ಜ.11ರಿಂದ ಈ ರಾಜ್ಯಗಳಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆ, ಯೆಲ್ಲೋ ಅಲರ್ಟ್ ಘೋಷಿಸಿದ ಐಎಂಡಿ
ಚಳಿಗಾಲ ಮುಗಿದರೂ ಮಳೆಗಾಲ ಮುಗಿಯುವ ಲಕ್ಷಣಗಳೇ ಇಲ್ಲ. ದೆಹಲಿ ಸೇರಿ ಒಟ್ಟು ನಾಲ್ಕು ರಾಜ್ಯಗಳಲ್ಲಿ ಜನವರಿ 11ರಿಂದ 13ರವರೆಗೆ ಭರ್ಜರಿ ಮಳೆಯಾಗುವ ಸಾಧ್ಯತೆ ಇದ್ದು ಭಾರತೀಯ ಹವಾಮಾನ ಇಲಾಖೆ
ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದಲೂ ಮಳೆಯಾಗುತ್ತಲೇ ಇದೆ. ಐಎಂಡಿಯ ಹಿರಿಯ ವಿಜ್ಞಾನಿ ಆರ್. ಕೆ.ಜೇನಾಮನಿ ಎಎನ್ಐ ಜತೆ ಪ್ರತಿಕ್ರಿಯಿಸಿ, ಜನವರಿ 11ರಿಂದ ದೇಶದ ಪೂರ್ವ ಭಾಗಕ್ಕೆ ಪಶ್ಚಿಮ ಅಡಚಣೆಗಳು ಅಪ್ಪಳಿಸಲಿವೆ. ಹೀಗಾಗಿ ದೇಶದ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.
ಅಂದಹಾಗೇ, ಜನವರಿ 11ರಿಂದ ಒಡಿಶಾ, ಬಿಹಾರ್, ಜಾರ್ಖಂಡ ಮತ್ತು ಪಶ್ಚಿಮ ಬಂಗಾಳ, ದೆಹಲಿಯಲ್ಲಿ ಮಳೆಯಾಗಲಿದೆ. ಒಡಿಶಾದಲ್ಲಿ ಜನವರಿ 11 ಮತ್ತು 12ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜನವರಿ 11ರಂದು ಒಡಿಶಾದಲ್ಲಿ ಆಲಿಕಲ್ಲು ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಆರೆಂಜ್ ಅಲರ್ಟ್ ಎಂದರೆ ಒಡಿಶಾದಲ್ಲಿ ಅತ್ಯಂತ ಕೆಟ್ಟ ವಾತಾವರಣ ಇರಲಿದೆ ಎಂದೇ ಅರ್ಥ. ಅಂದರೆ ರಸ್ತೆ ತಡೆ, ರೈಲು ಸೇವೆಗಳು ಬಂದ್ ಆಗುವಷ್ಟು ಮಳೆಯಾಗಬಹುದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಇನ್ನು ಬಿಹಾರ, ಜಾರ್ಖಂಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಜನವರಿ 11ರಿಂದ 13ರವರೆಗೆ ಯೆಲ್ಲೋ ಅಲರ್ಟ್ ಹೇರಲಾಗಿದೆ. ಇದು ಗಂಭೀರ ಸ್ವರೂಪದ ಕೆಟ್ಟ ವಾತಾವರಣದ ಮುನ್ನೆಚ್ಚರಿಕೆಯಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಇನ್ನು ದೆಹಲಿಯಲ್ಲಿ ಮಳೆಯ ಪ್ರಮಾಣ ಸ್ವಲ್ಪ ತಗ್ಗಲಿದೆ. ಇನ್ನು ಪಂಜಾಬ್, ರಾಜಸ್ಥಾನ, ಹರ್ಯಾಣಗಳಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಲೇ ಇದೆ. ನಿನ್ನೆಯಿಂದ ಸ್ವಲ್ಪಮಟ್ಟಿಗೆ ತಗ್ಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
