ಹೈದರಾಬಾದ್:
ನಟ ಅಕ್ಕಿನೇನಿ ನಾಗಾರ್ಜುನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ತೆಲಂಗಾಣ ಸಚಿವೆ ಕೊಂಡ ಸುರೇಖಾ, ಮಾಜಿ ಸಚಿವ ಕೆಟಿಆರ್ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ್ದು, KCR ನಾಪತ್ತೆ ಹಿಂದೆ KTR ಸಂಚು ಇದೆ ಎಂದು ಆರೋಪಿಸಿದ್ದಾರೆ.
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಕ್ಷೇತ್ರವಾದ ಗಜ್ವೆಲ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಕೊಂಡ ಸುರೇಖಾ, ಮಾಜಿ ಸಿಎಂ ಕೆ ಚಂದ್ರಶೇಖರ ರಾವ್ ಅವರು ಇತ್ತೀಚಿನ ದಿನಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಅವರ ಪುತ್ರ ಕೆಟಿಆರ್ ಅಧಿಕಾರದಾಹಿಯಾಗಿದ್ದು, ತನ್ನ ಅಧಿಕಾರಕ್ಕಾಗಿ ತನ್ನ ತಂದೆಯನ್ನೇ ನಾಪತ್ತೆ ಮಾಡಿದ್ದಾರೆ. ಈ ಕುರಿತು ನಾಪತ್ತೆ ಪ್ರಕರಣ ದಾಖಲಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು. ಇತ್ತೀಚೆಗಷ್ಟೇ ಚಂದ್ರಶೇಖರ್ ರಾವ್ ಅವರು ತಮ್ಮ ಪತ್ನಿ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಫೋಟೋಗಳನ್ನು ಬಿಆರ್ ಎಸ್ ಪಕ್ಷ ಬಿಡುಗಡೆ ಮಾಡಿದ ಬೆನ್ನಲ್ಲೇ ಕೊಂಡ ಸುರೇಖಾ ಈ ಹೇಳಿಕೆ ನೀಡಿದ್ದಾರೆ.
ಬಿಆರ್ ಎಸ್ ಗೆ ತೆಲಂಗಾಣ ಅಧಿಕಾರ ಕೈತಪ್ಪಲು ಕೆಟಿಆರ್ ಕಾರಣ. ಕೆಟಿಆರ್ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದ ಮರುದಿನದಿಂದಲೇ ಕಾಂಗ್ರೆಸ್ ಪಕ್ಷದ ವಿರುಗ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಹತ್ತು ವರ್ಷ ಅಧಿಕಾರ ಅನುಭವಿಸಿದ ಕೆಟಿಆರ್ ಈಗ ಅಧಿಕಾರ ಕೈತಪ್ಪಿ ಏನು ಮಾಡುತ್ತಿದ್ದಾರೋ ಗೊತ್ತಿಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಕೆಟಿಆರ್ ಮೂಸಿ ನಿವಾಸಿಗಳಿಗೆ ಪ್ರಚೋದನೆ ನೀಡುತ್ತಿರುವುದು ಏಕೆ? ಕಾಂಗ್ರೆಸ್ ತಂಟೆಗೆ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೊಂಡ ಸುರೇಖಾ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಇದೇ ಕೊಂಡ ಸುರೇಖಾ ಅವರು ಅಕ್ಕಿನೇನಿ ನಾಗಾರ್ಜುನ ಕುಟುಂಬ ಮತ್ತು ಕೆಟಿಆರ್ ವಿರುದ್ಧ ಮತ್ತು ಹಲವು ಆರೋಪಗಳನ್ನು ಮಾಡಿದ್ದರು. ಹೈಡ್ರಾ ಮೂಲಕ ನಾಗಾರ್ಜುನ ಅವರ ಎನ್ ಕೆನ್ವೆಂಷನ್ ಸೆಂಟರ್ ಅತಿಕ್ರಮ ತೆರವು ಮಾಡದಿರಲು ನಟಿ ಸಮಂತಾರನ್ನು ಕಳುಹಿಸುವಂತೆ ಒತ್ತಾಯಿಸಿದ್ದರು. ಈ ವೇಳೆ ನಾಗಾರ್ಜುನ ಮತ್ತು ನಾಗ ಚೈತನ್ಯ ಇದಕ್ಕೆ ಮುಂದಾದಾಗ ಸಮಂತಾ ಒಪ್ಪಿರಲಿಲ್ಲ.ಇದೇ ಕಾರಣಕ್ಕೇ ಸಮಂತಾ ವಿಚ್ಛೇದನ ನೀಡಿದ್ದರು ಎಂದು ಸುರೇಖಾ ಆರೋಪಿಸಿದ್ದರು. ಈ ಹೇಳಿಕೆ ವ್ಯಾಪಕ ವೈರಲ್ ಆಗುತ್ತಲೇ ಸುರೇಖಾ ವಿರುದ್ಧ ಟೀಕೆಗಳು ಹರಿದುಬಂದಿತ್ತು. ಇದರ ಬೆನ್ನಲ್ಲೇ ಸಚಿವೆ ಕೊಂಡ ಸುರೇಖಾ ಕ್ಷಮೆಯಾಚಿಸಿದ್ದರು.
ಸುರೇಖಾ ಹೇಳಿಕೆಯನ್ನು ನಟ ನಾಗಾರ್ಜುನ ಕೂಡ ಖಂಡಿಸಿದ್ದರು. ಮಾತ್ರವಲ್ಲದೇ ಅವರ ವಿರುದ್ಧ 100 ಕೋಟಿ ರೂ ಮಾನನಷ್ಟ ಮೊಕ್ಕದ್ದಮೆ ಹೂಡಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.