ಶಿರೂರು : ರಕ್ಷಣಾ ಕಾರ್ಯಕ್ಕೆ ಬಂತು ಸೇನಾ ತಂಡ….!

ಶಿರೂರು: 

    ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಬೆಳಗಾವಿಯಿಂದ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್‌ನ 44 ಸದಸ್ಯರ ತಂಡವನ್ನು ನಿಯೋಜಿಸಲಾಗಿದೆ.

    ಅವಶೇಷಗಳ ನಡುವೆ ನಾಪತ್ತೆಯಾದ ವ್ಯಕ್ತಿಗಳನ್ನು ವಿಶೇಷವಾಗಿ ಕಾಸರಗೋಡು ಮೂಲದ ಅರ್ಜುನ್‌ಗಾಗಿ ಶೋಧ ನಡೆಯಲಿದೆ . ಟ್ರಕ್ ಚಾಲಕ ಅರ್ಜುನ್ ಜೋಯಿಡಾ ತಾಲೂಕಿನ ಜಗಲಪೇಟೆಯಿಂದ ಮರವನ್ನು ಸಾಗಿಸುತ್ತಿದ್ದಾಗ ಆರು ದಿನಗಳ ಹಿಂದೆ ಈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿತ್ತು. ಸ್ಥಳದಲ್ಲಿ ನಿಧಾನಗತಿಯ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಕೇರಳ ಮಾಧ್ಯಮಗಳಿಂದ ತೀವ್ರ ಟೀಕೆ ವ್ಯಕ್ತವಾದ ನಂತರ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಸೇನಾ ಘಟಕ ಇಲ್ಲಿಗೆ ಆಗಮಿಸಿದೆ. ನಮ್ಮಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಸೇನಾ ಸಿಬ್ಬಂದಿ ಈಗ ಕೆಲಸ ಮಾಡುತ್ತಿದ್ದಾರೆ. ಶೀಘ್ರ ಫಲಿತಾಂಶ ಬರಲಿದೆ ಎಂದು ಭಾವಿಸುತ್ತೇವೆ ಎಂದು ಜಿಲ್ಲಾ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಕೇರಳ ಸರ್ಕಾರದಿಂದ ಮನವಿ ಮಾಡಲಾಗಿದ್ದು, ಜಿಲ್ಲಾಡಳಿತ ಸೇನೆಯ ನೆರವು ಪಡೆಯಲು ನಿರ್ಧರಿಸಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಹೇಳಿದ್ದಾರೆ. ಟ್ರಕ್ ಭೂಕುಸಿತದ ಅವಶೇಷಗಳ ಅಡಿಯಲ್ಲಿ ಹೂತುಹೋಗಿರಬಹುದು ಎಂದು ನಾವು ಭಾವಿಸುತ್ತೇವೆ. ಸೇನೆಯ ಘಟಕವು ನಾಲ್ಕು ದಿನಗಳ ಕಾಲ ಇಲ್ಲಿ ಇರುತ್ತದೆ ಎಂದು ಅವರು ಹೇಳಿದರು.

    ಶೋಧ ಕಾರ್ಯವನ್ನು ತ್ವರಿತಗೊಳಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಕರೆ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಕೇರಳ ಸಾರಿಗೆ ಸಚಿವರು ಕರೆ ಮಾಡಿದ್ದಾರೆ” ಎಂದು ಹೇಳಿದರು. ಟ್ರಕ್ ಸಿಕ್ಕಿಹಾಕಿಕೊಂಡಿರುವ ಶಂಕಿತ ಗಂಗವಳ್ಳಿ ನದಿಯಲ್ಲಿ ಸೇನಾ ಘಟಕ ಶೋಧ ನಡೆಸಲಿದೆ. ಅವರಿಗೆ NDRF, ASDRF ಮತ್ತು ಜಿಲ್ಲಾ ಪೊಲೀಸರು ನೆರವು ನೀಡಲಿದ್ದಾರೆ ಎಂದು ವಿವರಿಸಿದರು.

    ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನಾ ಘಟಕ ಸಾಕಷ್ಟು ಅನುಭವ ಹೊಂದಿದೆ ಎಂದು ಎಸ್ಪಿ ನಾರಾಯಣ್ ಹೇಳಿದ್ದಾರೆ. “ಈ ತಂಡ ಸಾಮಾನ್ಯವಲ್ಲ. ಇದು ಹಿಮಾಚಲ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ ಸದಸ್ಯರನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

    ಸೇನಾ ಘಟಕ ಸೋನಾರ್(ಜಲಾಂತರ ಶಬ್ಧ ಶೋಧಕ) ಸಿಗ್ನಲ್‌ಗಳನ್ನು ಟ್ರ್ಯಾಕ್ ಮಾಡಬಹುದು ಮತ್ತು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬಹುದು ಎಂದು ನಾರಾಯಣ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಸೇನಾ ಸಿಬ್ಬಂದಿ ಕೂಡಲೇ ಕಾರ್ಯಾಚರಣೆ ಆರಂಭಿಸಿದ್ದು, ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಎರಡು ತಂಡಗಳಾಗಿ ವಿಂಗಡಿಸಲಾಗಿದೆ. 

    ಈ ಮಧ್ಯೆ, ಭೂಕುಸಿತದಲ್ಲಿ ನಾಪತ್ತೆಯಾದವರ ಕುರಿತು ಅಂಕೋಲಾ ಪೊಲೀಸರಿಗೆ ಇನ್ನೂ ಎರಡು ದೂರುಗಳನ್ನು ಸಲ್ಲಿಸಲಾಗಿದ್ದು, ಅವರನ್ನು ಹುಡುಕುವಂತೆ ವಿನಂತಿಸಲಾಗಿದೆ. ಒಬ್ಬರು ಶಿರೂರು ನಿವಾಸಿ ಜಗನ್ನಾಥ ನಾಯ್ಕ್, ಮತ್ತೊಬ್ಬರು ಮತ್ತೆ ಶಿರೂರು ಮೂಲದ ಲೋಕೇಶ್ ನಾಯ್ಕ್. ಲೋಕೇಶ್ ನಾಪತ್ತೆಯಾದಾಗ ಭೂಕುಸಿತ ಸ್ಥಳದಲ್ಲಿರುವ ಲಕ್ಷ್ಮಣ್ ನಾಯ್ಕ್ ಒಡೆತನದ ಹೋಟೆಲ್‌ನಲ್ಲಿ ಚಹಾ ಸೇವಿಸುತ್ತಿದ್ದರು ಎನ್ನಲಾಗಿದೆ.

   ಅವಶೇಷಗಳಡಿಯಲ್ಲಿ ಹೂತು ಹೋಗಿರುವ ಲಾರಿ ಚಾಲಕ ಅರ್ಜುನ್ ಸಂಬಂಧಿಕರು ಈ ಹಿಂದೆ ದೂರು ದಾಖಲಿಸಿದ್ದರು. ಹೊಟೇಲ್ ಬಳಿ ವಿರಾಮಕ್ಕೆ ನಿಂತಿದ್ದು, ಭೂಕುಸಿತ ಸಂಭವಿಸಿದಾಗ ವಾಹನದೊಳಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆತ ಬದುಕಿರಬಹುದೆಂದು ಸಂಬಂಧಿಕರು ಶಂಕಿಸಿದ್ದು, ಫೋನ್ ರಿಂಗಣಿಸುತ್ತಿದೆ ಎಂದು ಹೇಳಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap