ಬಿಜ್ನೋರ್:
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ವಿದ್ಯುತ್ ಕಡಿತದಿಂದ ಡಯಾಲಿಸಿಸ್ ಚಿಕಿತ್ಸೆಯ ಸಮಯದಲ್ಲಿ 26 ವರ್ಷದ ಸರ್ಫರಾಜ್ ಅಹ್ಮದ್ ಎಂಬ ಯುವಕ ಸಾವನ್ನಪ್ಪಿದ ಘಟನೆ ಆಘಾತಕಾರಿಯಾಗಿದೆ. “ವಿದ್ಯುತ್ ಕಡಿತವಾದಾಗ ಡಯಾಲಿಸಿಸ್ ಯಂತ್ರವು ಅರ್ಧದಲ್ಲೆ ನಿಂತು, ನನ್ನ ಮಗನ ಅರ್ಧದಷ್ಟು ರಕ್ತ ಯಂತ್ರದೊಳಗೆ ಸಿಲುಕಿತು. ಜನರೇಟರ್ ಆರಂಭಿಸುವಂತೆ ಕೇಳಿಕೊಂಡರೂ ಯಾರೂ ಸಹಾಯ ಮಾಡಲಿಲ್ಲ. ಕೆಲವೇ ಕ್ಷಣಗಳಲ್ಲಿ ನನ್ನ ಮಗ ಮೃತಪಟ್ಟ” ಎಂದು ಸರ್ಫರಾಜ್ ಅವರ ತಾಯಿ ತಿಳಿಸಿದ್ದಾರೆ.
ವೈದ್ಯಕೀಯ ಕೇಂದ್ರಗಳಲ್ಲಿ ಸಾಮಾನ್ಯವಾಗಿ ವಿದ್ಯುತ್ ಕಡಿತಕ್ಕೆ ಜನರೇಟರ್ ವ್ಯವಸ್ಥೆ ಇರುತ್ತದೆ. ಆದರೆ, ಬಿಜ್ನೋರ್ ಆಸ್ಪತ್ರೆಯ ಜನರೇಟರ್ಗೆ ಡೀಸೆಲ್ ಇರಲಿಲ್ಲ ಎಂದು ವರದಿಯಾಗಿದೆ. ಘಟನೆಯ ಸಮಯದಲ್ಲಿ ಆಸ್ಪತ್ರೆಯಲ್ಲಿ ಅಧಿಕೃತ ತಪಾಸಣೆಯೂ ನಡೆಯುತ್ತಿತ್ತು. ಆಸ್ಪತ್ರೆ ಸಿಬ್ಬಂದಿ, 2020ರಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಡಯಾಲಿಸಿಸ್ ಘಟಕವನ್ನು ನಿರ್ವಹಿಸುತ್ತಿರುವ ಸಂಜೀವನಿ ಎಂಬ ಕಂಪನಿಯು ಡೀಸೆಲ್ ಪೂರೈಕೆಯಲ್ಲಿ ವಿಫಲವಾದ ಕಾರಣ ಚಿಕಿತ್ಸೆಯನ್ನು ಮುಂದುವರಿಸಲಾಗಲಿಲ್ಲ ಎಂದು ಆರೋಪಿಸಿದ್ದಾರೆ.
ಮುಖ್ಯ ಜಿಲ್ಲಾಧಿಕಾರಿ ಪೂರ್ಣ ಬೊರಾ ತಪಾಸಣೆಯ ವೇಳೆ, ವಿದ್ಯುತ್, ಬೆಳಕು ಅಥವಾ ಫ್ಯಾನ್ಗಳಿಲ್ಲದೆ ಐದು ರೋಗಿಗಳು ಚಿಕಿತ್ಸೆಗಾಗಿ ಕಾಯುತ್ತಿರುವುದನ್ನು ಕಂಡಿದ್ದಾರೆ. ಜಿಲ್ಲಾಧಿಕಾರಿ ಜಸ್ಜಿತ್ ಕೌರ್ ಆಸ್ಪತ್ರೆಗೆ ಭೇಟಿ ನೀಡಿ, ಡಯಾಲಿಸಿಸ್ ಘಟಕದ ಎಲ್ಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. “ಘಟಕದಲ್ಲಿ ಕಳಪೆ ನಿರ್ವಹಣೆ ಮತ್ತು ಸ್ವಚ್ಛತೆಯ ಕೊರತೆ ಇದೆ. ಏಜೆನ್ಸಿಯ ವಿರುದ್ಧ ಪ್ರಕರಣ ದಾಖಲಾಗುತ್ತಿದೆ. ಇದರ ಜೊತೆಗೆ, ಕಪ್ಪು ಪಟ್ಟಿಗೆ ಸೇರಿಸಲಾಗುವುದು” ಎಂದು ಕೌರ್ ತಿಳಿಸಿದ್ದಾರೆ.
ವೈದ್ಯಕೀಯ ತಜ್ಞರ ಪ್ರಕಾರ, ಡಯಾಲಿಸಿಸ್ ಸಮಯದಲ್ಲಿ ಕೇವಲ 200-250 ಮಿಲಿ ರಕ್ತವು ಯಂತ್ರದಲ್ಲಿ ಸಂಚರಿಸುತ್ತದೆ. ಆದರೆ, ಆಕಸ್ಮಿಕ ವಿದ್ಯುತ್ ಕಡಿತವು ಚಿಕಿತ್ಸೆಯನ್ನು ವಿಳಂಬಗೊಳಿಸಿ, ಗಂಭೀರ ರೋಗಿಗಳ ಸ್ಥಿತಿಯನ್ನು ಅಸ್ಥಿರಗೊಳಿಸಬಹುದು ಎಂದು ತಿಳಿಸಿದ್ದಾರೆ. ಈ ಘಟನೆಯಿಂದ ಆಸ್ಪತ್ರೆಯ ನಿರ್ವಹಣೆಯ ಕೊರತೆ ಮತ್ತು ಖಾಸಗಿ ಏಜೆನ್ಸಿಯ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ತನಿಖೆಯಿಂದ ಜವಾಬ್ದಾರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.
