ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ : ಭಾಷಣದ ಸಾರಾಂಶ ಇಲ್ಲದೆ…!

ಬೆಂಗಳೂರು

    ಹಸಿದವರಿಗೆ ಅನ್ನ ನೀಡದ ಸರ್ಕಾರ ಅತ್ಯಂತ ಜನದ್ರೋಹಿ ಸರ್ಕಾರ ಎಂದಿರುವ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್,ಮುಂದಿನ ಐದು ವರ್ಷಗಳಲ್ಲಿ ನನ್ನ ಸರ್ಕಾರ ಬುದ್ದ,ಬಸವ,ಅಂಬೇಡ್ಕರ್, ನಾರಾಯಣ ಗುರು ಮತ್ತು ಕುವೆಂಪು ಕನಸಿನ ಸಮಸಮಾಜವನ್ನು ನಿರ್ಮಿಸಲಿದೆ ಎಂದು ನಾಡಿಗೆ ಭರವಸೆ ನೀಡಿದ್ದಾರೆ.

    ಇಂದು ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು,ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ,ಗೃಹಜ್ಯೋತಿ,ಗೃಹಲಕ್ಷಿ÷್ಮ,ಯುವನಿಧಿ ಮತ್ತು ಅನ್ನಭಾಗ್ಯ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ ಸಂಪತ್ತಿನಲ್ಲಿ ಎಲ್ಲರಿಗೂ ಸಮಾನ ಪಾಲು ನೀಡುವುದು ತಮ್ಮ ಸರ್ಕಾರದ ಗುರಿ ಎಂದಿದ್ದಾರೆ.

    ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು ಸರ್ಕಾರ ಬದ್ಧವಾಗಿದೆ ಎಂದ ಅವರು,ಈ ಯೋಜನೆಯಡಿ ಈಗ ಅಕ್ಕಿಯ ಬದಲು ಹಣ ನೀಡುತ್ತಿದ್ದರೂ ಯೋಜನೆಯನ್ನು ಪರಿಪೂರ್ಣವಾಗಿ ಜಾರಿಗೆ ತಂದೇ ತರುತ್ತೇವೆ ಎಂದರು.

    ನಾವು ಜನರಿಗೆ ಸೃಷ್ಟಿಯಿಂದಲೇ ಸೃಷ್ಟಿಯಾದ ಸಂಪತ್ತಿನಲ್ಲಿ ಒಂದು ಪಾಲನ್ನು ಕೊಡುವ ಕೆಲಸವನ್ನು ಮಾಡುತ್ತಿದ್ದೇವೆಯೇ ಹೊರತು ಯಾವುದೇ ದುರುದ್ದೇಶ ಹೊಂದಿಲ್ಲ ಎಂದು ಸ್ಪಷ್ಷಪಡಿಸಿದರು.

   ಹಲವು ಕಾರಣಗಳಿಂದ ನಮ್ಮ ವ್ಯವಸ್ಥೆಯೊಳಗೆ ಭ್ರಷ್ಟಾಚಾರ ಸಾಂಸ್ಥೀಕರಣಗೊಳ್ಳುವ ಮಟ್ಟಕ್ಕೆ ಬೇರು ಬಿಟ್ಟಿದೆ ಎಂದು ವಿಷಾದಿಸಿದ ಅವರು,ಇದನ್ನು ತೊಡೆದು ಹಾಕುವುದು ಒಂದು ದೊಡ್ಡ ಸವಾಲು.ಈ ಸವಾಲನ್ನು ಎದುರಿಸಲು ಎಲ್ಲರ ಸಹಕಾರದ ಅಗತ್ಯವಿದೆ ಎಂದರಲ್ಲದೆ,ಈ ನಿಟ್ಟಿನಲ್ಲಿ ಅಗತ್ಯವಿರುವ ಆಡಳಿತಾತ್ಮಕ,ಶಾಸನಾತ್ಮಕ ಕ್ರಮಗಳನ್ನು ತಮ್ಮ ಸರ್ಕಾರ ಕೈಗೊಳ್ಳಲಿದೆ ಎಂದರು.

   ಬಡವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಪರವಾಗಿ ನಿಲ್ಲಲು ಎಲ್ಲ ಜಾತಿ,ಧರ್ಮ ಮತ್ತು ಪಂಗಡಗಳ ಜನರು ತಮ್ಮ ಪಾಲನ್ನು ನ್ಯಾಯಯುತವಾಗಿ ಪಡೆಯಲು ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ವಿವರಿಸಿದರು.

