂತರ ಅವರ ತೋಟಗಳಲ್ಲಿ ಅಥವಾ ಮನೆಯ ಮುಂದೆ ಗುಡ್ಡೆ ಹಾಕಿಕೊಳ್ಳುತ್ತಾರೆ. ಯಾರೂ ಸಹ ಕದಿಯುವ ಪ್ರಯತ್ನ ಮಾಡುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ನಂಬಿಕೆ ಗ್ರಾಮೀಣ ಪ್ರದೇಶದಲ್ಲಿತ್ತು. ಆದರೆ ಈ ನಂಬಿಕೆಯೇ ಈಗ ಹುಸಿಯಾಗತೊಡಗಿದೆ. ತೆಂಗಿನ ಕಾಯಿಗೂ ಕನ್ನ ಹಾಕಲಾಗುತ್ತಿದೆ.
ವಿದ್ಯುತ್ ಕಂಬಗಳಲ್ಲಿ ವೈರ್ ಕದಿಯುವವರು, ಬೋರ್ವೆಲ್ಗಳ ಸ್ಟಾರ್ಟರ್ ಅಥವಾ ಪೈಪ್ಗಳು ಕಳುವಾಗುತ್ತಿದ್ದವು. ಈಗ ಏನು ಸಿಕ್ಕಿದರೂ ಬಿಡದಂತಹ ಪರಿಸ್ಥಿತಿಗೆ ಕಳ್ಳರು ಬಂದಿದ್ದಾರೆ. ದೇವಸ್ಥಾನಕ್ಕೆ ನುಗ್ಗಿ ಒಡವೆಗಳನ್ನು ಕದ್ದಾಗ ಸುತ್ತಮುತ್ತ ಊರುಗಳಿಗೂ ವ್ಯಾಪಿಸುತ್ತಿತ್ತು. ಈಗ ಇವೆಲ್ಲ ಸಾಮಾನ್ಯ ಎನ್ನುವಂತಾಗಿದೆ. ದೇವಸ್ಥಾನಕ್ಕೆ ನುಗ್ಗಿ ಒಡವೆ ಕದಿಯುವುದಕ್ಕಿಂತ ಹೆಚ್ಚಾಗಿ ದನ, ಕರು, ಕುರಿಗಳನ್ನು ಕದ್ದು ಒಯ್ಯುವ ಕಳ್ಳರು ಹುಟ್ಟಿಕೊಳ್ಳುತ್ತಿದ್ದಾರೆ.
ವರ್ಷಗಟ್ಟಲೆ ಶ್ರಮ ಹಾಕಿ ಜೀವನೋಪಾಯಕ್ಕಾಗಿ ತಮ್ಮ ಮನೆಯಲ್ಲಿ ರಕ್ಷಣೆಗೆ ಇರಲಿ ಎಂದು ಒಂದೆರಡು ಕುರಿಗಳನ್ನೋ, ಮೇಕೆಗಳನ್ನು ಕಟ್ಟಿಕೊಂಡಿರುವವರು ಬಹಳ ಜನ. ಹಾಗೆಯೇ ಹೈನೋದ್ಯಮ ಕಂಡುಕೊಂಡಿರುವ ರೈತರೂ ಇದ್ದಾರೆ. ಇಂತಹವರ ರಾಸುಗಳು ರಾತ್ರೋರಾತ್ರಿ ಕಾಣೆಯಾದರೆ ಅದನ್ನೇ ನಂಬಿ ಬದುಕುವವರ ಪಾಡೇನು? ಆ ಕಷ್ಟವನ್ನು ಹೇಳತೀರದು.
ಕೊರೊನಾ ನಂತರ ಕಳವು ಹೆಚ್ಚಳ
ಕಳೆದ ಎರಡು ವರ್ಷಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳನ್ನು ಹಾಗು ಕೃಷಿ ಸಲಕರಣೆಗಳನ್ನು ಕದಿಯುವವರು ಹೆಚ್ಚಾಗಿದ್ದಾರೆ. ಕುರಿ, ಮೇಕೆ, ಕೋಳಿ, ದನಕರು ಇವೆಲ್ಲವೂ ಈಗ ಕಳ್ಳರ ಪಾಲಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ನಿರುದ್ಯೋಗ ಹೆಚ್ಚುತ್ತಿರುವುದು ಹಾಗೂ ಕೊರೊನಾದಿಂದ ಜನತೆ ಸಂಕಷ್ಟಕ್ಕೆ ಸಿಲುಕಿರುವುದು. ಎಷ್ಟೋ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ನಿರೀಕ್ಷಿತ ಉದ್ಯೋಗಗಳು ದೊರಕುತ್ತಿಲ್ಲ. ಕೃಷಿಯಲ್ಲಂತೂ ವರ್ಷದಿಂದ ವರ್ಷಕ್ಕೆ ನಷ್ಟವೇ ಎದುರಾಗುತ್ತಿದೆ. ಓದಿದ ವಿದ್ಯಾವಂತ ಹುಡುಗರು ಭ್ರಮನಿರಸನಗೊಂಡು ಕಳ್ಳತನದ ಕೃತ್ಯಕ್ಕೆ ಇಳಿಯುತ್ತಿದ್ದಾರೆಂಬ ಆತಂಕ ಪ್ರಜ್ಞಾವಂತರಲ್ಲಿ ಇದೆ.
ಸಿಲುಕದೆ ಕೈಚಳಕ
ಗ್ರಾಮೀಣ ಪ್ರದೇಶಗಳಲ್ಲಿ ಇಷ್ಟೆಲ್ಲ ಕಳ್ಳತನ ನಡೆಯುತ್ತಿದ್ದರೂ ಕಳ್ಳರ ಸುಳಿವು ಪತ್ತೆಯಾಗುತ್ತಿಲ್ಲ. ದನ ಕರುಗಳ ಹಗ್ಗ ಬಿಚ್ಚುವಾಗ ಮೂಕ ಪ್ರಾಣಿಗಳು ಅಚಿಕೊಳ್ಳಬೇಕು. ನಾಯಿಗಳು ಬೊಗಳಬೇಕು. ಕಳ್ಳರನ್ನು ಅಟ್ಟಿಸಿಕೊಂಡು ಹೋಗಬೇಕು. ಒಟ್ಟಿನಲ್ಲಿ ಯಾವುದಾದರೊಂದು ಸುಳಿವು ಸಿಗಲೇಬೇಕು. ಆದರೆ ಯಾವ ಕುರುಹೂ ಇಲ್ಲದಂತೆ ರಾಸುಗಳನ್ನು ಕದ್ದೊಯ್ಯಲಾಗುತ್ತಿದೆ. ಅಪ್ಪಿ ತಪ್ಪಿ ಕಳ್ಳರು ಸಿಕ್ಕಿ ಬಿದ್ದರೆ ಹಣ್ಣುಗಾಯಿ ನೀರುಗಾಯಿ ಗ್ಯಾರಂಟಿ.
– ಸಾ.ಚಿ.ರಾಜಕುಮಾರ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
