ನವದೆಹಲಿ:
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶುಕ್ರವಾರ ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರಗಾಮಿ ಗುಂಪಿನ ಮೂವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ತಿಳಿದು ಬಂದಿದೆ. ಲಾಹೋರ್ನಿಂದ ಸುಮಾರು 325 ಕಿಲೋಮೀಟರ್ ದೂರದಲ್ಲಿರುವ ಮಿಯಾನ್ವಾಲಿ ಜಿಲ್ಲೆಯಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ರೆಹಮಾನಿ ಖೇಲ್ ಮೋರ್ ಬಳಿಯ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಲು ಅವರು ಯೋಜಿಸುತ್ತಿದ್ದರು ಎಂದು ಪಾಕಿಸ್ತಾನದ ಪಂಜಾಬ್ ಭಯೋತ್ಪಾದನಾ ನಿಗ್ರಹ ಇಲಾಖೆ ಹೇಳಿಕೆ ತಿಳಿಸಿದೆ.
ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಟಿಡಿ ತಂಡವು ಅವರ ಅಡಗುತಾಣವನ್ನು ಸುತ್ತುವರೆದು ಭಯೋತ್ಪಾದಕರ ಮೇಲೆ ಗುಂಡು ಹಾರಿಸಿದಾಗ ಶರಣಾಗುವಂತೆ ಕೇಳಿಕೊಂಡಿತು. ಆದರೆ ಭಯೋತ್ಪಾದಕ ಗುಂಪು ಶರಣಾಗಲು ನಿರಾಕರಿಸಿದೆ. ನಂತರ ಕಾರ್ಯಾಚರಣೆಯಲ್ಲಿ ಸಮಯದಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಅವರ ಆರು ಸಹಚರರು ತಪ್ಪಿಸಿಕೊಂಡಿದ್ದಾರೆ. ಭಯೋತ್ಪಾದಕರ ಬಳಿಯಿಂದ ಎರಡು ರೈಫಲ್ಗಳು ಮತ್ತು ಹಲವಾರು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಯೋತ್ಪಾದಕರು ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಲು ಯೋಜಿಸಿದ್ದರು ಎಂದು ತಿಳಿದು ಬಂದಿದೆ. ತಪ್ಪಿಸಿಕೊಂಡ ಭಯೋತ್ಪಾದಕರನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ. 2022 ರಲ್ಲಿ ಸರ್ಕಾರ ಮತ್ತು ಟಿಟಿಪಿ ನಡುವಿನ ಕದನ ವಿರಾಮ ಮುರಿದು ಬಿದ್ದ ಬಳಿಕ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ. 2025 ರ ಜಾಗತಿಕ ಭಯೋತ್ಪಾದನಾ ಸೂಚ್ಯಂಕದಲ್ಲಿ ಪಾಕಿಸ್ತಾನ ಎರಡನೇ ಸ್ಥಾನದಲ್ಲಿದೆ.
ಬಲೂಚಿಸ್ತಾನದ ಕಿಲಾ ಅಬ್ದುಲ್ಲಾ ಜಿಲ್ಲೆಯ ಮಾರುಕಟ್ಟೆಯಲ್ಲಿ ಕಳೆದ ವಾರ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಫೋಟದ ನಂತರ, ಲೆವೀಸ್ ಸಿಬ್ಬಂದಿ ಮತ್ತು ಸ್ಥಳದಲ್ಲಿದ್ದ ಜನರು ಗಾಯಾಳುಗಳನ್ನು ತಕ್ಷಣವೇ ರಕ್ಷಿಸಿದರು, ನಂತರ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆರೋಗ್ಯ ಕೇಂದ್ರ ಚಮನ್ಗೆ ಸ್ಥಳಾಂತರಿಸಲಾಯಿತು. ಅಧಿಕಾರಿಯ ಪ್ರಕಾರ, ಅಧಿಕಾರಿಗಳು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಮಾರ್ಚ್ನಲ್ಲಿ, ಬಲೂಚಿಸ್ತಾನದ ಸಿಬಿ ಪ್ರದೇಶದ ಬಳಿ ಜಾಫರ್ ಎಕ್ಸ್ಪ್ರೆಸ್ ರೈಲನ್ನು ಅಪಹರಿಸಲಾಯಿತು, ಇದರ ಪರಿಣಾಮವಾಗಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 26 ಒತ್ತೆಯಾಳುಗಳು ಸಾವನ್ನಪ್ಪಿದ್ದರು. ಕಾರ್ಯಾಚರಣೆಯ ಸಮಯದಲ್ಲಿ ಇನ್ನೂ ಐದು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ಇತ್ತೀಚೆಗಷ್ಟೇ ಬಲೂಚಿಸ್ತಾನದ ಬಂಡುಕೋರರು ಪಾಕಿಸ್ತಾನದ ಸೇನೆ ಮೇಲೆ ಗ್ರೆನೇಡ್ ದಾಳಿ ನಡೆಸಿತ್ತು.