   ಸಮಾಜದ ಸಾಮರಸ್ಯವನ್ನು ಕದಡುವ ಗುಣವುಳ್ಳ ಬೆರಳೆಣಿಕೆಯ ಜನರ ದುಷ್ಟ ಚಿಂತನೆಗಳು ಈಗ ತಲೆ ಎತ್ತುತ್ತಿದೆ ಎಂದು ವಿಷಾದಿಸಿದ ಅವರು, ಭಿನ್ನ ಸಂಸ್ಖöÈತಿಗಳ ಜನರು ಒಂದುಗೂಡಿ ಬದುಕುವುದೇ ಕರ್ನಾಟಕದ ತತ್ವ ಎಂಬುದನ್ನು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಈ ನೆಲ ಪೊರೆಯುತ್ತಾ ಬಂದಿದೆ ಎಂದರು.

   ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ತರಗತಿಗಳಲ್ಲಿ ನುರಿತ ಪ್ರಾದ್ಯಾಪಕರಂತೆಯೇ ಸ್ಥಳೀಯ ಜ್ಞಾನದ ಪರ್ವತಗಳಾಗಿರುವ ರೈತರು,ಕುಶಲಕರ್ಮಿಗಳು ಮತ್ತು ವಿವಿಧ ಕ್ಷೇತ್ರಗಳ ತಜ್ಞರು ಪಾಲ್ಗೊಳ್ಳುವುದು ಅಗತ್ಯ.ಇದಕ್ಕಾಗಿ ಬೇಕಾದ ಆಡಳಿತಾತ್ಮಕ ಚೌಕಟ್ಟುಗಳನ್ನು ಸರ್ಕಾರ ರೂಪಿಸಿ,ಅನುಷ್ಟಾನಗೊಳಿಸಲಿದೆ ಎಂದು ನುಡಿದರು.

   ಬುದ್ಧಿ ಮತ್ತು ಕರುಣೆಗಳು ಸೇರಿದ ಸಮಗ್ರ ಶಿಕ್ಷಣವನ್ನು ರೂಪಿಸಲು ಬೇಕಾದ ವ್ಯವಸ್ಥೆಯನ್ನು ರಚಿಸುವ ಮೂಲಕ ನಿರ್ಭೀತ,ಮುಕ್ತ,ಉದಾರ,ವೈಚಾರಿಕ ಮತ್ತು ವೈಜ್ಞಾನಿಕವೂ ಆದ ತಜ್ಞರು,ಚಿಂತನಶೀಲ ಜನರು,ಬುದ್ಧಿವಂತರು ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಭಾಗವಹಿಸುವ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗುವುದು.

    ಅತ್ಯುತ್ತಮವಾದ ಉನ್ನತ ಶಿಕ್ಷಣವನ್ನು ರೂಪಿಸಲು ನಾವು ಸಿದ್ಧರಾಗಿದ್ದೇವೆ.ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಾಮರಸ್ಯದ ವಾತಾವರಣದಲ್ಲಿ ನಮ್ಮ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

    ದುಡಿಯುವ ವರ್ಗದ ಕಾರ್ಮಿಕರು,ಹಿರಿಯ ನಾಯಕರು,ವಿಶೇಷ ಚೇತನರು ಸೇರಿದಂತೆ ಎಲ್ಲ ವರ್ಗಗಳ ಕಲ್ಯಾಣವನ್ನು ಕೈಗೆತ್ತಿಕೊಳ್ಳುತ್ತೇವೆ.ಎಲ್ಲರಿಗೂ ಅತ್ಯುತ್ತಮ ಆರೋಗ್ಯ ವ್ಯವಸ್ಥೆಯನ್ನು ನೀಡಬೇಕೆಂಬ ಮಹತ್ತರ ಗುರಿಯನ್ನು ನಿಗದಿಪಡಿಸಿಕೊಂಡಿದ್ದೇವೆ.ಅಸ್ತಿತ್ವದಲ್ಲಿರುವ ಸಾಂಸ್ಥಿಕ ಮೂಲ ಸೌಕರ್ಯವನ್ನು ಸುಧಾರಿಸಿ ನಾಗರೀಕ ಸ್ನೇಹಿಯಾದ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಹೇಳಿದರು.

    ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ಸೂರು ಕಲ್ಪಿಸಿಕೊಡಲು ಸರ್ಕಾರ ಆದ್ಯತೆ ನೀಡಲಿದೆ.2014 ರಲ್ಲಿ ಆರಂಭಗೊಂಡ ಕೃಷಿ ಭಾಗ್ಯ ಯೋಜನೆಯನ್ನು ಮತ್ತಷ್ಟು ಸುಧಾರಿಸಿ ಪುನ: ಅನುಷ್ಟಾನಗೊಳಿಸುವುದಾಗಿ ಪ್ರಕಟಿಸಿದರು.

