ಈ ಇಬ್ಬರಿಂದ ಪಂದ್ಯ ಸೋತೆವು; 205 ರನ್ ಗಳಿಸಿಯೂ ಪಂಜಾಬ್ ವಿರುದ್ಧ ಸೋತಿದ್ದೇಕೆ ಎಂಬುದನ್ನು ಬಿಚ್ಚಿಟ್ಟ ಫಾಫ್

ಬೆಂಗಳೂರು:

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಿದ್ದು, ಟೂರ್ನಿಯ ಮೂರನೇ ಪಂದ್ಯ ಮಾರ್ಚ್ 27ರ ಭಾನುವಾರದಂದು ಸಂಜೆ 7.30ಕ್ಕೆ ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಅಕಾಡೆಮಿ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸುವುದರ ಮೂಲಕ ಟೂರ್ನಿಯಲ್ಲಿನ ತಮ್ಮ ಪಯಣವನ್ನು ಶುರುಮಾಡಿದವು.

ಪಂದ್ಯದಲ್ಲಿ ಎರಡೂ ತಂಡಗಳು ಸಹ 200 ರನ್‌ಗಳ ಗಡಿ ದಾಟಿದ ಹಿನ್ನೆಲೆಯಲ್ಲಿ ಪಂದ್ಯ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವನ್ನು ನೀಡಿತ್ತು. ಒಟ್ಟು 413 ರನ್‌ಗಳು ಹರಿದು ಬಂದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ಪಂಜಾಬ್ ಕಿಂಗ್ಸ್ ತಂಡಕ್ಕೆ 206 ರನ್‌ಗಳ ಗುರಿಯನ್ನು ನೀಡಿತ್ತು.

ಈ ಗುರಿಯನ್ನು ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಬೆನ್ನತ್ತಿದ ಪಂಜಾಬ್ ಕಿಂಗ್ಸ್ 19 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿ 5 ವಿಕೆಟ್‍ಗಳ ಭರ್ಜರಿ ಜಯವನ್ನು ದಾಖಲಿಸಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಕಣಕ್ಕಿಳಿದ ಪ್ರಥಮ ಪಂದ್ಯದಲ್ಲಿಯೇ ಸೋತಿದ್ದು, ಪಂದ್ಯ ಮುಗಿದ ನಂತರ ಮಾತನಾಡಿರುವ ನಾಯಕ ಫಾಫ್ ಡು ಪ್ಲೆಸಿಸ್ ಪಂದ್ಯದಲ್ಲಿ ತಂಡದ ಸೋಲಿಗೆ ಕಾರಣವಾದ ಅಂಶಗಳೇನು ಎಂಬುದನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ಏಪ್ರಿಲ್ 1,ಶ್ರೀ ಶಿವಕುಮಾರ ಸ್ವಾಮೀಜಿವರ ೧೧೫ ನೆಯ ಜಯಂತಿ

ಉತ್ತಮ ರನ್ ಗಳಿಸಿದರೂ ಸೋತಿದ್ದು ಈ ಕಾರಣಕ್ಕೆ

 ಪಂದ್ಯ ಮುಗಿದ ನಂತರ ಮಾತನಾಡಿರುವ ಫಾಫ್ ಡು ಪ್ಲೆಸಿಸ್ ತಮ್ಮ ತಂಡದ ಬ್ಯಾಟಿಂಗ್ ನಿಜಕ್ಕೂ ಒಳ್ಳೆಯ ಮಟ್ಟದಲ್ಲಿತ್ತು ಎಂದಿದ್ದಾರೆ. ಒಡಿಯನ್ ಸ್ಮಿತ್ 8 ಎಸೆತಗಳಲ್ಲಿ 25 ರನ್ ಗಳಿಸಿ ಅಬ್ಬರಿಸಿದ್ದು, ತಮ್ಮ ತಂಡ ಅವರು 2 ರನ್ ಗಳಿಸಿದ್ದಾಗ ಕ್ಯಾಚ್ ಬಿಟ್ಟದ್ದು ಹಿನ್ನಡೆಯನ್ನುಂಟು ಮಾಡಿತು ಎಂದು ಸಹ ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ. ಮೈದಾನದಲ್ಲಿದ್ದ ಇಬ್ಬನಿಯಿಂದ ತಮ್ಮ ತಂಡದ ಬೌಲಿಂಗ್ ವಿಭಾಗಕ್ಕೆ ಹಿನ್ನಡೆಯನ್ನುಂಟಾದರೂ ಸಹ ಬೌಲರ್‌ಗಳು ಉತ್ತಮವಾಗಿಯೇ ಬೌಲಿಂಗ್ ಮಾಡಿದರು, ಆದರೆ ಪಂಜಾಬ್ ಕಿಂಗ್ಸ್ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾದರು ಎಂದು ಫಾಫ್ ಡು ಪ್ಲೆಸಿಸ್ ತಿಳಿಸಿದ್ದಾರೆ.

