ಚೆನ್ನೈ:
ಆಗಸ್ಟ್ 6 ರ ಬುಧವಾರ ಆರಂಭವಾಗಬೇಕಿದ್ದ ಚೆನ್ನೈ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಪಂದ್ಯಾವಳಿಯನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. ಪಂದ್ಯಾವಳಿ ನಡೆಯಬೇಕಿದ್ದ ಸ್ಥಳದಲ್ಲಿ ಅಗ್ನಿ ಅವಘಡ ಸಂಭವಿಸಿದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಟೂರ್ನಿ ಗುರುವಾರ ಆರಂಭವಾಗಲಿದೆ. ಈ ಪಂದ್ಯಾವಳಿಯಲ್ಲಿ ಭಾರತದ ಅರ್ಜುನ್ ಎರಿಗೈಸಿ ಸೇರಿ ಖ್ಯಾತ ಆಟಗಾರರು ಭಾಗವಹಿಸಲಿದ್ದಾರೆ.
“ಚೆನ್ನೈ ಹೋಟೆಲ್ ಹಯಾತ್ ರೀಜೆನ್ಸಿಯಲ್ಲಿ ಮಂಗಳವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿತು. ಎಲ್ಲಾ ಆಟಗಾರರು ಸುರಕ್ಷಿತರಾಗಿದ್ದಾರೆ ಮತ್ತು ಹತ್ತಿರದ ಮತ್ತೊಂದು ಹೋಟೆಲ್ಗೆ ಸ್ಥಳಾಂತರಿಸಲಾಗಿದೆ. ಪಂದ್ಯಾವಳಿಯನ್ನು ಒಂದು ದಿನ ಮುಂದೂಡಲಾಗಿದೆ” ಎಂದು ಗ್ರ್ಯಾಂಡ್ ಮಾಸ್ಟರ್, ಪಂದ್ಯಾವಳಿ ನಿರ್ದೇಶಕ ಶ್ರೀನಾಥ್ ನಾರಾಯಣನ್ ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಬರೆದಿದ್ದಾರೆ. ಜತೆಗೆ ಸುರಕ್ಷತಾ ಪರಿಶೀಲನೆಗಳ ನಂತರವೇ ಪಂದ್ಯಾವಳಿ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.
ಹೋಟೆಲ್ನ ಒಂಬತ್ತನೇ ಮಹಡಿಯಲ್ಲಿ ವಿದ್ಯುತ್ ದೋಷಗಳಿಂದ ಬೆಂಕಿ ಕಾಣಿಸಿಕೊಂಡ ಕಾರಣ, ಇಡೀ ಹೋಟೆಲ್ ಹೊಗೆಯಿಂದ ತುಂಬಿತ್ತು. ಮತ್ತು ಉಸಿರಾಟ ಸಮಸ್ಯೆ ಎದುರಾಗುವ ಮುನ್ನವೇ ಎಲ್ಲರೂ ಹೋಟೆಲ್ ಅನ್ನು ಖಾಲಿ ಮಾಡಬೇಕಾಯಿತು ಎಂದು ಚೆಸ್ಬೇಸ್ ಇಂಡಿಯಾ ವರದಿ ಮಾಡಿದೆ.
ಚೆನ್ನೈ ಗ್ರ್ಯಾಂಡ್ ಮಾಸ್ಟರ್ಸ್ ಟೂರ್ನಿ ಒಂದು ಕೋಟಿ ಬಹುಮಾನ ಮೊತ್ತವನ್ನು ಹೊಂದಿದ್ದು, ಎರಿಗೈಸಿ ಜತೆಗೆ,ವಿದಿತ್ ಗುಜರಾತಿ ಮತ್ತು ಅನೀಶ್ ಗಿರಿ ಭಾಗವಹಿಸಲಿದ್ದಾರೆ. ಎರಿಗೈಸಿ ಅಮೆರಿಕನ್ ಅವಾಂಡರ್ ಲಿಯಾಂಗ್ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ.