   ನೀರಾವರಿ ಯೋಜನೆಗಳ ಅನುಷ್ಟಾನದ ಜತೆಯಲ್ಲಿ ರೈತರ ಸಹಭಾಗಿತ್ವದಲ್ಲಿ ಕೆರೆ,ಕಟ್ಟೆ ಮುಂತಾದ ಸಣ್ಣ ಮತ್ತು ಪಾರಂಪರಿಕ ನೀರಾವರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.ಪಶುಪಾಲನೆಗೆ ಒತ್ತು ಕೊಡುವುದರ ಜತೆಗೆ ಅನ್ನದಾತರಿಗೆ ಅಗತ್ಯವಿರುವ ರಸಗೊಬ್ಬರ,ಬೀಜ,ಔಷಧ ಮತ್ತು ಇತರ ಸೌಲಭ್ಯಗಳನ್ನು ಕಾಲ,ಕಾಲಕ್ಕೆ ವಿತರಿಸಲು ಸರ್ಕಾರ ಬದ್ಧವಾಗಿದೆ.

    ಪ್ರವಾಸೋದ್ಯಮವನ್ನು ಉತ್ತೇಜಿಸಿ ಕನಿಷ್ಟ ಐದು ಲಕ್ಷ ಉದ್ಯೋಗಾವಕಾಶಗಳನ್ನು ತಮ್ಮ ಸರ್ಕಾರ ಸೃಷ್ಟಿಸಲಿದೆ ಎಂದ ಅವರು,ನಾಡಿನಲ್ಲಿರುವ ಪ್ರವಾಸಿ ಸ್ಥಳಗಳ ಪರಿಸರ,ಸೂಕ್ಷ್ಮತೆ ಹಾಗೂ ಸಂಸ್ಕೃತಿಯನ್ನು ಅರಿತು ಗೌರವಿಸುವಂತೆ ಪ್ರವಾಸಿಗರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

     ಸ್ಥಳೀಯ ಸಂಸ್ಥೆಗಳ ಸಬಲೀಕರಣ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕಟ್ಟುವಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ.ಸAವಿಧಾನದ 73 ನತ್ತಯ 74 ನೇ ತಿದ್ದುಪಡಿ ಕಾಯ್ದೆಯ ಆಶಯವನ್ನು ಅನುಷ್ಟಾನಗೊಳಿಸಲಾಗುವುದು ಎಂದು ವಿವರಿಸಿದರು.

    ಗ್ರಾಮಾಡಳಿತ ಮತ್ತು ನಗರಾಡಳೀತ ವ್ಯವಸ್ಥೆಯನ್ನು ರೂಪಿಸಲು ಪ್ರಾಮಾಣಿಕವಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ.ರಾಜ್ಯದ ಎಲ್ಲ ನಾಗರೀಕರಿಗೆ ಸುರಕ್ಷಿತ,ಶುದ್ಧವಾದ ಕುಡಿಯುವ ನೀರನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ.ಇದಕ್ಕಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ ಎಂದರು.

    ಕರ್ನಾಟಕದ ಆರ್ಥಿಕತೆಯಷ್ಟೇ ಅಲ್ಲ,ದೇಶದ ಅಭಿವೃದ್ಧಿಗೂ ಸಿಂಹಪಾಲನ್ನು ನೀಡುತ್ತಿರುವ ನಮ್ಮ ಬೆಂಗಳೂರನ್ನು ಮತ್ತೊಮ್ಮೆ ನಾವು ವಿಶ್ವದ ಗಮನ ಸೆಳೆಯುವಂತೆ ಮಾಡುತ್ತೇವೆ.

    ಒಟ್ಟಾರೆ ನಾವು ಏನು ಮಾಡಬೇಕು ಎಂಬ ನೀಲಿ ನಕಾಶೆ ನಮ್ಮ ಮುಂದಿದೆ.ನನ್ನ ಸರ್ಕಾರಕ್ಕೆ ಇಚ್ಚಾ ಶಕ್ತಿಯೂ ಇದೆ.ಅನುಭವ ಮತ್ತು ತಾರುಣ್ಯ ಬೆರೆತ ರೀತಿಯಲ್ಲಿ ಸರ್ಕಾರ ರೂಪುಗೊಂಡಿದೆ.

    ಜನರ ಹಿತಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಗೊಳಿಸಲು ನನ್ನ ಸರ್ಕಾರ ಬದ್ಧವಾಗಿ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಷಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap