ವಿದ್ಯಾರ್ಥಿಗಳ ಮುಂದೇ ತನ್ನನ್ನು ತಾನೇ ಶಿಕ್ಷಿಸಿಕೊಂಡ ಶಿಕ್ಷಕ …..!

ಅಮರಾವತಿ:

     ಆಗಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಒಂದೊಂದು ತಪ್ಪಿಗೂ ಹೊಡೆದು ಶಿಕ್ಷೆ ವಿಧಿಸುತ್ತಿದ್ದರು. ಆದರೆ ಶಾಲೆಗಳಲ್ಲಿ ದೈಹಿಕ ಶಿಕ್ಷೆ ವಿರಳವಾಗುತ್ತಿರುವ ಈ ಯುಗದಲ್ಲಿ, ಆಂಧ್ರ ಪ್ರದೇಶದ ಶಾಲೆಯೊಂದರ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳು ಮಾಡಿದ ತಪ್ಪಿಗೆ ಅವರನ್ನು ಶಿಕ್ಷಿಸಲು ಆಗದೆ ತನ್ನನ್ನು ತಾನೇ ಶಿಕ್ಷೆ ಕೊಟ್ಟುಕೊಂಡ ಘಟನೆಯೊಂದು ನಡೆದಿದೆ. ವಿಜಯನಗರಂನ ಜಿಲ್ಲಾ ಪರಿಷತ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಿಂತಾರಮಣ ತನ್ನ ಎರಡು ಕಿವಿಗಳನ್ನು ಹಿಡಿದುಕೊಂಡು ಬಸ್ಕಿ ಹೊಡೆಯುವ ಮೂಲಕ ವಿದ್ಯಾರ್ಥಿಗಳಿಗೆ ಶಾಕ್‌ ನೀಡಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

    ಮುಖ್ಯೋಪಾಧ್ಯಾಯ ಮಾಡಿದ ಈ ಅಸಾಮಾನ್ಯ ಕಾರ್ಯವನ್ನು ರಾಜ್ಯ ಸಚಿವ ನಾರಾ ಲೋಕೇಶ್ ಅವರು ಪ್ರಶಂಸಿದ್ದಾರೆ. ಹಾಗೇ ಅವರು ಈ ವಿಡಿಯೊವನ್ನು ತಮ್ಮ ಸೋಶಿಯಲ್ ಮಿಡಿಯಾ ಪೇಜ್‍ನಲ್ಲಿ ಹಂಚಿಕೊಂಡು ಮುಖ್ಯೋಪಾಧ್ಯಾಯ ಮಾಡಿದ ಕೆಲಸವನ್ನು ಹೊಗಳಿದ್ದಾರೆ. 

    ವೈರಲ್ ವಿಡಿಯೊದಲ್ಲಿ ಮುಖ್ಯೋಪಾಧ್ಯಾಯ ವಿದ್ಯಾರ್ಥಿಗಳ ದೊಡ್ಡ ಗುಂಪಿನ ಮುಂದೆ ವೇದಿಕೆಯ ಮೇಲೆ ನಿಂತು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಸತತ ಪ್ರಯತ್ನಗಳ ಹೊರತಾಗಿಯೂ ಅವರಿಗೆ ವಿದ್ಯಾರ್ಥಿಗಳ ಅಧ್ಯಯನವನ್ನು ಉತ್ತಮವಾಗಿಸಲು ಮತ್ತು ಶಿಸ್ತನ್ನು ಕಲಿಸಲು ಸಾಧ್ಯವಾಗಿಲ್ಲ ಎಂದು ಹೇಳಿ ಇಂತಹ ಶಿಕ್ಷೆಗೆ ಒಳಗಾಗಿದ್ದಾರೆ. ಹಾಗೇ ಉತ್ತಮ ಶೈಕ್ಷಣಿಕ ಫಲಿತಾಂಶಗಳಿಗಾಗಿ ಪೋಷಕರು ಶಿಕ್ಷಕರೊಂದಿಗೆ ಸಹಕರಿಸಬೇಕು ಎಂದು ಕರೆ ನೀಡಿದ್ದಾನೆ.

   “ನಾವು ನಿಮ್ಮನ್ನು ಹೊಡೆಯಲು ಅಥವಾ ಬೈಯಲು ಸಾಧ್ಯವಿಲ್ಲ. ನಾವು ನಮ್ಮ ಕೈಗಳನ್ನು ಕಟ್ಟಿ ಹಾಕಿಕೊಂಡಿದ್ದೇವೆ. ಹಾಗಾಗಿ ಎಷ್ಟೇ ಪ್ರಯತ್ನ ಮಾಡಿದರೂ, ವಿದ್ಯಾರ್ಥಿಗಳ ನಡವಳಿಕೆ, ಶೈಕ್ಷಣಿಕ, ಬರವಣಿಗೆ ಅಥವಾ ಓದುವ ಕೌಶಲ್ಯಗಳಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಸಮಸ್ಯೆ ನಿಮ್ಮದೋ ಅಥವಾ ನಮ್ಮದೋ? ಗೊತ್ತಿಲ್ಲ. ಆದರೆ ಸಮಸ್ಯೆ ನಮ್ಮದಾಗಿದ್ದರೆ ನಾನು ನಿಮ್ಮ ಮುಂದೆ ನಮಸ್ಕರಿಸುತ್ತೇನೆ. ನೀವು ಬಯಸಿದರೆ, ನಾನು ನನ್ನ ಕಿವಿಗಳನ್ನು ಹಿಡಿದುಕೊಂಡು ಬಸ್ಕಿ ಹೊಡೆಯುತ್ತೇನೆ” ಎಂದು ಹೇಳುತ್ತಾ ತಮ್ಮ ಮಾತಿನಂತೆ, ರಮಣ ಮೊದಲು ನೆಲದ ಮೇಲೆ ಮಲಗಿ ನಮಸ್ಕರಿಸಿ ನಂತರ ವಿದ್ಯಾರ್ಥಿಗಳ ಮುಂದೆ ಬಸ್ಕಿ ಹೊಡೆದಿದ್ದಾರೆ.

    ಆರಂಭದಲ್ಲಿ ಶಾಕ್‌ ಆದ ವಿದ್ಯಾರ್ಥಿಗಳು ಶೀಘ್ರದಲ್ಲೇ “ಬೇಡ, ಸರ್, ದಯವಿಟ್ಟು ಹಾಗೇ ಮಾಡಬೇಡಿ” ಎಂದು ಬೇಡಿಕೊಂಡಿದ್ದಾರೆ. ಆದರೆ ರಮಣ ಒಂದೇ ಬಾರಿಗೆ ಕನಿಷ್ಠ 50 ಬಾರಿ ಬಸ್ಕಿ ಹೊಡೆದಿದ್ದಾರೆ. ವಿಜಯನಗರಂನ ಜಿಲ್ಲಾ ಪರಿಷತ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಿಂತಾರಮಣ ಅವರ ಸ್ಫೂರ್ತಿದಾಯಕ ಕ್ರಮಗಳ ಬಗ್ಗೆ ಹಲವಾರು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

    ಮುಖ್ಯೋಪಾಧ್ಯಾಯರಿಗೆ ಸಹಾಯ ಮಾಡಲು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಬುದ್ಧಿವಂತ ವ್ಯಕ್ತಿಗಳಿಂದ ಕೂಡಿದ ಶಾಲಾ ಸಮಿತಿಯನ್ನು ರಚಿಸಲು ಒಬ್ಬ ನೆಟ್ಟಿಗರು ಶಿಫಾರಸು ಮಾಡಿದ್ದಾರೆ. ನಿಜ ಜೀವನದ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಮತ್ತು ಸರಿಯಾದ ವಿಧಾನವನ್ನು ಕೈಗೊಂಡರೆ ಅವರು ಆಲಿಸುವ ಮತ್ತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಸಾಧ್ಯತೆಯಿದೆ ಎಂದು ಅವರು ಒತ್ತಿ ಹೇಳಿದ್ದಾರೆ.