ಪಂಜಾಬ್ ಕಿಂಗ್ಸ್ ಪವರ್‌ಪ್ಲೇನಲ್ಲಿ ಉತ್ತಮ ರನ್ ಗಳಿಸಿತು, ಚೆಂಡು ಜಾರುತ್ತಿದ್ದರೂ ಸಹ ಪಂದ್ಯದ ಮಧ್ಯದಲ್ಲಿ ನಾವು ಚೆನ್ನಾಗಿಯೇ ಪ್ರದರ್ಶನ ನೀಡಿದೆವು, ಆದರೆ ಅಂತಿಮವಾಗಿ ಓಡಿಯನ್ ಸ್ಮಿತ್ ಮತ್ತು ಶಾರುಖ್ ಖಾನ್ ಅವರ ಉತ್ತಮ ಪ್ರದರ್ಶನ ನಮ್ಮಿಂದ ಪಂದ್ಯವನ್ನು ಕಸಿದುಕೊಂಡಿತು ಎಂದು ಫಾಫ್ ಡುಪ್ಲೆಸಿಸ್ ತಂಡದ ಸೋಲಿಗೆ ಎರಡನೇ ಇನ್ನಿಂಗ್ಸ್ ವೇಳೆ ಇದ್ದ ಇಬ್ಬನಿ ಹಾಗೂ ಓಡಿಯನ್ ಸ್ಮಿತ್ ಮತ್ತು ಶಾರುಖ್ ಖಾನ್ ಅಬ್ಬರದ ಬ್ಯಾಟಿಂಗ್ ಕಾರಣವಾಯಿತು ಎಂಬುದನ್ನು ತಿಳಿಸಿದ್ದಾರೆ.

ಪಂದ್ಯ ಕೈ ತಪ್ಪಿದ್ದು ಇಲ್ಲೇ

ಫಾಫ್ ಡು ಪ್ಲೆಸಿಸ್ ಹೇಳಿದ ಹಾಗೆ ಓಡಿಯನ್ ಸ್ಮಿತ್ ಅವರ ಕ್ಯಾಚ್ ಬಿಟ್ಟದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು ಎನ್ನಬಹುದು. 15ನೇ ಓವರ್‌ನಲ್ಲಿ ಕಣಕ್ಕಿಳಿದಿದ್ದ ಓಡಿಯನ್ ಸ್ಮಿತ್ 1 ರನ್ ಗಳಿಸಿದ್ದಾಗಲೇ ಹರ್ಷಲ್ ಪಟೇಲ್ ಎಸೆದ 17ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಕ್ಯಾಚ್ ನೀಡಿದ್ದರು.

ಬಿಡುಗಡೆಯಾದ ಬೆನ್ನಲ್ಲೇ ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್ 2’ ಟ್ರೈಲರ್

ಆದರೆ ಈ ಕ್ಯಾಚ್ ಹಿಡಿಯುವಲ್ಲಿ ಅನೂಜ್ ರಾವತ್ ವಿಫಲರಾದರು. ಪರಿಣಾಮವಾಗಿ ಓಡಿಯನ್ ಸ್ಮಿತ್ ಪಂದ್ಯದಲ್ಲಿ 8 ಎಸೆತಗಳನ್ನು ಎದುರಿಸಿ ಅಜೇಯ 25 ರನ್ ಬಾರಿಸುವುದರ ಮೂಲಕ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಕಸಿದುಕೊಂಡರು ಹಾಗೂ ತಮ್ಮ ಭರ್ಜರಿ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಓಡಿಯನ್ ಸ್ಮಿತ್ ಪಡೆದರು. ಇನ್ನು ಮತ್ತೋರ್ವ ಆಟಗಾರನಾದ ಶಾರುಖ್ ಖಾನ್ ಕೂಡ 20 ಎಸೆತಗಳಲ್ಲಿ 24 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.

ತಂಡದ ಹಿನ್ನಡೆಗೆ ಇದೂ ಸಹ ಕಾರಣ

ಇನ್ನು ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಪಡೆ ಎದುರಾಳಿಗಳ ಬ್ಯಾಟ್‌ನಿಂದ ರನ್ ಚಚ್ಚಿಸಿಕೊಂಡದ್ದು ಮಾತ್ರವಲ್ಲದೇ 22 ಎಕ್ಸ್ಟ್ರಾ ರನ್‌ಗಳನ್ನು ಬಿಟ್ಟುಕೊಟ್ಟರು. ಹೀಗೆ ದೊಡ್ಡ ಮಟ್ಟದ ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟದ್ದು ಕೂಡ ತಂಡದ ಸೋಲಿಗೆ ಪ್ರಮುಖ ಕಾರಣವಾಗಿ ಪರಿಣಮಿಸಿತು ಎಂದರೆ ತಪ್ಪಾಗಲಾರದು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap